ಮಹಿಳೆ ಹೊಟ್ಟೇಲಿದ್ದ 12 ಕೇಜಿ ದುರ್ಮಾಂಸ ಹೊರತೆಗೆದ ಮೈಸೂರು ವೈದ್ಯರು
ಮೈಸೂರು, ಡಿಸೆಂಬರ್ 1 : ಮೈಸೂರಿನಲ್ಲಿ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಬೆಳೆದಿದ್ದ 12 ಕೇಜಿ ತೂಕದ ದುರ್ಮಾಂಸವನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಶಾಂತಿನಗರದ ನಿವಾಸಿ ಸಲ್ಮಾ (47) ಅವರ ಹೊಟ್ಟೆಯಲ್ಲಿ ಬೆಳೆದಿದ್ದ ದುರ್ಮಾಂಸವನ್ನು ನಗರದ ಶ್ರೀದೇವಿ ನರ್ಸಿಂಗ್ ಹೋಮ್ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಆಗಾಗ ಹೊಟ್ಟೆ ನೋವು ಕಾಣಿಸಿಕೊಂಡು ಪರಿತಪಿಸುತ್ತಿದ್ದ ಸಲ್ಮಾ ಅವರ ಹೊಟ್ಟೆ ದಪ್ಪವಾಗುತ್ತಾ ಬಂದಿತ್ತು. ಇದರಿಂದ ಭಯಗೊಂಡ ಅವರು ಕೆಲವು ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿದರು.

ಹೊಟ್ಟೆಯಲ್ಲಿ ಗೆಡ್ಡೆ ಇರುವ ಬಗ್ಗೆ ಖಚಿತಪಡಿಸಿಕೊಂಡ ವೈದ್ಯರು, ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದರು. ಶಸ್ತ್ರಚಿಕಿತ್ಸೆಗೆ ಅಗತ್ಯ ಹಣ ಹೊಂದಿಸಲಾಗದ ಅವರು, ಆ ನಂತರ ಕೆಲವು ಸಂಬಂಧಿಕರ ಸಲಹೆಯಂತೆ ಎರಡು ದಿನಗಳ ಹಿಂದೆ ಮೈಸೂರಿನ ಬೋಗಾದಿ 2ನೇ ಹಂತದಲ್ಲಿರುವ ಶ್ರೀದೇವಿ ನರ್ಸಿಂಗ್ ಹೋಮ್ ಗೆ ದಾಖಲಾಗಿದ್ದರು.
ಅಲ್ಲಿನ ವೈದ್ಯರಾದ ಬಿ.ಡಿ.ದೇವ ರಾಜ್ ರೋಗಿಯನ್ನು ಪರೀಕ್ಷಿಸಿ, ಶುಕ್ರವಾರ ಶಸ್ತ್ರಚಿಕಿತ್ಸೆ ಮೂಲಕ 12 ಕೇಜಿ ತೂಕದ ದುರ್ಮಾಂಸ (ಗಡ್ಡೆ)ವನ್ನು ಹೊರ ತೆಗೆದಿದ್ದಾರೆ. ಈಗ ಸಲ್ಮಾ ಆರೋಗ್ಯವಾಗಿದ್ದಾರೆ.

ವೈದ್ಯ ಬಿ.ಡಿ.ದೇವರಾಜ್ ಶಸ್ತ್ರಚಿಕಿತ್ಸೆ ಮೂಲಕ ದುರ್ಮಾಂಸವನ್ನು ಯಶಸ್ವಿಯಾಗಿ ಹೊರ ತೆಗೆದಿದದ್ದು, ವೈದ್ಯ ಲೋಕದಲ್ಲೇ ಸವಾಲೆನಿಸಿದ ಕೆಲಸವನ್ನು ನಿರ್ವಹಿಸಿದ ಈ ತಂಡಕ್ಕೆ ಎಲ್ಲಾ ಕಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.












Click it and Unblock the Notifications