ಗೋಹತ್ಯೆ ನಿಷೇಧ: ಸಂತರು ಸೇರಿ 50ಕ್ಕೂ ಹೆಚ್ಚು ಮಂದಿ ರಕ್ತದಲ್ಲಿ ಪತ್ರ
ಮೈಸೂರು, ಜನವರಿ 20 : ಗೋಹತ್ಯೆ ನಿಷೇಧಿಸುವಂತೆ ಒತ್ತಾಯಿಸಿ ಮೈಸೂರು ಜಿಲ್ಲೆಯ ಐವರು ಸ್ವಾಮೀಜಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಇಲ್ಲಿನ ಅಗ್ರಹಾರದ ಹೊಸಮಠದಲ್ಲಿ ಶನಿವಾರ ಭಾರತೀಯ ಗೋ ಪರಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳು, ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ತರಲು ರಕ್ತದಲ್ಲಿ ಪತ್ರ ಬರೆದಿದ್ದಾರೆ.
ರಾಮಚಂದ್ರಾಪುರ ಮಠದ ಭಾರತೀಯ ಗೋ ಪರಿವಾರದ ವತಿಯಿಂದ ಮೈಸೂರಿನ ಹೊಸಮಠದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಹಾಗೂ ದೇಸಿ ಗೋ ಸಂತತಿಗಳ ಸಂರಕ್ಷಣೆ ಯೋಜನೆ ಜಾರಿಗೆ ತರಲು ಆಗ್ರಹಿಸಿ ಸ್ವ ಲಿಖಿತ ಅಭಯಾಕ್ಷರ ಅಭಿಯಾನ ಕಾರ್ಯಕ್ರಮಕ್ಕೆ ನಗರದಲ್ಲಿನ ಸಂತರು ತಮ್ಮ ರಕ್ತದಲ್ಲಿ ಅರ್ಜಿ ಬರೆಯುವ ಮೂಲಕ ಚಾಲನೆ ನೀಡಿದರು.

ತ್ರಿಪುರಭೈರವಿ ಮಠದ ಕೃಷ್ಣಮೋಹನ ನಂದಗಿರಿ ಸ್ವಾಮೀಜಿ, ನೀಲಕಂಠ ಮಠದ ಸಿದ್ದಮಲ್ಲ ಸ್ವಾಮೀಜಿ, ಸವಿತಾ ಸಮಾಜದ ಶ್ರೀಕರ ಬಸವಾನಂದ ಸ್ವಾಮೀಜಿ, ಮೇಲುಕೋಟೆಯ ವಂಗೀಪುರ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿ, ಹಿರಿಯ ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ ಅವರು ಸೇರಿದಂತೆ ಐವತ್ತಕ್ಕೂ ಮಂದಿ ರಕ್ತದಲ್ಲಿ ಅರ್ಜಿ ಬರೆದರು.
ಈ ಸಂದರ್ಭದಲ್ಲಿ ಹೊಸಮಠದ ಚಿದಾನಂದ ಸ್ವಾಮೀಜಿ ಮಾತನಾಡಿ, ಗೋ ಪೂಜೆ ಮಾಡುವ ಏಕೈಕ ದೇಶ ಭಾರತ. ಇಲ್ಲಿ ಗೋ ಹತ್ಯೆ ನಿಲ್ಲಬೇಕು ಎಂದರು. ಕಳೆದ ಮೂರು ತಿಂಗಳಿಂದ ಲಕ್ಷಕ್ಕೂ ಅಧಿಕ ಗೋ ಪ್ರೇಮಿಗಳು, ಸಾರ್ವಜನಿಕರು ವೈಯಕ್ತಿಕ ಹಕ್ಕೊತ್ತಾಯ ಪತ್ರಕ್ಕೆ ಸಹಿ ಹಾಕಿದ್ದು, ಈಗ ಸಂತರು ರಕ್ತದಲ್ಲಿ ಅರ್ಜಿ ಬರೆದು ಗಮನ ಸೆಳೆದಿದ್ದಾರೆ.












Click it and Unblock the Notifications