ಮೈಸೂರಿನಲ್ಲಿ ಅಪರೂಪದ ಶ್ವೇತ ವರ್ಣದ ಗೂಬೆ ಪತ್ತೆ: ಇದು ಮನೆಯಲ್ಲಿದ್ದರೆ ಅದೃಷ್ಟವಂತೆ!
ಮೈಸೂರು, ಅಕ್ಟೋಬರ್ 12: ನಾವೆಲ್ಲರೂ ಸಾಮಾನ್ಯವಾಗಿ ಕಂದು ಬಣ್ಣದ ಗೂಬೆಯನ್ನು ಕಂಡಿದ್ದೇವೆ. ಇದನ್ನು ಅಪಶಕುನದ ಸಂಕೇತ ಎನ್ನುವ ಭಾವನೆ ನಮ್ಮೆಲ್ಲರಲ್ಲೂ ಮೈದೆಳೆದಿದೆ. ಆದರೆ ಈ ಎಲ್ಲಾ ಗುಣಗಳಿಂದ ವಿಭಿನ್ನವಾದ ಗೂಬೆಯೊಂದು ಮೈಸೂರು ಜನರ ಕಣ್ಣಿಗೆ ಬಿದ್ದಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಚಿತ್ರವಾದ ಶ್ವೇತ ವರ್ಣದ ಗೂಬೆ ಪತ್ತೆಯಾಗಿದೆ. ಉರಗ ತಜ್ಞ ಸ್ನೇಕ್ ಶ್ಯಾಮ್ ಪುತ್ರ ಸೂರ್ಯ ಕಿರಣ್ ಅವರು, ಹದ್ದು ಗಿಡುಗಗಳ ಬಾಯಿಗೆ ತುತ್ತಾಗಲಿದ್ದ ಅಪರೂಪದ ಗೂಬೆಯನ್ನು ರಕ್ಷಿಸಿದ್ದಾರೆ.
ಮೈಸೂರಿನ ಕೆ.ಆರ್ ಮೊಹಲ್ಲಾದಲ್ಲಿ ವಿಚಿತ್ರವಾದ ಗೂಬೆ ನೋಡಿದ ಜನರು ಸೂರ್ಯ ಕಿರಣ್ ಗೆ ಫೋನ್ ಮಾಡಿದ್ದಾರೆ. ಆತ ಸ್ಥಳಕ್ಕೆ ಬಂದು ನೋಡಿದಾಗ ಅದು ಹೆದರಿ ಭಯದಿಂದ ಕೂತಿತ್ತು. ತರುವಾಯ ಅದನ್ನು ಸೂರ್ಯ ಕಿರಣ್ ರಕ್ಷಿಸಿ, ಆರೈಕೆ ಮಾಡಿದರು.
ಗೂಬೆ ನಿಶಾಚಾರಿ, ರಾತ್ರಿ ವೇಳೆ ಮಾತ್ರ ಸಂಚರಿಸುವ ಒಂದು ಪಕ್ಷಿ. ಇಲಿ, ಕೀಟಗಳನ್ನು ತಿನ್ನುತ್ತದೆ. ಅಪರೂಪದಲ್ಲಿ ಅಪರೂಪವಾದ ಈ ಗೂಬೆಯ ಹೆಸರು ಕೊಟ್ಟಿಗೆಯ ಗೂಬೆ ಅಂತ. ತುಂಬಾ ವಿರಳವಾದ ಈ ಗೂಬೆ ಮೈಸೂರಿಗೆ ಬಂದ ಬಗೆ ಹೇಗೆ ಎಂಬುವುದು ಪ್ರಶ್ನೆಯಾಗಿದೆ.
ಬಿಳಿ ಬಣ್ಣದ ಗೂಬೆ ಕಂದು ಬಣ್ಣದ ಗೂಬೆಗಿಂತ ಚಿಕ್ಕ ಗಾತ್ರದಾಗಿದ್ದು, ಇಲಿ, ಏಡಿ, ಸಣ್ಣ ಪುಟ್ಟ ಕೀಟಗಳನ್ನು ಹಿಡಿದು ತಿನ್ನುತ್ತಾ ಬದುಕುತ್ತವೆ. ಸಾಮಾನ್ಯವಾಗಿ ರೈತರು ಇವುಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಕಾರಣ ಇವು ಒಂದು ರೀತಿಯಲ್ಲಿ ರೈತರಿಗೆ ಪರೋಪಕಾರಿ ಎಂದರೆ ತಪ್ಪಾಗುವುದಿಲ್ಲ.
ಗೂಬೆ ಅಪಶಕುನದ ಸಂಕೇತ, ಇದನ್ನು ನೋಡಿ ಹೋದರೆ ಯಾವ ಕೆಲಸ ಕಾರ್ಯಗಳು ಸಿದ್ಧಿಸುವುದಿಲ್ಲ ಎಂಬ ಮಾತಿದೆ. ಇದರಲ್ಲಿ ಆದರೆ ಬಿಳಿ ಬಣ್ಣದ ಗೂಬೆಗಳು ಮನೆಯಲ್ಲಿದ್ದರೆ ಅದೃಷ್ಟ ಒಲಿಯುತ್ತದೆ ಎಂಬುದು ಜನರ ನಂಬಿಕೆ.
ಅದೃಷ್ಟ ಎಂಬ ಮಾತು ಕೇಳಿದ್ದೇ ತಡ ಬಿಳಿ ಗೂಬೆಗಳನ್ನು ಹಿಡಿದು ಮಾರುವ ಜಾಲವೇ ಈ ಹಿಂದೆ ಕೊಡಗಿನಲ್ಲಿ ಕಾಣಿಸಿಕೊಂಡಿತ್ತು. ಕೇರಳದಿಂದ ಬಂದ ತಂಡವೊಂದು ಎರಡು ತಲೆ ಹಾವು ಮತ್ತು ಗೂಬೆಗೆ ಬೇಡಿಕೆಯಿಟ್ಟು ಜನರನ್ನು ಅಡ್ಡದಾರಿಗೆ ಎಳೆಯುವ ಯತ್ನವನ್ನು ಮಾಡಿದ್ದರು. ಈ ಪ್ರಕರಣದಲ್ಲಿ ಕೆಲವರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.