ಯದು ವಂಶದ ಉತ್ತರಾಧಿಕಾರಿ ವಿವಾದದ ನೆನೆಪುಗಳು
ಮೈಸೂರು, ಫೆ.12 : ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆಗೆ ಉತ್ತರ ದೊರಕಿದೆ. ಯದುವೀರ ಗೋಪಾಲರಾಜೇ ಅರಸ್ ಅವರನ್ನು ಉತ್ತರಾಧಿಕಾರಿ ಎಂದು ರಾಣಿ ಪ್ರಮೋದಾ ದೇವಿ ಅವರು ಘೋಷಣೆ ಮಾಡಿದ್ದಾರೆ. ಯದುವೀರ ಅರಸ್ ಗಾಯಿತ್ರಿ ದೇವಿಯವರ ಮೊಮ್ಮಗ.
ಗುರುವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಣಿ ಪ್ರಮೋದಾ ದೇವಿ ಅವರು ಶ್ರೀಕಂಠದತ್ತ ಒಡೆಯರ್ ಅವರ ಸಹೋದರಿ ಗಾಯಿತ್ರಿ ದೇವಿಯವರ ಮೊಮ್ಮಗ ಯದುವೀರ ಅರಸ್ ಅವರನ್ನು ಉತ್ತರಾಧಿಕಾರಿಯಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. ಒಡೆಯರ್ ಅವರ ಹಿರಿಯ ಸಹೋದರಿ ಗಾಯತ್ರಿ ದೇವಿ ಅವರ ಪುತ್ರಿ ಲೀಲಾ ತ್ರಿಪುರಸುಂದರ ದೇವಿ ಹಾಗೂ ಸ್ವರೂಪ್ ಆನಂದ ಅರಸ್ ಅವರ ಪುತ್ರ ಯದುವೀರ ಅರಸ್. [ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಘೋಷಣೆ]
ಫೆ.23ರಂದು ಮೈಸೂರಿನ ಅರಮನೆಯಲ್ಲಿ ಯದುವೀರ ಗೋಪಾಲರಾಜೇ ಅರಸ್ ಅವರನ್ನು ದತ್ತು ಸ್ವೀಕರಿಸುವ ಕಾರ್ಯಕ್ರಮ ನಡೆಯಲಿದೆ. ಶ್ರೀಕಂಠದತ್ತ ಒಡೆಯರ್ ಅವರ ಅಂತ್ಯಕ್ರಿಯೆಯನ್ನು ನಡೆಸಿದ ಕಾಂತರಾಜೇ ಅರಸ್ ಅವರು ಉತ್ತರಾಧಿಕಾರಿಯಾಗಲಿದ್ದಾರೆ ಎಂಬ ಮಾತುಗಳು ಹಬ್ಬಿದ್ದವು. ಆದರೆ, ಆ ಸುದ್ದಿಗಳಿಗೆ ಇಂದು ತೆರೆ ಬಿದ್ದಿದೆ. ಉತ್ತರಾಧಿಕಾರಿ ವಿವಾದದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ?
2013ರ ಡಿಸೆಂಬರ್ 10 ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ವಿಧಿವಶರಾದ ನಂತರ ಯದು ವಂಶದ ಉತ್ತಾಧಿಕಾರಿ ಯಾರು? ಎಂಬ ಪ್ರಶ್ನೆ ಹುಟ್ಟಿಕೊಂಡಿತು. ದೊರೆಯಿಲ್ಲದೇ ಒಂದು ದಸರಾ ಮಹೋತ್ಸವವೂ ಮೈಸೂರಿನಲ್ಲಿ ನಡೆದು ಹೋಯಿತು.
ಯದುವೀರ ಅರಸ್ ಯಾರು?
ಯದುವೀರ ಗೋಪಾಲರಾಜೇ ಅರಸ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸಹೋದರಿ ಗಾಯತ್ರಿ ದೇವಿ ಅವರ ಪುತ್ರಿ ಲೀಲಾ ತ್ರಿಪುರಸುಂದರ ದೇವಿ ಹಾಗೂ ಸ್ವರೂಪ್ ಆನಂದ ಅರಸ್ ಅವರ ಪುತ್ರ. ಸದ್ಯ, ಅಮೆರಿಕದ ಬೋಸ್ಟನ್ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 1992ರ ಮಾ.24 ರಂದು ಜನಿಸಿದ ಯದುವೀರ್ ಸದ್ಯ ರಜೆಯ ಮೇಲೆ ಮೈಸೂರಿಗೆ ಆಗಮಿಸಿದ್ದಾರೆ. ಅವರು ಓದಿಗಾಗಿ ಅಮೆರಿಕಕ್ಕೆ ಹಿಂದಿರುಗಲಿದ್ದು, ಏಪ್ರಿಲ್ ನಂತರ ಮೈಸೂರಿಗೆ ಮರಳಲಿದ್ದಾರೆ.
