ಭಾರತವನ್ನು ಹಿಂದೂ ರಾಷ್ಟ್ರವಾಗಲು ಬಿಡಲ್ಲ ಎಂದು ಗುಡುಗಿದ ಒವೈಸಿ
ಮುಂಬೈ, ಅಕ್ಟೋಬರ್ 15: "ಭಾರತ ಹಿಂದೂ ರಾಷ್ಟ್ರವಲ್ಲ. ನಾವು ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ" ಎಂದು ಹೇಳುವ ಮೂಲಕ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಸೋಮವಾರದಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ರ ಹಿಂದೂ ರಾಷ್ಟ್ರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದಲ್ಲಿ ಚುನಾವಣೆ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಒಂದು ವರ್ಗ ಇಡೀ ದೇಶಕ್ಕೆ ಒಂದು ಬಣ್ಣವನ್ನು ಬಳಿಯಲು ಬಯಸಿದೆ. ಆದರೆ ನಾವು ಹಿಂದೂಸ್ತಾನವನ್ನು ಹಲವು ಬಣ್ಣಗಳಲ್ಲಿ ನೋಡುತ್ತೇವೆ. ಇದೇ ಹಿಂದೂಸ್ತಾನದ ಸೌಂದರ್ಯ ಎಂದು ಅವರು ಹೇಳಿದ್ದಾರೆ.
ಶಿವಸೇನೆಯು ಹಸಿರು ಬಣ್ಣದ ವಿರೋಧಿ ಎಂದು ಆರೋಪಿಸಿದ ಅವರು, ನಿಮ್ಮ ಕನ್ನಡಕವನ್ನು ಬದಲಿಸಿಕೊಳ್ಳಿ. ರಾಷ್ಟ್ರಧ್ವಜದಲ್ಲಿ ಕೂಡ ಇರುವ ಹಸಿರು ಬಣ್ಣವನ್ನು ನೋಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಜಾತ್ಯತೀತತೆ ಹಾಗೂ ಬಹುತ್ವದ ಕಾರಣಕ್ಕೆ ಭಾರತ ವಿಶಿಷ್ಟವಾಗಿದೆ. ಭಾರತದ ರೀತಿ ಜಗತ್ತಿನಲ್ಲಿ ಬೇರೆ ಯಾವ ರಾಷ್ಟ್ರವೂ ಇಲ್ಲ. ನಮಗೆ ಈ ಬಗ್ಗೆ ಹೆಮ್ಮೆ ಇದೆ ಎಂದು ಒವೈಸಿ ಅಭಿಪ್ರಾಯ ಪಟ್ಟಿದ್ದಾರೆ.
"ನಿಮ್ಮ ಕರುಣೆಯ ಮೇಲೆ ನಾವು ಇಲ್ಲಿರುವುದಲ್ಲ ಎಂದು ಆರೆಸ್ಸೆಸ್ ನಲ್ಲಿ ಇರುವವರಿಗೆ ಹೇಳಲು ಬಯಸುತ್ತೇನೆ. ನನ್ನ ಸಂತೋಷ ಅಥವಾ ದುಃಖದ ಸೂಚ್ಯಂಕವನ್ನು ನೀವು ಅಳೆಯಲು ಬಯಸಿದರೆ ಸಂವಿಧಾನವು ನಮಗೆ ಏನು ಕೊಟ್ಟಿದೆ ಎಂಬುದನ್ನು ನೀವು ಮತ್ತು ನಾವು ನೋಡಬೇಕು" ಎಂದಿದ್ದಾರೆ.












Click it and Unblock the Notifications