ಮೂಳೆ ಕ್ಯಾನ್ಸರ್ ಇದ್ದ 9ರ ಬಾಲಕಿಗೆ ಮೈಸೂರಿನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
ಮೈಸೂರು, ಫೆಬ್ರವರಿ 08: "ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ 9 ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಅತ್ಯುತ್ತಮ ವೈದ್ಯಕೀಯ ಸಾಧನೆಗಳಿಗೆ ಮತ್ತೊಂದು ಗರಿ ಸೇರಿಸಿದೆ" ಎಂದು ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಡಾ.ಸುಮನ್ ಎಂ.ಬಿ ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವೈದ್ಯರು ಎಕ್ಸ್ಟ್ರಾಕಾರ್ಪೊರಿಯಲ್ ರೇಡಿಯೋಥೆರಪಿ ಎಂಬ ಅತ್ಯಾಧುನಿಕ ವೈದ್ಯಕೀಯ ಕಾರ್ಯವಿಧಾನದ ಮೂಲಕ ಮಗುವಿಗೆ ಚಿಕಿತ್ಸೆ ನೀಡಿದ್ದು, ಈ ಕಾರ್ಯ ವಿಧಾನವು ಮಗುವನ್ನು ಕ್ಯಾನ್ಸರ್ ನಿಂದ ಗುಣಪಡಿಸಿದೆ, ಮಾತ್ರವಲ್ಲ ಮಗುವು ತನ್ನ ನೈಸರ್ಗಿಕ ಮೂಳೆಯನ್ನು ಉಳಿಸಿಕೊಳ್ಳಲು ಸಹ ಅವಕಾಶ ಕಲ್ಪಿಸಿತು. ಈ ಒಂದು ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಎಕ್ಸ್ಟ್ರಾಕಾರ್ಪೊರಿಯಲ್ ರೇಡಿಯೋಥೆರಪಿ ಕಾರ್ಯ ವಿಧಾನವನ್ನು ಅನುಸರಿಸಿದ ಮೈಸೂರಿನ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ ಎಂದು ತಿಳಿಸಿದರು.
ವ್ಯಕ್ತಿಯ ಕುತ್ತಿಗೆಯ ಭಾಗದಲ್ಲಿ ಸ್ತನ; ವೈದ್ಯಲೋಕಕ್ಕೆ ಅಚ್ಚರಿ
3ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಸುಮಾರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಬಲಗಾಲಿನಲ್ಲಿ ನೋವು ಮತ್ತು ಊತದ ಸಮಸ್ಯೆಯಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಪರೀಕ್ಷಿಸಿದಾಗ, ಬಾಲಕಿ ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿರುವುದು ಖಾತ್ರಿಯಾಗಿತ್ತು. ಆರಂಭದಲ್ಲಿ ನಿಯೋಡ್ಕುವಂಟ್ ಕೀಮೋಥೆರಪಿ ಮಾಡಲಾಗಿದ್ದು, ಕೀಮೋಥೆರಪಿ ಅವಳ ಸ್ಥಿತಿಗೆ ಶಾಶ್ವತ ಪರಿಹಾರವಲ್ಲದ್ದರಿಂದ ಕ್ಯಾನ್ಸರ್ ಗಡ್ಡೆಯನ್ನು ತೆಗೆದುಹಾಕಲು ವೈದ್ಯರು ಸಲಹೆ ನೀಡಿದರು. ಅವರು ಎಕ್ಸ್ಟ್ರಾಕಾರ್ಪೊರಿಯಲ್ ರೇಡಿಯೋಥೆರಪಿ ವಿಧಾನವನ್ನು ಶಿಫಾರಸು ಮಾಡಿದರು.
ಈ ಕಾರ್ಯವಿಧಾನದಲ್ಲಿ ಕ್ಯಾನ್ಸರ್ ಪೀಡಿತ ಮೂಳೆಯನ್ನು ದೇಹದಿಂದ ಬೇರ್ಪಡಿಸಿದ ನಂತರ ಬರಡಾದ ರೀತಿಯಲ್ಲಿ ವಿಕಿರಣಕ್ಕೆ ಒಳಪಡಿಸಲಾಗುತ್ತದೆ. ಕ್ಯಾನ್ಸರ್ ಕೋಶಗಳು ನಾಶವಾದ ನಂತರ ಅದೇ ಮೂಳೆಯನ್ನು ಅದರ ಸ್ಥಾನದಲ್ಲಿ ಮರು ಜೋಡನೆ ಮಾಡಲಾಗುತ್ತದೆ. ಬಾಲಕಿಗೆ ನೀಡಿದ ಚಿಕಿತ್ಸೆಯು ಫಲಕಾರಿಯಾಗಿದೆ. ಚಿಕಿತ್ಸೆಯ ಶಿಷ್ಟಾಚಾರದ ಪ್ರಕಾರ ಚಿಕಿತ್ಸೆಯ ನಂತರ ರೋಗಿಗೆ ಕೀಮೋಥೆರಪಿ ಚಿಕಿತ್ಸೆ ನೀಡಬೇಕಾಗುತ್ತದೆ. ಬಾಲಕಿ ಅದನ್ನು ಪಡೆಯುತ್ತಿದ್ದಾಳೆ ಎಂದು ಮಾಹಿತಿ ನೀಡಿದರು.