Get Updates
Get notified of breaking news, exclusive insights, and must-see stories!

ಗವಿಸ್ವಾಮಿ ಕಣ್ಣಿಗೆ ಬಿದ್ದ ಕಲಾವಿದನ ಬದುಕು ಬವಣೆ

ನಾವು ಯಾವಾಗಲೂ ನಮ್ಮದೇ ಜಗತ್ತಿನಲ್ಲಿ ಕಳೆದು ಹೋಗಿರುತ್ತೇವೆ. ಅದರಾಚೆಯೂ ನಮ್ಮ ಊಹೆಗೂ ನಿಲುಕದ, ಎಣಕೆಗೂ ಎಟುಕದ, ಯೋಚನೆಗೂ ಬಾರದ ಲೋಕವಿದೆ, ಅದರಲ್ಲೂ ಜೀವಿಗಳಿರುತ್ತವೆ ಎಂಬುದನ್ನು ನಾವು ಮರೆತೇಬಿಟ್ಟಿರುತ್ತೇವೆ.

ಆದರೆ, ಕೆಲವೊಂದು ಘಟನೆಗಳು ನಮ್ಮನ್ನು ಬಡಿದೆಬ್ಬಿಸಿರುತ್ತವೆ, ಕಣ್ಣು ತೆರೆಸಿರುತ್ತವೆ. ಅಂಥದೊಂದು ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಗುರುವಾರ, ಜು.10ರಂದು ಜರುಗಿದೆ. ಪಶು ಚಿಕಿತ್ಸಾಲಯಕ್ಕೆ ಬಂದ ವ್ಯಕ್ತಿಯೊಬ್ಬರ ಮನಮಿಡಿಯುವ ಸತ್ಯಕಥೆಯನ್ನು ಕಥೆಗಾರ ಪಶುವೈದ್ಯಾಧಿಕಾರಿ ಗವಿ ಸ್ವಾಮಿ ಅವರು ಮನಮುಟ್ಟುವಂತೆ ಬರೆದಿದ್ದಾರೆ. ಓದಿಕೊಳ್ಳಿ.

ಈ ಫೋಟೋದಲ್ಲಿರುವ ವ್ಯಕ್ತಿ ಇವತ್ತು ಬೆಳಿಗ್ಗೆ ನಮ್ಮ ಆಸ್ಪತ್ರೆಗೆ ಬಂದಿದ್ದರು.. ಕುರ್ಚಿಯ ಮೇಲೆ ಕೂರಲು ಹೇಳಿದೆ..ಸಂಕೋಚದಿಂದ ಮೈಯನ್ನು ಮುದುರಿಕೊಂಡು ಕುಳಿತರು..

Fate of a blind musician from Nanjangud, Mysore

'ಯಾವೂರು ಯಜಮಾನ್ರೇ?'

'ನಂಜನಗೂಡ್ ತಾಲೂಕಿನ ಬ್ಯಾಳಾರುಹುಂಡಿ ಸಾರ್'

'ಅಲ್ಲಿಂದ ಇಲ್ಲಿಗೆ ಭಿಕ್ಷೆಗೆ ಬಂದಿದ್ದೀರಾ? ಕಷ್ಟ ಅನ್ಸಲ್ವಾ?"

"ನನಗೆ ಇದೇ ಊರಿಗೆ ಅಪಾಯಿಂಟ್ ಆಗಿದೆ ಸಾರ್"

ನನಗೆ ಆಶ್ಚರ್ಯ!

ಈ ಇಳಿವಯಸಿನಲ್ಲಿ ಅದ್ಯಾರು ಇವರನ್ನು ಅಪಾಯಿಂಟ್ ಮಾಡಿಕೊಂಡರು? ಅದೂ ಎರಡೂ ಕಣ್ಣುಗಳು ಮುಚ್ಚಿಹೋಗಿವೆ..ನನಗೆ ಕುತೂಹಲವಾಯಿತು.

''ಯಾವ ಕೆಲಸಕ್ಕೆ ಯಜಮಾನ್ರೇ?"

''ಪ್ರೈಮರಿ ಸ್ಕೂಲಿನ ಮಕ್ಕಳಿಗೆ ಪಿಟೀಲು ಕಲಿಸೋಕೆ ಸಾರ್"

"ನೀವ್ ಕಲ್ತಿದ್ದೀರಾ?"

"ಹೂಂ ಸಾರ್ .. ಪಿಟೀಲಿನಲ್ಲಿ ವಿದ್ವತ್ ಪಾಸ್ ಮಾಡಿದ್ದೀನಿ"

" ವಿದ್ವತ್ ಅಂದ್ರೆ? "

"ಅದೊಂದು ಪರೀಕ್ಷೆ ಸಾರ್ ..ಪಿಟೀಲಿನಲ್ಲಿ ಜೂನಿಯರ್, ಸೀನಿಯರ್, ವಿದ್ವತ್ ಅಂತ ಮೂರು ಲೆವಲ್ ಪರೀಕ್ಷೆಗಳಿವೆ.. ನಾನು ವಿದ್ವತ್ ಪಾಸ್ ಮಾಡಿದೀನಿ ಸಾರ್"

"ಎಲ್ಲಿ ಪಾಸ್ ಮಾಡಿದ್ದು?"

" ಮೈಸೂರಿನ ಬಂಬೂ ಬಜಾರಲ್ಲಿ ನಮಗೆ ಅಂತಲೇ ಒಂದು ಸ್ಕೂಲಿದೆ ಸಾರ್. ಅದೇ ಸ್ಕೂಲಲ್ಲಿ ಬ್ರೈಲ್ ಲಿಪೀಲಿ ಎಸ್ಸೆಲ್ಸಿ ಕೂಡಾ ಪಾಸ್ ಮಾಡಿದೀನಿ ಸಾರ್ "

ವಾವ್ ಈ ಮನುಷ್ಯ ಗ್ರೇಟ್ ಅನ್ನಿಸಿತು.. ಅವರೇ ಮಾತು ಮುಂದುವರಿಸಿದರು.

" ನಾವ್ ಮೂರ್ ಜನ ಅಣ್ಣ ತಮ್ಮಂದಿರು ಸಾರ್ ..ಮೂರೂ ಜನ್ರೂ ಹುಟ್ಟುಕುರುಡ್ರು.. ನಾನೇ ಕಿರಿಯವ್ನು.. ಹಿರಿಯವ್ನು ಸತ್ತೋದ.. ನಡುವಿನವ್ನು ಹಾರ್ಮೊನಿ ಕಲ್ತಿದಾನೆ ..ಭಜನೆ, ನಾಟ್ಕ ಆಡೋವ್ರ ಜೊತೆ ಸೇರ್ಕೊಂಡಿದಾನೆ.. ನನಗೆ ಯಾರೋ ಪುಣ್ಯಾತ್ಮರು ಅರ್ಜಿ ಹಾಕ್ಸಿ ಕೆಲ್ಸ ಕೊಡ್ಸಿದಾರೆ"

" ಈ ವಯ್ಸಲ್ಲಿ ಪ್ರತಿದಿನ ಇಪ್ಪತ್ತು ಮೈಲಿ ದೂರದಿಂದ ಬಂದು ಮಕ್ಕಳಿಗೆ ಸಂಗೀತ ಕಲ್ಸೋದು ಕಷ್ಟ ಆಗಲ್ವಾ..ಹೇಗೆ ನಿಭಾಯಿಸ್ತೀರಿ.. ?"

"ಮಮತೆ ಸಾರ್..ಅದೊಂಥರಾ ಮಮತೆ.. ಬಿಡಕ್ಕಾಗಲ್ಲ.. ಇಲ್ಲೇ ಒಂದು ಚಿಕ್ಕ ರೂಂ ಮಾಡ್ತೀನಿ .. ಇಲ್ಲೇ ಉಳ್ಕೊತೀನಿ"

ಇದನ್ನು ಹೇಳುವಾಗ ಅವರ ಮುಖದಲ್ಲಿ ಅರಳಿದ ನಿಷ್ಕಲ್ಮಷ ಮಮಕಾರದ ನಗುವೇ ಹೇಳುತ್ತಿತ್ತು,ಈ ವ್ಯಕ್ತಿ ಸಂಗೀತವನ್ನು ಎಷ್ಟು ಪ್ರೀತಿಸುತ್ತಾರೆಂದು..

