ನಾಗರಹೊಳೆ ಅರಣ್ಯದಂಚಿನಲ್ಲಿ ಹಸುವನ್ನು ಕೊಂದ ಹುಲಿ, ಗ್ರಾಮಸ್ಥರ ಆತಂಕ
ನಾಗರಹೊಳೆ ಕಾಡಂಚಿನ ಬಿಲ್ಲೇನಹೊಸಹಳ್ಳಿಯಲ್ಲಿ ಹುಲಿಯೊಂದು ಹಸುವನ್ನು ಕೊಂದಿದ್ದು, ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾಡಾನೆ ಹಾಗೂ ಹುಲಿ ದಾಳಿಯಿಂದ ಗ್ರಾಮದಲ್ಲಿ ಭಯದ ವಾತಾವರಣ ಮೂಡಿದೆ
ಹುಣಸೂರು, ಮೇ 17: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಪ್ರದೇಶದ ಗ್ರಾಮಗಳಲ್ಲಿ ಮತ್ತೆ ಹುಲಿಯ ಭಯ ಆರಂಭವಾಗಿದೆ. ಈ ವ್ಯಾಪ್ತಿಯಲ್ಲಿ ಹುಲಿಯೊಂದು ಅಡ್ಡಾಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಅಲ್ಲದೆ, ಜನರು ಓಡಾಡಲು ಭಯಪಡುವಂತಾಗಿದೆ. ಇದೀಗ ಕಾಡಂಚಿನ ಬಿಲ್ಲೇನಹೊಸಹಳ್ಳಿ ಗ್ರಾಮದಲ್ಲಿ ಹುಲಿ ದಾಳಿ ಮಾಡಿ, ಹಸುವನ್ನು ಬಲಿ ಪಡೆದುಕೊಂಡಿದೆ. ಇದರಿಂದ ಗ್ರಾಮದಲ್ಲಿ ಇನ್ನಷ್ಟು ಆತಂಕ ಎದುರಾಗಿದೆ.
ನೇರಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲೇನಹೊಸಹಳ್ಳಿ ಗ್ರಾಮದ ಜಾನ್ಸನ್ ಎಂಬುವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಹುಲಿ ದಾಳಿ ಮಾಡಿ ಸಾಯಿಸಿದೆ. ಮೇಯಲು ಹೋಗಿದ್ದ ಹಸು ಸಂಜೆಯಾದರೂ ಬಾರದಿದ್ದಾಗ ಮಾಲೀಕರು ಅದನ್ನು ಹುಡುಕಿಕೊಂಡು ತೆರಳಿದ ಸಂದರ್ಭದಲ್ಲಿ ಎಲ್ಲೂ ಸಿಕ್ಕಿರಲಿಲ್ಲ.['ರಾಜಕುಮಾರ'ನಿಲ್ಲದ ಬಂಡೀಪುರಕ್ಕೀಗ ಮಾದೇಶನೇ ದೊರೆ!]
ಒಂದು ದಿನ ಪೂರ್ತಿ ಹುಡುಕಿದರೂ ಹಸು ಸಿಕ್ಕಿರಲಿಲ್ಲ. ಕೊನೆಗೆ ಲಕ್ಷ್ಮಣ ತೀರ್ಥ ನದಿಯಂಚಿನ ಅರಣ್ಯ ಪ್ರದೇಶದಲ್ಲಿ ಹಸುವಿನ ಕಳೇಬರ ಪತ್ತೆಯಾಗಿದ್ದು, ಹುಲಿ ದಾಳಿ ನಡೆಸಿ ಅದನ್ನು ಸಾಯಿಸಿರುವುದು ಪತ್ತೆಯಾಗಿದೆ. ಘÀಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.[ಗುಂಡ್ಲುಪೇಟೆಯ ಪ್ರಿನ್ಸ್ ಹುಲಿ ಹತ್ಯೆ ಪ್ರಕರಣ: ಮೂವರ ಬಂಧನ]
ಹುಲಿ ದಾಳಿಯಿಂದ ಹಸು ಕಳೆದುಕೊಂಡಿರುವ ರೈತರಿಗೆ ಅರಣ್ಯ ಇಲಾಖೆ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಈ ಭಾಗದಲ್ಲಿ ಕಾಡಾನೆ ಮತ್ತು ಹುಲಿ ಹಾವಳಿ ಹೆಚ್ಚಾಗಿದ್ದು, ಇದರ ತಡೆಗೆ ಮುಂದಾಗಬೇಕು ಎಂದು ಜಿಲ್ಲಾ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಆಗ್ರಹಿಸಿದ್ದಾರೆ.