ಮೈಸೂರಿನಲ್ಲಿ ಬುಸ್ ಬುಸ್ ನಾಗಪ್ಪನ ಆಪರೇಷನ್ ಸಕ್ಸಸ್
ಮೈಸೂರು, ಮೇ 6:ಹಾವು ಎಂದರೆ ಎಲ್ಲರೂ ದೂರ ಸರಿಯುವುದು ವಾಡಿಕೆ. ಅದಕ್ಕೆ ಗಾಯವಾದರೂ ಸರಿ, ಏಟಾದರೂ ಸರಿ ಯಾರಪ್ಪಾ ಅದರ ಬಳಿ ಹೋಗುತ್ತಾರೆಂದು ಮೂಗು ಮುರಿಯುವವರೇ ಹೆಚ್ಚು. ಆದರೆ ಈಗ ಗಾಯಗೊಂಡ ನಾಗರಹಾವಿಗೆ ಆಪರೇಷನ್ ಮಾಡಲಾಗಿದ್ದು, ಇದು ಯಶಸ್ವಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಹೌದು, ಇದು ಅಚ್ಚರಿಯಾದರೂ ನಿಜ. ಗಾಯಗೊಂಡ ನಾಗರ ಹಾವಿಗೆ ಅರವಳಿಕೆ ಚುಚ್ಚುಮದ್ದನ್ನು ನೀಡಿ ಚಿಕಿತ್ಸೆ ಮಾಡಲಾಗಿದೆ. ಮೈಸೂರಿನ ಲಲಿತಾದ್ರಿಪುರದಲ್ಲಿ ಕಟ್ಟಡ ಕಾಮಗಾರಿ ವೇಳೆ ನಾಗರಹಾವೊಂದು ಗಾಯಗೊಂಡು ನಿತ್ರಾಣಗೊಂಡಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಕೆಂಪರಾಜು ಎಂಬುವವರು ನಾಗರಹಾವನ್ನು ರಕ್ಷಿಸಿದ್ದಾರೆ.

ಆ ನಂತರ ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಪಶು ಆಸ್ಪತ್ರೆಯ ವೈದ್ಯರಾದ ಯಶವಂತ್, ತಿಮ್ಮೇಗೌಡ ಎಂಬುವವರು ನಾಗರಹಾವಿಗೆ ಚಿಕಿತ್ಸೆ ನೀಡಿ ಯಶಸ್ವಿಗೊಳಿಸಿದ್ದಾರೆ. ಇದಾದ ಬಳಿಕ ಉರಗತಜ್ಞ ಕೆಂಪರಾಜು ಅವರು ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.












Click it and Unblock the Notifications