ಮೈಸೂರಿನಲ್ಲಿ ಮರದ ಕೊಂಬೆ ತಲೆಯ ಮೇಲೆ ಬಿದ್ದು ವ್ಯಕ್ತಿ ಸಾವು
ಮೈಸೂರು,ಸೆಪ್ಟೆಂಬರ್ 15: ವಿಧಿಯಾಟ ಬಲ್ಲವರ್ಯಾರು ಎಂಬ ಮಾತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಇಂದು ಬಸ್ ಸ್ವಚ್ಛಗೊಳಿಸಿ ನಿಂತಿದ್ದ ವ್ಯಕ್ತಿಯೋರ್ವರ ತಲೆಯ ಮೇಲೆ ಮರದ ರೆಂಬೆಯೊಂದು ಮುರಿದು ಬಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದಿದ್ದು ಮೈಸೂರಿನಲ್ಲಿ.
ಮೃತರನ್ನು ರಮ್ಮನಹಳ್ಳಿ ನಿವಾಸಿ ಮಂಚಯ್ಯ(45)ಎಂದು ಗುರುತಿಸಲಾಗಿದೆ. ಇವರು ಎಸ್ ಎಸ್ ಟಿ ಹೆಸರಿನ ಬಸ್ಸಿನಲ್ಲಿ ಕ್ಲೀನರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಂದು ಬೆಳಿಗ್ಗೆ ವುಡ್ ಲ್ಯಾಂಡ್ ಚಿತ್ರಮಂದಿರದ ಎದುರು ವಾಹನವನ್ನು ಸ್ವಚ್ಛಗೊಳಿಸುತ್ತ ನಿಂತಿದ್ದರು. ಇದೇ ವೇಳೆ ಅಲ್ಲಿಯೇ ಇದ್ದ ಹಳೆಯ ಮರದ ರೆಂಬೆಯೊಂದು ಮುರಿದು ಯಮರೂಪಿಯಾಗಿ ಅವರ ತಲೆಯ ಮೇಲೆ ಬಿದ್ದಿದೆ.

ತಕ್ಷಣ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications