ಹುಣಸೂರು: ಅಕ್ಕಿಚೀಲಗಳ ಅಡಿ ಸಿಲುಕಿ ಬೈಕ್ ಸವಾರ ಸಾವು
ಮೈಸೂರು, ಜನವರಿ, 29: ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿಯಲ್ಲಿ ಇದ್ದ ಅಕ್ಕಿ ಚೀಲಗಳು ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಣಸೂರಿನ ಮೈಸೂರು-ಮಂಗಳೂರು ರಾಜ್ಯಹೆದ್ದಾರಿ ಬಳಿ ಗುರುವಾರ ಸಂಜೆ ಸಂಭವಿಸಿದೆ.
ಮೂಲತ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಅನ್ವರ್(16)ಮೃತಪಟ್ಟ ಬೈಕ್ ಸವಾರ. ಈತ ಪ್ರಸ್ತುತ ಪಟ್ಟಣದ ಉದಯನಗರ ಬಡಾವಣೆಯಲ್ಲಿ ಗುಜರಿ ಆಯ್ದು ಅಂಗಡಿಗಳಿಗೆ ನೀಡುವ ವೃತ್ತಿ ಮಾಡುತ್ತಿದ್ದ. ಬೈಕಿನಲ್ಲಿದ್ದ ಸಹ ಪ್ರಯಾಣಿಕ ರಾಜೇಸಾಬ್ ಪ್ರಾಣಾಪಾಯದಿಂದ ಪಾರಾಗಿದ್ದು, ಲಾರಿಚಾಲಕ ಪರಾರಿಯಾಗಿದ್ದಾನೆ.[ಮಂಡ್ಯ: ಚಾಲಕನ ನಿರ್ಲಕ್ಷ್ಯದಿಂದ ಕೆಎಸ್ಸಾರ್ಟಿಸಿ ಬಸ್ ನದಿಗೆ ಬಿತ್ತೇ?]

ಕೆ.ಆರ್.ನಗರದ ನೇಮತ್ ಎಂಬುವರರಿಗೆ ಸೇರಿದ್ದ ಲಾರಿ ಪಡಿತರ ಅಕ್ಕಿಯನ್ನು ಮೈಸೂರಿನಿಂದ ಮಡಿಕೇರಿಗೆ ಸಾಗಿಸುತ್ತಿತ್ತು. ಬೈಪಾಸ್ಸಿನ ಅನ್ನಪೂರ್ಣ ಹೋಟೆಲ್ ಬಳಿ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯಿತು.
ಇದೇ ಸಂದರ್ಭದಲ್ಲಿ ತನ್ನಲ್ಲಿದ್ದ ಗುಜರಿ ಸಾಮಾನುಗಳನ್ನು ಹೋಟೆಲ್ ಮುಂಭಾಗದ ಗುಜರಿ ಅಂಗಡಿಗೆ ನೀಡಲು ಹೋಗುತ್ತಿದ್ದ ಅನ್ವರ್ ಲಾರಿ ಅಡಿಗೆ ಸಿಲುಕಿಕೊಂಡಿದ್ದು, ಆತನ ಮೇಲೆ ಅಕ್ಕಿ ಮೂಟೆಗಳು ಬಿದ್ದಿವೆ. ಕೂಡಲೇ ಅಕ್ಕಿ ಮೂಟೆಯನ್ನು ತೆಗೆದು ಸಾರ್ವಜನಿಕರು ರಕ್ಷಿಸಲು ಮುಂದಾದರಾದರೂ ಅಷ್ಟರಲ್ಲೇ ಆತ ಸಾವನ್ನಪ್ಪಿದ್ದನು.[ಅನ್ನಭಾಗ್ಯಕ್ಕೆ ಕಳಪೆ ಅಕ್ಕಿ ಬರೋದು ಹೇಗೆ ಗೊತ್ತಾ?]
ಗಾಯಗೊಂಡ ಹಿಂಬದಿ ಸವಾರ ರಾಜೇಸಾಬ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪಟ್ಟಣ ಠಾಣೆ ಪಿಎಸ್ಐ ಷಣ್ಮುಗಂ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications