ಮಲತಂದೆ, ತಾಯಿಯ ಕಿರುಕುಳ, ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ
ಮೈಸೂರು,ಮಾರ್ಚ್,30: ಮಲತಾಯಿ ಮತ್ತು ಮಲತಂದೆಯ ಹಿಂಸೆ ತಾಳಲಾರದೆ ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ನಂಜನಗೂಡಿನ ಗುಂಡ್ಲುಪೇಟೆಯ ಬಾಲಕಿಯನ್ನು ಸಾರ್ವಜನಿಕರು ರಕ್ಷಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಕಾವ್ಯ (14) ಎಂಬ ಬಾಲಕಿಯೇ ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಕೆ. ಇವಳು ಬಸವನಾಯಕ ಮತ್ತು ಮಂಗಳಮ್ಮ ದಂಪತಿಯ ಪುತ್ರಿ. ಕಾವ್ಯಳ ತಂದೆ ಬಸವನಾಯಕ ತನ್ನ ಹೆಂಡತಿ ಸಾವನ್ನಪ್ಪಿದ ಬಳಿಕ ಚಾಮುಂಡಿ ಎಂಬಾಕೆಯನ್ನು ಮದುವೆಯಾದನು. ಬಳಿಕ ಆತನೂ ಮೃತಪಟ್ಟನು. ಇಲ್ಲಿಂದ ಆರಂಭವಾಯ್ತು ಆಕೆಯ ಕರಾಳ ಬದುಕು.[ಗಂಡನ ವಿಕೃತ ಕಾಮಕ್ಕೆ ಬೇಸತ್ತು ಮಕ್ಕಳನ್ನೇ ಕೊಂದ ತಾಯಿ!]

ಕಾವ್ಯ ತನ್ನ ಚಿಕ್ಕಮ್ಮ ಚಾಮುಂಡಿ ಹಾಗೂ ತಂದೆ ಬಸವನಾಯಕರೊಂದಿಗೆ ಜೀವನ ನಡೆಸುತ್ತಿದ್ದಳು. ಈಕೆ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ಬಸವನಾಯಕ ತೀರಿಕೊಂಡರು. ಇದಾದ ನಂತರ ಚಿಕ್ಕಮ್ಮ ಚಾಮುಂಡಿ ಒಂಟಿಯಾಗಿ ಬದುಕಲು ಸಾಧ್ಯವಾಗದೆ ಕೆಂಪಿಸಿದ್ದನ ಹುಂಡಿಯ ಶಂಕರ್ ಎಂಬಾತನೊಂದಿಗೆ ಸಂಬಂಧ ಹೊಂದಿ ಅವನೊಂದಿಗೆ ಜೀವನ ನಡೆಸಲು ಆರಂಭಿಸಿದಳು.
ಶಾಲೆಗೆ ಹೋಗುತ್ತಿದ್ದ ಕಾವ್ಯಳನ್ನು ಶಾಲೆಯಿಂದ ಬಿಡಿಸಿದ ಚಿಕ್ಕಮ್ಮ ಚಾಮುಂಡಿ ಮತ್ತು ಶಂಕರ್ ನಂಜನಗೂಡಿನ 20ನೇ ಕ್ರಾಸಿನಲ್ಲಿದ್ದ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿಸಿ ಹಣ ಪಡೆದುಕೊಂಡಿದ್ದರು. ಈ ನಡುವೆ ಹೊರಗೆ ಮಾತ್ರವಲ್ಲದೆ ಮನೆಯಲ್ಲೂ ಕೆಲಸ ಮಾಡುವಂತೆ ಚಾಮುಂಡಿ ಹಾಗೂ ಶಂಕರ್ ಬಾಲಕಿ ಕಾವ್ಯಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು.[ಕಳ್ಳತನ ಆರೋಪ, ಗೃಹಿಣಿಯ ಜೀವ ತೆಗೆದ ಸಾವಿರ ರೂಪಾಯಿ]

ಇದರಿಂದ ನೊಂದ ಬಾಲಕಿ ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ಸಕಾಲದಲ್ಲಿ ಸ್ಥಳಕ್ಕೆ ಬಂದ ನಗರಸಭಾ ಸದಸ್ಯ ಕೆ.ಜಿ. ಆನಂದ್, ಬಸವಣ್ಣ ಎಂಬುವರು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಶಿಶು ಅಭಿವೃದ್ಧಿ ಯೋಜಾನಾಧಿಕಾರಿಗಳ ಕಚೇರಿಗೆ ಕರೆದೊಯ್ದು ಆಕೆಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ.[ಮಂಡ್ಯ: ವರದಕ್ಷಿಣೆ ಹಿಂಸೆ, ಹಸೆಮಣೆ ಏರುವ ಮೊದಲೇ ಆತ್ಮಹತ್ಯೆ]
ಕೌಟುಂಬಿಕ ಸಲಹೆಗಾರ್ತಿ ಸಾವಿತ್ರಿ ಮತ್ತು ಶಿಶು ಅಭಿವೃದ್ಧಿ ಯೋಜಾನಾಧಿಕಾರಿ ಗೀತಾಲಕ್ಷ್ಮಿ ಬಾಲಕಿಯಿಂದ ಸಂಪೂರ್ಣ ಮಾಹಿತಿ ಪಡೆದು ಮೈಸೂರಿನ ಬಾಲಕಿಯರ ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ. ಅಲ್ಲದೆ ಹಿಂಸೆ ನೀಡಿದ ಪೋಷಕರು ಮತ್ತು ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದ ಮನೆಯವರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.












Click it and Unblock the Notifications