ದಸರಾ ಜಂಬೂ ಸವಾರಿಯಲ್ಲಿ 40 ಸ್ತಬ್ಧ ಚಿತ್ರಗಳ ವೈಭವ
ಮೈಸೂರು, ಸೆಪ್ಟೆಂಬರ್ 29 : ನಾಡಹಬ್ಬ ದಸರಾ ಹಬ್ಬಕ್ಕೆ ಅರಮನೆಗಳ ನಗರಿ ಮೈಸೂರು ಅಣಿಗೊಳ್ಳುತ್ತಿದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ಕಣ್ಮನ ಸೆಳೆಯುವ ಗಜಪಡೆಯ ನಡಿಗೆ, ಜಾನಪದ ಕಲಾವಿದರ ಮೆರವಣಿಗೆಯ ಜೊತೆಗೆ ಗಜ ಗಾಂಭೀರ್ಯದಲ್ಲಿ ಸಾಗುವ ಸ್ತಬ್ಧ ಚಿತ್ರಗಳ ದರ್ಬಾರು ಒಂದು ಬಗೆಯಲ್ಲಿ ವಿಶಿಷ್ಟವಾಗಿರುತ್ತದೆ.
ಈ ಬಾರಿ 40 ಸ್ತಬ್ಧಚಿತ್ರಗಳು: ದಸರಾ ಸ್ತಬ್ಧಚಿತ್ರ ಸಮಿತಿಯ ಉಸ್ತುವಾರಿಯಲ್ಲಿ ಈ ಬಾರಿ ಜಂಬೂ ಸವಾರಿಗೆ ಮೆರುಗು ನೀಡುವ ನಿಟ್ಟಿನಲ್ಲಿ 26 ಜಿಲ್ಲೆಗಳ 40 ಸ್ತಬ್ಧಚಿತ್ರಗಳು ಸಾಗಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಸ್ತಬ್ಧಚಿತ್ರಗಳನ್ನು ನಿರ್ವಹಿಸಲಿವೆ.
ಇದೇ ಪ್ರಥಮ ಸ್ತಬ್ಧಚಿತ್ರ: ಜಿಲ್ಲೆಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಎನ್ಸಿಸಿ ಬೆಟಾಲಿಯನ್ ಗಳು ಇದೇ ಪ್ರಥಮ ಬಾರಿಗೆ ದಸರಾ ಮಹೋತ್ಸವಕ್ಕೆ ಸ್ತಬ್ಧಚಿತ್ರ ನಿರ್ಮಿಸಲಿವೆ.

ನಾಲ್ಕು ಬಗೆಯ ಪರಿಕಲ್ಪನೆಗಳಲ್ಲಿ ಚಿತ್ರಗಳನ್ನು ತಯಾರಿಸಲು ಸಮಿತಿ ನಿರ್ದೇಶನ ನೀಡಿದೆ. ಮೊದಲನೇ ವಿಭಾಗದಲ್ಲಿ ಕಲೆ, ಸಂಸ್ಕೃತಿ, ವಾಸ್ತುಶಿಲ್ಪ, ಎರಡನೆಯದರಲ್ಲಿ ಅಂತರ್ಜಲ, ಅರಣ್ಯೀಕರಣ, ಮೂರನೆಯದಾಗಿ ಜಾನಪದ ಹಿನ್ನೆಲೆಯ ಹಬ್ಬಗಳ ಪರಂಪರೆ ಮತ್ತು ನಾಲ್ಕನೆಯದಾಗಿ ಯಶೋಗಾಥೆಗಳ ಸ್ತಬ್ಧಚಿತ್ರಗಳು ಮೂಡಿಬರಲಿವೆ.
ಗೋಲ್ಡನ್ ದೇವಾಲಯ: ಮೈಸೂರು ಜಿಲ್ಲಾ ಪಂಚಾಯಿತಿ ವತಿಯಿಂದ ಜಿಪಂನಿಂದ ಬೈಲಕುಪ್ಪೆ ಗೋಲ್ಡನ್ ದೇವಾಲಯದ ಪ್ರತಿಕೃತಿ ನಿರ್ಮಾಣಗೊಳಲಿದೆ. ಅ.1ರಿಂದ ಮೈಸೂರು- ನಂಜನಗೂಡು ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ಎಲ್ಲ ಜಿಲ್ಲೆಗಳ ಸ್ತಬ್ಧಚಿತ್ರಗಳ ನಿರ್ಮಾಣ ಕಾರ್ಯ ನಡೆಯಲಿದೆ.
ಈ ಸಂಬಂಧ ಈಗಾಗಲೇ ಆಯಾ ಜಿಲ್ಲೆಗಳಿಗೆ ಸೂಚನೆ ನೀಡಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಕೂಡ ಈ ಬಾರಿ ನಾಲ್ಕೈದು ಸ್ತಬ್ಧಚಿತ್ರಗಳನ್ನು ನಿರ್ಮಿಸುವ ಸಾಧ್ಯತೆ ಇದೆ. ಮಂಡ್ಯ ಜಿಲ್ಲೆಯು ಕೆಆರ್ ಎಸ್ ಅಣೆಕಟ್ಟೆ, ರಂಗನತಿಟ್ಟು, ಚಾಮರಾಜ ನಗರ ಅರಣ್ಯೀಕರಣ ಮತ್ತು ಹಿಮವದ್ ಗೋಪಾಲಸ್ವಾಮಿ ಸ್ತಬ್ಧಚಿತ್ರಗಳನ್ನು ನಿರ್ಮಿಸಲು ಸಮಿತಿ ನಿರ್ದೇಶನ ನೀಡಿದೆ.












Click it and Unblock the Notifications