ಗಟ್ಟಿಮುಟ್ಟಾಗಿರುವವರೇ ದುಡಿದು ತಿನ್ನಲು ಹಿಂದೇಟು ಹಾಕುತ್ತಿರುವಾಗ ಎರಡೂ ಕಣ್ಣುಗಳು ಮುಚ್ಚಿಹೋಗಿರುವ ಈ ವ್ಯಕ್ತಿಯ ಸ್ವಾಭಿಮಾನ ಕಂಡು ಹೆಮ್ಮೆಯಾಯಿತು..ಮುಜುಗರ ಪಟ್ಟುಕೊಳ್ಳುತ್ತಾ ಕೈಲಿದ್ದ ಬೈಂಡನ್ನು ಟೇಬಲ್ಲಿನ ಮೇಲೆ ಇಟ್ಟರು.

"ಏನಿದು?"

"ಸ್ಕೂಲಿಗೆ ರಿಪೋರ್ಟ್ ಮಾಡ್ಕೊಳೋಕೆ ಇನ್ನು ಎರಡ್ ವಾರ ಇದೆ ಸಾರ್.. ಅಷ್ಟರಲ್ಲಿ ಒಂದ್ ಹೊಸ ಪಿಟೀಲ್ ತಗೋಬೇಕು ಸಾರ್ .. ಒಂಬತ್ತು ಸಾವ್ರ ಆಗುತ್ತಂತೆ.. ಈಗಾಗಲೇ ನಿಮ್ಮಂಥವ್ರು ಕೊಟ್ಟಿರೋದೆಲ್ಲ ಸೇರಿ ಆರ್ ಸಾವ್ರ ಆಗಿದೆ ಸಾರ್" ಎನ್ನುತ್ತಾ ಬೈಂಡ್ ತೆರೆದರು..

ಹೊಟೆಲಿನವ್ರು, ಸಿಮೆಂಟ್ ಅಂಗಡಿಯವ್ರು, ಬಟ್ಟೆ ಅಂಗಡಿಯವ್ರು, ದಿನಸಿ ಅಂಗಡಿಯವ್ರು..ಹೀಗೆ ಹಲವಾರು ಸ್ತರದ ಜನರು ಸಹಾಯ ಮಾಡಿದ್ದರು..

ಅಷ್ಟೇ ಏಕೆ, ಶಾಲಾ ಮಕ್ಕಳೂ ಕೂಡಾ ತಮ್ಮ ಕೈಲಾದಷ್ಟು ಕಾಸನ್ನು ಒಟ್ಟುಗೂಡಿಸಿ ಮುಖ್ಯೋಪಾಧ್ಯಾಯರ ಮುಖಾಂತರ ನೀಡಿದ್ದವು..ಇಂತಹ ವ್ಯಕ್ತಿಗಳಿಗೆ ಸಹಾಯ ಮಾಡದಿದ್ದರೆ ನಾವು ಬದುಕಿದ್ದೂ ವ್ಯರ್ಥ ಅನ್ನಿಸಿತು..

ನನ್ನ ಕಿರುಕಾಣಿಕೆಯನ್ನ ಅವರ ಜೇಬಿಗೆ ಹಾಕಿ ಬೀಳ್ಕೊಟ್ಟೆ..ಅವರು ಪಿಟೀಲು ನುಡಿಸುವುದನ್ನು ನೋಡುವ ತವಕದಲ್ಲಿದ್ದೇನೆ.. ಆ ಇಂಪಾದ ಸಂಗೀತವನ್ನು ಆಲಿಸುವ ತವಕದಲ್ಲಿದ್ದೇನೆ..ಸದ್ಯದಲ್ಲೇ ನಿಮಗೂ ಕೇಳಿಸುತ್ತೇನೆ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+