ಮೈಸೂರಿನಲ್ಲಿ ಮಗಳಿಗೇ ಅಶ್ಲೀಲ ವಿಡಿಯೋ ತೋರಿಸಿದ ವಿಕೃತ ತಂದೆ!
ಪತಿ ಕುಡಿತಕ್ಕೆ ದಾಸನಾಗಿದ್ದು, ತನ್ನ ಮಗುವಿನ ಮೇಲೆ ವಿಕೃತವಾಗಿ ವರ್ತಿಸುತ್ತಿದ್ದಾನೆ. ಕೇಳಿದರೆ ಹಲ್ಲೆ ಮಾಡಲು ಬರುತ್ತಾನೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು, ಮೇ.8 : ತಂದೆ ಮಕ್ಕಳಿಗೆ ಆದರ್ಶಪ್ರಾಯವಾಗಿರಬೇಕು. ಹಾಗಾದಾಗ ಮಾತ್ರ ಆತ ತಂದೆಯೆನಿಸಿಕೊಳಲು ಸಾಧ್ಯ. ಆದರೆ ಇಂಥ ತಂದೆಯರೂ ಇರುತ್ತಾರಾ ಎಂದು ಪ್ರಶ್ನಿಸುವ, ಅಸಹ್ಯ ಪಟ್ಟುಕೊಳ್ಳುವ ವಿಲಕ್ಷಣ ಘಟನೆಯೊಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಪತಿ ವಿರುದ್ಧ ಪತ್ನಿ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಂಭತ್ತು ವರ್ಷದ ಹಿಂದೆ ಮದುವೆಯಾದ ಈ ದಂಪತಿಗೆ ಏಳು ವರ್ಷದ ಮಗಳಿದ್ದು, ಸ್ನಾನ ಮಾಡಿ ಹೊರಬಂದ ಆಕೆಯ ಅಪ್ಪ ನಗ್ನವಾಗಿ ಆಕೆಯ ಮುಂದೆ ನಿಂತಿದ್ದು, ಅಶ್ಲೀಲ ವಿಡಿಯೋಗಳನ್ನು ತೋರಿಸುತ್ತಿದ್ದ. ಇದರಿಂದ ಭಯಗೊಂಡ ಆಕೆ ಕಿರುಚುವುದು ಕೇಳಿ ನಾನು ಹೊರಬಂದಾಗ ವಿಷಯ ಬಹಿರಂಗಗೊಂಡಿದೆ. ಪತಿ ಕುಡಿತಕ್ಕೆ ದಾಸನಾಗಿದ್ದು, ತನ್ನ ಮಗುವಿನ ಮೇಲೆ ವಿಕೃತವಾಗಿ ವರ್ತಿಸುತ್ತಿದ್ದಾನೆ. ಕೇಳಿದರೆ ಹಲ್ಲೆ ಮಾಡಲು ಬರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡಿರುವ ಬೆಟ್ಟದಪುರ ಪೊಲೀಸರು, ಕಾಮುಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.[ಹೀಗೂ ಉಂಟೇ : ಮೈಸೂರಿನಲ್ಲಿ ಸತ್ತಿದ್ದ ಮಗು 'ಹುಟ್ಟಿದ್ದು' ಹೇಗೆ?]

ಚಲಿಸುತ್ತಿದ್ದ ರೈಲಿಗೆ ಸಿಲುಕಿ ವಿದ್ಯಾರ್ಥಿ ಸಾವು
ರೈಲಿಗೆ ಸಿಲುಕಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಮೃತನನ್ನು ಶಿವಮೊಗ್ಗದ ಗೊಂದಿಚೆಟ್ಟನಹಳ್ಳಿ ನಿವಾಸಿ ಕಿರಣ್(18) ಎಂದು ಗುರುತಿಸಲಾಗಿದೆ. ಶ್ರೀರಂಗಪಟ್ಟಣ ಬೆಳಗೋಳ ರೈಲ್ವೆ ಹಳಿಯಲ್ಲಿ ಶವ ಪತ್ತೆಯಾಗಿದೆ. ಶಿವಮೊಗ್ಗದಿಂದ ಮೈಸೂರಿಗೆ ಬಂದಿದ್ದ ಕಿರಣ್, ಬೆಳಗೋಳದ ರೈಲ್ವೆ ಹಳಿಯ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರದಿಂದ ಬಿದ್ದು ವ್ಯಕ್ತಿ ಸಾವು
ಎಚ್.ಡಿ.ಕೋಟೆ ತಾಲೋಕಿನ ಬೋಚಿಕಟ್ಟೆ ಬಳಿ ಹುಣಸೇ ಹಣ್ಣು ಕೀಳುವಾಗ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸಾವನ್ನಪ್ಪಿದ್ದಾರೆ . ಮೃತರನ್ನು ಬಸವರಾಜು (30) ಎಂದು ಗುರುತಿಸಲಾಗಿದೆ. ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಹಣಕ್ಕಾಗಿ ಮೈಸೂರಿನಲ್ಲಿ ವೃದ್ಧೆಯ ಕೊಲೆ]
ಮೈದುನನ ಕಾಟ ತಾಳಲಾರದೇ ಅತ್ತಿಗೆ ಆತ್ಮಹತ್ಯೆ
ಮೈದುನನ ಕಿರುಕುಳ ತಾಳಲಾರದೇ ಅತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಮೃತಳನ್ನು ಪುಷ್ಪ (35) ಎಂದು ಗುರುತಿಸಲಾಗಿದೆ. ಎಚ್.ಡಿ.ಕೋಟೆ ತಾಲೂಕಿನ ಚಾಮಲಾಪುರದಲ್ಲಿ ಘಟನೆ ನಡೆದಿದ್ದು, ಸರಗೂರು ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ.
ಸಾಲ ಬಾಧೆ: ಯುವಕ ನೇಣಿಗೆ ಶರಣು
ಸಾಲ ಮಾಡಿ, ತೀರಸಲಾಗದೆ ಮನನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನರಸೀಪುರ ತಾಲೂಕಿನ ಯಡ್ತೊರೆಯಲ್ಲಿ ನಡೆದಿದೆ.
ಮೃತನನ್ನು ಶಂಕರ್(26) ಎಂದು ಗುರುತಿಸಲಾಗಿದೆ. ಈತ ತನ್ನ ರೂಮಿನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವ ದಂಪತಿ ನೇಣಿಗೆ ಶರಣು
ಏಪ್ರಿಲ್ 14ರಂದು ವಿವಾಹವಾದ ನವದಂಪತಿ ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತರನ್ನು ಭದ್ರಾವತಿಯ ಆಶಾಲತಾ ಹಾಗೂ ಚಿತ್ರದುರ್ಗ ಮೂಲದ ವೀರೇಶ್ ಎಂದು ಗುರುತಿಸಲಾಗಿದೆ. ಮೈಸೂರಿನ ಜೆ.ಎಸ್.ಎಸ್.ಲೇಔಟ್ ನ ಎರಡನೇ ಹಂತದಲ್ಲಿ ವಾಸಿಸುತ್ತಿದ್ದ ವೀರೇಶ್ ಕುಪ್ಪೆಯಲ್ಲಿ ಹೆಲ್ತ್ ಇನ್ಸಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಭಾನುವಾರ ಮುಂಜಾನೆ ವೀರೇಶ್ ಸಂಬಂಧಿಯೋರ್ವರಿಗೆ ಕರೆ ಮಾಡಿ ನಿಮ್ಮ ಅತ್ತಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದರು. ಆದರೆ ಮನೆಗೆ ಬಂದು ನೋಡುವಷ್ಟರಲ್ಲಿ ಇಬ್ಬರೂ ನೇಣಿಗೆ ಶರಣಾಗಿದ್ದರು ಎಂದು ಸಂಬಂಧಿಗಳು ತಿಳಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ನಿಖರವಾಗಿ ತಿಳಿದುಬಂದಿಲ್ಲ.












Click it and Unblock the Notifications