ದತ್ತು ಪಡೆಯುವುದು ಅನಿವಾರ್ಯವಾಗಿತ್ತು
ಶ್ರೀಕಂಠದತ್ತ ಒಡೆಯರ್ ಮತ್ತು ಪ್ರಮೋದಾದೇವಿ ಒಡೆಯರ್ ದಂಪತಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಖಾಸಗಿ ಸಂಸ್ಥಾನಕ್ಕೆ ದತ್ತು ಪಡೆಯುವುದು ಅನಿವಾರ್ಯವಾಗಿತ್ತು. ಒಡೆಯರ್ ತಮ್ಮ ಹಿರಿಯ ಸೋದರಿಯರಾದ ಗಾಯತ್ರಿದೇವಿ ಇಲ್ಲವೇ ಮೀನಾಕ್ಷಿ ದೇವಿ ಅವರ ಪುತ್ರರ ಪೈಕಿ ಒಬ್ಬರನ್ನು ಉತ್ತರಾಧಿಕಾರಿಯಾಗಿ ನೇಮಿಸಬಹುದು ಎಂಬ ಸುದ್ದಿಯೂ ಹಬ್ಬಿತ್ತು.
ಕಾಂತರಾಜ ಅರಸ್ ಹೆಸರು ಕೇಳಿ ಬಂದಿತ್ತು
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ಗಾಯಿತ್ರಿ ದೇವಿ ಅವರ ಮಗ ಕಾಂತರಾಜ ಅರಸ್ ಅವರು ಯದು ವಂಶದ ಉತ್ತರಾಧಿಕಾರಿಯಾಗಿ ನೇಮಕವಾಗಲಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಕಾಂತರಾಜ ಅರಸ್ ಅವರೇ ಒಡೆಯರ್ ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದ್ದರು.
ದೊರೆಯಿಲ್ಲದೇ ನಡೆದ ದಸರಾ
2014ರ ಮೈಸೂರು ದಸರಾ ದೊರೆಯ ಅನುಪಸ್ಥಿತಿಯಲ್ಲಿ ನೆರವೇರಿತು. ಖಾಸಗಿ ದರ್ಬಾರ್ ಆರಂಭಕ್ಕೂ ಮುನ್ನ ಸಿಂಹಾಸನದ ಮೇಲೆ ಪಟ್ಟದ ಕತ್ತಿಯನ್ನು ಇಟ್ಟು, ಪೂಜಿಸಿ ದರ್ಬಾರ್ ಆರಂಭಿಸಲಾಯಿತು. ಕೆಲವು ಪೂಜೆಗಳನ್ನು ಕಾಂತರಾಜೇ ಅರಸ್ ಅವರು ರಾಣಿ ಪ್ರಮೋದಾ ದೇವಿ ಅವರ ಮಾರ್ಗದರ್ಶನದಲ್ಲಿ ಮಾಡಿದ್ದರು.
ಯಾವುದೇ ಭಿನ್ನಾಭಿಪ್ರಾಯವಿಲ್ಲ
ಯದುವೀರ ಅರಸ್ ಅವರನ್ನು ಉತ್ತರಾಧಿಕಾರಿ ನೇಮಕ ಮಾಡಿರುವ ಸಂಬಂಧ ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ರಾಣಿ ಪ್ರಮೋದಾ ದೇವಿ ಅವರು ಸ್ಪಷ್ಟಪಡಿಸಿದ್ದಾರೆ. ಯದುವೀರ ಅರಸ್ ಅವರೂ ರಾಜಮನೆತನದ ಕುಟುಂಬಕ್ಕೆ ಸೇರಿದವರು ಎಂದು ಅವರು ತಿಳಿಸಿದ್ದಾರೆ.
ಮೌನಕ್ಕೆ ಶರಣಾದ ಸರ್ಕಾರ
ಮೈಸೂರು ರಾಜವಂಶದ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಬಗ್ಗೆ ಸರ್ಕಾರ ಮೊದಲಿನಿಂದಲೂ ಮೌನವಾಗಿತ್ತು. ದಸರಾ ಸಂದರ್ಭದಲ್ಲಿಯೂ ಪ್ರಮೋದಾ ದೇವಿ ಅವರಿಗೆ ದಸರಾಕ್ಕೆ ಆಹ್ವಾನ ನೀಡಿದ್ದ ಸರ್ಕಾರ ಅರಮನೆಯ ಖಾಸಗಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.