ಮೈಸೂರು: ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ, ಜೆಡಿಎಸ್ ಮುಖಂಡ ಸಾವು
ಮೈಸೂರು, ಜುಲೈ 13 : ಕೋಳಿ ಜಗಳಕ್ಕೆ ಕಾಂಗ್ರೆಸ್ ನ ಇಬ್ಬರು ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಮೈಸೂರು ತಾಲೂಕು ಬೋರೆ ಆನಂದೂರು ಗ್ರಾಮದ ಮಂಜುನಾಥ್ ಇಂದು (ಗುರುವಾರ) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಲ್ಲೆ ಮಾಡಿದ ಪುನೀತ್ ಮತ್ತು ನಾರಾಯಣ್ ಇದೀಗ ನಾಪತ್ತೆಯಾಗಿದ್ದಾರೆ.

ಏನಿದು ಘಟನೆ?
ಮಂಜುನಾಥ್ ಸ್ಥಳೀಯ ಜೆಡಿಎಸ್ ಮುಖಂಡರಾಗಿದ್ದು, ಪುನೀತ್ ಮತ್ತು ನಾರಾಯಣ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಶುಕ್ರವಾರ ಪುನೀತ್ ಮತ್ತು ನಾರಾಯಣ್ ಗ್ರಾಮದಲ್ಲಿ ಕೋಳಿಯೊಂದರ ಮೇಲೆ ಬೈಕ್ ಮೇಲೆ ಹರಿಸಿದ್ದರು. ಈ ವೇಳೆ ಮಂಜುನಾಥ್ ಇಬ್ಬರಿಂದಲೂ ದಂಡ ಕಟ್ಟಿಸಿಕೊಂಡಿದ್ದರು.
ಈ ಹಿಂದೆ ಇವರ ನಡುವೆ ಜಿಲ್ಲಾ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ವೈಷಮ್ಯದ ಹೊಗೆಯಾಡುತ್ತಿತ್ತು. ದಂಡ ಕಟ್ಟಿದ ಬಳಿಕ ಆಕ್ರೋಶಗೊಂಡ ಪುನೀತ್ ಮತ್ತು ನಾರಾಯಣ್ ಮಾರಕಾಸ್ತ್ರಗಳಿಂದ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ.
ತೀವ್ರ ಗಾಯಗೊಂಡಿದ್ದ ಮಂಜುನಾಥ್ ರನ್ನು ಮೈಸೂರಿನ ಬೃಂದಾವನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಮಂಜುನಾಥ್ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಾದ ಪುನೀತ್ ಮತ್ತು ನಾರಾಯಣ್ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.












Click it and Unblock the Notifications