ದಸರಾ ಫಲ-ಪುಷ್ಪ ಪ್ರದರ್ಶನದಲ್ಲಿ ಕಂಗೊಳಿಸಲಿದೆ 75 ಸಾವಿರ ಗಿಡಗಳು
ಮೈಸೂರು, ಸೆಪ್ಟೆಂಬರ್ 9 : ಸೆ.30 ರಿಂದ ಅ.9ವರೆಗೆ ನಾಡಹಬ್ಬ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 75 ಸಾವಿರ ಹೂವಿನ ಗಿಡಗಳನ್ನು ಈ ಬಾರಿ ಪ್ರದರ್ಶಿಸಲಾಗುತ್ತಿದೆ.
ದಸರೆಗೆ 15 ಲಕ್ಷ ಜನ ಸೇರುವ ನಿರೀಕ್ಷೆ; ಸಜ್ಜಾಗುತ್ತಿದೆ ಖಾಕಿ ಪಡೆ
ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರ ಸ್ಮರಣೆಯಲ್ಲಿ ಫಲಪುಷ್ಪ ಆಯೋಜಿಸಲಾಗುತ್ತಿದೆ. ಅಲ್ಲದೇ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ಭರದ ಸಿದ್ಧತೆ ನಡೆಸಲಾಗುತ್ತಿದೆ. ನಗರದ 5 ಉದ್ಯಾನಗಳ ನರ್ಸರಿಗಳಲ್ಲಿ ಬೆಳೆದಿರುವ ಗಿಡಗಳನ್ನು ಕುಪ್ಪಣ್ಣ ಉದ್ಯಾನಕ್ಕೆ ತಂದು ಪ್ರದರ್ಶಿಸಲಾಗುವುದು. ಪ್ರದರ್ಶನದ ಪರಿಕಲ್ಪನೆ ಇನ್ನೂ ಸಿದ್ಧವಾಗಿಲ್ಲ ಎಂದು ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಹಬೀಬಾ ನಿಶಾಂತ್ ತಿಳಿಸಿದರು.
ಕಳೆದ ಬಾರಿ ಗಾಜಿನ ಮನೆಯಲ್ಲಿ ಹೂವುಗಳಿಂದ ನಿರ್ಮಿಸಿದ್ದ ಲೋಟಸ್ ಮಹಲ್ ಆಕರ್ಷಣೀಯ ಕೇಂದ್ರಬಿಂದುವಾಗಿತ್ತು. ಹೂಗಳಲ್ಲಿ ರಚಿಸಿರುವ ಅಶೋಕಸ್ತಂಭ, ಅಮರ್ ಜವಾನ್ ಸ್ತಂಭ, ಕಾಫಿ ಮಗ್-ಲೋಟ, ಆನೆಗಾಡಿ, ಡಾಲ್ಫಿನ್ಸ್, ಪೆಂಗ್ವಿನ್ ಕಲಾಕೃತಿ ಜನರ ಕಣ್ಮನ ಸೆಳೆದಿದ್ದವು. ಆದರೆ ಈ ಬಾರಿ ಹೊಸ- ಹೊಸ ಹೂವಿನ ವಿಧಾನಗಳು ನೋಡುಗರ ಮನತಣಿಸಲಿದೆ.
ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನ ಟೆಂಡರ್ ದಾಖಲೆಯ ಮಟ್ಟಕ್ಕೆ ಹರಾಜಾಗಿದೆ. ಹರಾಜಿಗೆ ಇಲಾಖೆ 90 ಲಕ್ಷ ರೂ. ನಿಗದಿಪಡಿಸಿತ್ತು. ಹೆಚ್ಚಿನ ಮಂದಿ ಗುತ್ತಿಗೆದಾರರು ಭಾಗವಹಿಸಿದ್ದರಿಂದ ಸ್ಪರ್ಧೆ ಏರ್ಪಟ್ಟು 1.13 ಕೋಟಿ ರೂ.ಗೆ ಹರಾಜಾಗಿದೆ. ಇದರಿಂದ ಇಲಾಖೆಗೆ ಹೆಚ್ಚುವರಿಯಾಗಿ 23 ಲಕ್ಷ ರೂ. ಆದಾಯ ಬಂದಿದೆ. ಇದರಿಂದ ಸೆ.29ಕ್ಕೆ ಆರಂಭಗೊಳ್ಳುವ ಫಲಪುಷ್ಪ ಪ್ರದರ್ಶನ 15 ದಿನಗಳ ಕಾಲ ಅಂದರೆ ಅ.13ರವರೆಗೆ ನಡೆಯುವ ಬದಲು ಸೆ.29ರಿಂದ ಅ.9ರವರೆಗೆ 11 ದಿನಗಳ ಕಾಲ ನಡೆಯಲಿದೆ.
ಆರು ತಿಂಗಳಿನಿಂದಲೂ ವಿವಿಧ ರೀತಿಯ ಗಿಡಗಳನ್ನು ಬೆಳೆಸಲು ತಯಾರಿ ನಡೆಸಲಾಗಿದ್ದು ಈ ಕಾರ್ಯದಲ್ಲಿ ಸುಮಾರು 70ಕ್ಕೂ ಹೆಚ್ಚು ಸಿಬ್ಬಂದಿ ತೊಡಗಿದ್ದಾರೆ. ಜಯಚಾಮರಾಜೇಂದ್ರ ಒಡೆಯರ ಜನ್ಮಶತಾಬ್ಧಿ ಹಿನ್ನಲೆ ಹೂಗಳಿಂದ ಒಡೆಯರ್ ಪ್ರತಿಮೆ ನಿರ್ಮಾಣಕ್ಕೆ ಇಲಾಖೆ ಚಿಂತನೆ ನಡೆಸಿದೆ.
ಇನ್ನು ಈ ದಸರಾ ಫಲ-ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಮಕ್ಕಳ ಉದ್ಯಾನವನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತೋಟಗಾರಿಕಾ ಇಲಾಖೆ ಫಲಪುಷ್ಪ ಪ್ರದರ್ಶನ ನಡೆಯುವ ಕುಪ್ಪಣ್ಣ ಪಾರ್ಕ್ ಪ್ರವಾಸಿ ತಾಣವಾಗಿಸಲು ಚಿಂತನೆ ಮಾಡಿದ್ದು ಸಂಗೀತ ಕಾರಂಜಿಯನ್ನ ಪ್ರತಿ ವಾರಾಂತ್ಯದಲ್ಲಿ ವರ್ಷ ಪೂರ್ತಿ ನಡೆಸಲು ಆಲೋಚಿಸಿದೆ.