ತಾಯಿ ಕಳೆದುಕೊಂಡು ಆಹಾರ ಬಿಟ್ಟಿದ್ದ ಗೂಬೆ ಮರಿ ರಕ್ಷಣೆ
ಮೈಸೂರು, ಜನವರಿ 22; ತಾಯಿಯನ್ನು ಕಳೆದುಕೊಂಡು, ಆಹಾರ ತ್ಯಜಿಸಿದ್ದ ನಾಲ್ಕು ಮರಿ ಗೂಬೆಗಳನ್ನು ಉರಗ ತಜ್ಞ ಸ್ನೇಕ್ ಶ್ಯಾಂ ಪುತ್ರ ಸೂರ್ಯಕೀರ್ತಿ ಸಂರಕ್ಷಿಸಿದ್ದಾರೆ. ಶೆಡ್ನಲ್ಲಿ ಗೂಬೆಗಳು ಅಡಗಿ ಕುಳಿತಿದ್ದವು.
ಮೈಸೂರು ತಾಲೂಕಿನ ಗದ್ದಿಗೆ ಮುಖ್ಯ ರಸ್ತೆಯ ಶಿಂಡೇನಹಳ್ಳಿಯ ಚಂದ್ರಮೌಳಿ ಅವರ ತೋಟದಲ್ಲಿ ಗೂಬೆ ಮೊಟ್ಟೆ ಇಟ್ಟು ಮರಿ ಮಾಡಿತ್ತು. ಆಹಾರ ಅರಸಿ ಹೊರ ಹೋಗಿದ್ದ ತಾಯಿ ವಾಪಸ್ ಆಗುವಾಗ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿತು.
ಗೂಬೆ ಮೃತಪಟ್ಟಿರುವುದನ್ನು ನೋಡಿದ್ದ ಚಂದ್ರಮೌಳಿ ಅವರು ಗೂಬೆ ಮರಿಗಳಿಗೆ ಚಿಕನ್ ತುಂಡುಗಳನ್ನು ನೀಡಿದ್ದರು. ಆದರೆ, ಗೂಬೆ ಮರಿಗಳು ಆಹಾರ ಸ್ವೀಕರಿಸದೆ ತಾಯಿ ಬರುವಿಕೆಗಾಗಿ ಕಾದು ಕುಳಿತಿದ್ದವು.

ಎರಡು ದಿನಗಳು ಕಳೆಯುದರೊಳಗೆ ತಾಯಿಗಾಗಿ ಕಾಯುತ್ತಿದ್ದ ಮರಿಗಳು ಆಹಾರವನ್ನು ತ್ಯಜಿಸಿ ಸಂಪೂರ್ಣವಾಗಿ ನಿತ್ರಾಣಗೊಂಡಿದ್ದವು. ಈ ಬಗ್ಗೆ ಚಂದ್ರಮೌಳಿ ಅವರು ಸ್ನೇಕ್ ಶ್ಯಾಂ ಅವರಿಗೆ ಮಾಹಿತಿ ನೀಡಿದರು.
ಸ್ನೇಕ್ ಶ್ಯಾಂ ಪುತ್ರ ಸೂರ್ಯಕೀರ್ತಿ ಅವರು ಶಿಂಡೇನಹಳ್ಳಿಗೆ ತೆರಳಿ ಗೂಬೆ ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಗೂಬೆ ಮರಿಗಳನ್ನು ಮೈಸೂರಿನಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಿರುವ ಸೂರ್ಯಕೀರ್ತಿ ಅವುಗಳ ಆರೈಕೆ ಮಾಡುತ್ತಿದ್ದಾರೆ.












Click it and Unblock the Notifications