ರೆಬಲ್ ಶಾಸಕರ ಮುಂಬೈ ವಾಸ್ತವ್ಯ ವಿಸ್ತರಣೆ, ಸದ್ಯಕ್ಕಿಲ್ಲ ವಾಪಸ್
ಮುಂಬೈ, ಜುಲೈ 26 : "ನಾವು ವಾಪಸ್ ಪಕ್ಷಕ್ಕೆ ಮರಳುವ ಪ್ರಶ್ನೆಯೇ ಇಲ್ಲ" ಎಂದು ಹುಣಸೂರು ಶಾಸಕ, ರೆಬಲ್ ಶಾಸಕ ಎಚ್. ವಿಶ್ವನಾಥ್ ಹೇಳಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು ಮುಂಬೈನಲ್ಲಿದ್ದಾರೆ.
ಶುಕ್ರವಾರ ಮುಂಬೈಬಲ್ಲಿ ಮಾತನಾಡಿರುವ ಎಚ್. ವಿಶ್ವನಾಥ್, "ನಮ್ಮನ್ನು ಸಂಪರ್ಕಿಸಿ ಮನವೊಲಿಸುವ ಧೈರ್ಯ ಯಾವ ನಾಯಕರಿಗೂ ಇಲ್ಲ. ನಾವು ಪಕ್ಷಕ್ಕೆ ಮರಳುವುದೂ ಇಲ್ಲ" ಎಂದು ಸ್ಪಷ್ಟಪಡಿಸಿದರು.
ರೆಬಲ್ ಶಾಸಕರ ಮುಂಬೈ ವಾಸ್ತವ್ಯ ಸದ್ಯಕ್ಕೆ ಅಂತ್ಯಗೊಳ್ಳುವುದಿಲ್ಲ. ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೊಂಡು ವಿಶ್ವಾಸಮತ ಸಾಬೀತು ಮಾಡುವ ವೇಳೆಗೆ ಶಾಸಕರು ರಾಜ್ಯಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ.

ಜುಲೈ 6ರಂದು 9 ಕಾಂಗ್ರೆಸ್ ಶಾಸಕರ ಜೊತೆ ಜೆಡಿಎಸ್ನ ಎಚ್. ವಿಶ್ವನಾಥ್ (ಹುಣಸೂರು), ಕೆ. ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್), ನಾರಾಯಣ ಗೌಡ (ಕೆ. ಆರ್. ಪೇಟೆ) ಅವರು ಸಹ ರಾಜೀನಾಮೆ ನೀಡಿದ್ದಾರೆ. ಎಲ್ಲಾ ಶಾಸಕರು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಗುರುವಾರ ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ), ಆರ್. ಶಂಕರ್ (ರಾಣೆಬೆನ್ನೂರು) ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.
ರಾಜೀನಾಮೆ ನೀಡಿರುವ 13 ಶಾಸಕರು ಮತ್ತು ಅಧಿವೇಶನಕ್ಕೆ ಗೈರಾದ ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಸ್ಪೀಕರ್ಗೆ ದೂರು ನೀಡಿದೆ. ಈ ಪ್ರಕರಣಗಳನ್ನೂ ಸ್ಪೀಕರ್ ಇನ್ನೂ ಇತ್ಯರ್ಥಗೊಳಿಸಿಲ್ಲ.
ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ರಮೇಶ್ ಕುಮಾರ್, "ರಾಜೀನಾಮೆ ಎಂದರೆ ಗೌರವ ಸೂಚಕವಾದದ್ದು, ಅನರ್ಹತೆ ಎಂದರೆ ಛೀಮಾರಿ ಹಾಕಿದಂತೆ. ರಾಜೀನಾಮೆ ಅಂಗೀಕಾರಗೊಂಡವರು ಮಾತ್ರ ಚುನಾವಣಾ ಕಣಕ್ಕಿಳಿಯಬಹುದು" ಎಂದು ಸ್ಪಷ್ಟಪಡಿಸಿದರು.












Click it and Unblock the Notifications