ಯಾಗದಿಂದ ಭಕ್ತರಲ್ಲಿ ಆತ್ಮಜ್ಞಾನ ವೃದ್ಧಿ ಸಾಧ್ಯ : ಮಾಣಿಲಶ್ರೀ
ಮುಂಬಯಿ, ಅಕ್ಟೋಬರ್ 28 : ಸಮಾಜ ಕಲ್ಯಾಣದ ಸಂಕಲ್ಪ ಹೊಂದಿದ ಸಾಧುಸಂತರು, ಧರ್ಮಭೂಮಿಯ ಕರ್ಮ ತೀರಿಸಲು, ತಮ್ಮಲ್ಲಿನ ಆಧ್ಯಾತ್ಮಿಕ ಮನಸ್ಸುಗಳನ್ನು ಶುದ್ಧೀಕರಿಸಿ ಜನ್ಮಕಲ್ಯಾಣ ಮಾಡಬೇಕೆನ್ನುವ ಉದ್ದೇಶವಿಟ್ಟುಕೊಂಡಿರುತ್ತಾರೆ ಎಂದು ಬಂಟ್ವಾಳ ಮುರುವ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದ್ದಾರೆ.
ಸಂತರು ಭಾವೈಕ್ಯದ ಹರಿಕಾರರು ಆಗಿದ್ದು ಅವರ ಅನುಗ್ರಹದಿಂದ ಅಧ್ಯಾತ್ಮದ ಒಲವನ್ನು ಹೊಂದಿದಾಗಲೇ ವೈಚಾರಿಕ ಪ್ರಜ್ಞೆಯ ಜಾಗೃತಿ ಮೂಡುವುದು. ಯಾಗದಿಂದ ಭಕ್ತರಲ್ಲಿ ಆತ್ಮಜ್ಞಾನ ವೃದ್ಧಿಯಾಗುವುದು ಎಂದು ಅವರು ಹಿತವಚನ ನೀಡಿದರು.

ಆದಿತ್ಯವಾರ ಸಂಜೆ ಉಪನಗರ ಮುಲುಂಡ್ ಶಿವಾಜಿ ನಗರದಲ್ಲಿನ ನವೋದಯ ಕನ್ನಡ ವಿದ್ಯಾಲಯದ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಸಿದ್ಧತಾ ಸಭೆ ಉದ್ಘಾಟಿಸಿ ಮೋಹನದಾಸ ಸ್ವಾಮೀಜಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.
ನನ್ನ ಶಿಷ್ಯರಾಗಿದ್ದ ಕೊಂಡೆಯೂರು ಶ್ರೀಗಳಿಗೆ ದೀಕ್ಷೆಯನ್ನಿತ್ತಾಗಲೇ ಅವರಲ್ಲಿ ಭಕ್ತಿಮಾರ್ಗದಿಂದ ಸಮಾಜೋದ್ಧಾರ ನಡೆಸುವ ಶಕ್ತಿ ಕಂಡಿದ್ದೆ. ಆದುದರಿಂದ ಅವರ ಆಶಯದ ಯಾಗದ ಮಹತ್ವವನ್ನು ನಾವೆಲ್ಲರೂ ತಿಳಿದು ಅವರೊಡನೆ ಒಗ್ಗೂಡಿ ಸಮಾಜ ಕಲ್ಯಾಣದ ಸಂಕಲ್ಪವನ್ನು ಈಡೇರಿಸಬೇಕು. ಆ ಮೂಲಕ ಭಾರತೀಯ ಸಂಸ್ಕೃತಿ ವಿಶ್ವದಾದ್ಯಂತ ಬೆಳಗಿಸೋಣ ಎಂದರು.

2019ರ ಫೆ.18ರಿಂದ 24ರ ತನಕ ಕಾಸರಗೋಡು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗ'ದ ಬಗ್ಗೆ ಕೊಂಡೆವೂರು ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಸಂಕ್ಷೀಪ್ತ ಮಾಹಿತಿ ನೀಡಿದರು.
ಭಕ್ತಿಯಿಂದ ಬಂದ ಪ್ರತಿಯೊಬ್ಬ ಭಕ್ತರ ಮನೋಭಿಷ್ಠಗಳನ್ನು ಈಡೇರಿಸುವುದು ಸನ್ಯಾಸಿಗಳ ಧರ್ಮವಾಗಿದೆ. ಸಜ್ಜನರ ಸ್ನೇಹಿಗಳಾಗಿ ಜೀವನ್ನುದ್ದಕ್ಕೂ ಭಕ್ತೋದ್ಧಾರದ ಕಾರ್ಯ ನೆರವೇರಿಸಿ ಜೀವನ ಪಾವನಗೊಳಿಸಲು ಇಂತಹ ಧಾರ್ಮಿಕ ಸೇವೆಗಳು ಅಗತ್ಯವಾಗಿವೆ. ಆದ್ದರಿಂದ ಸೋಮಯಾಗದಲ್ಲಿ ಭಾಗಿಗಳಾಗಿ ಪುಣ್ಯಕ್ಕೆ ಪಾತ್ರರಾಗಿರಿ ಎಂದು ಭಕ್ತಾಭಿಮಾನಿ ಬಂಧುಭಗಿನಿಯರಿಗೆ ಕರೆಯಿತ್ತರು.

ಮುಂಬಯಿ ಸಮಿತಿಯ ಅಶೋಕ್ ಎಂ.ಕೋಟ್ಯಾನ್ ಥಾಣೆ, ಎಸ್.ಕೆ ಶ್ರೀಯಾನ್, ವಿಶ್ವನಾಥ್ ಯು.ಮಾಡಾ, ರವಿ ಎಸ್.ಮಂಜೇಶ್ವರ, ಹರೀಶ್ ಕೆ.ಚೇವಾರ್, ಚಂದ್ರಶೇಖರ ಆರ್.ಬೆಲ್ಚಡ, ತೋನ್ಸೆ ಸಂಜೀವ ಪೂಜಾರಿ ಸೇರಿದಂತೆ ನೂರಾರು ಭಕ್ತರು, ಸಮಿತಿ ಸದಸ್ಯರು ಉಪಸ್ಥಿತರಿದ್ದು, ಶ್ರೀಗಳು ಫಲಮಂತ್ರಾಕ್ಷತೆಯೊಂದಿಗೆ ಹರಸಿದರು.

ಯಾಗ ಸಮಿತಿ ಗೌ| ಪ್ರ| ಕಾರ್ಯದರ್ಶಿ ನಿತ್ಯಾನಂದ ಡಿ.ಕೋಟ್ಯಾನ್ ಸ್ವಾಗತಿಸಿ ಕೊಂಡೆವೂರು ಕ್ಷೇತ್ರದ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ವಿಶ್ವಜಿತ್ ಅತಿರಾತ್ರ ಸೋಮಯಾಗದ ಸಿದ್ಧತೆ ಬಗ್ಗೆ ತಿಳಿಸಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಮುಂಬಯಿ ಸಮಿತಿ ಅಧ್ಯಕ್ಷ ರಾಜೇಶ್ ರೈ ವಂದಿಸಿದರು.












Click it and Unblock the Notifications