ಶರದ್ ಪವಾರ್ ವಿರುದ್ಧ ಪೋಸ್ಟ್: ಬಿಜೆಪಿ ವಕ್ತಾರನಿಗೆ ಥಳಿಸಿದ ಎನ್ಸಿಪಿ ಕಾರ್ಯಕರ್ತರು
ಪುಣೆ, ಮೇ 16: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಪೋಸ್ಟ್ ಮಾಡಿದ್ದಕ್ಕಾಗಿ ಬಿಜೆಪಿ ವಕ್ತಾರ ವಿನಾಯಕ್ ಅಂಬೇಕರ್ ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಪವಾರ್ ವಿರುದ್ಧ ಪೋಸ್ಟ್ ಮಾಡಿದ್ದಕ್ಕೆ ವಿನಾಯಕ್ ಕಚೇರಿಗೆ ನುಗ್ಗಿದ ಎನ್ಸಿಪಿ ಕಾರ್ಯಕರ್ತರು ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಸದ್ಯ ವಿಡಿಯೋ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಮಹಾರಾಷ್ಟ್ರ ಬಿಜೆಪಿಯ ನಾಯಕರಿಂದ ಹಿಡಿದು ಕೇಂದ್ರ ಸಚಿವರವರೆಗೂ ಮಹಾರಾಷ್ಟ್ರದ ಆಡಳಿತ ಪಕ್ಷಗಳು ರಣರಂಗಕ್ಕಿಳಿದಿವೆ. ದಾಳಿಕೋರರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಒತ್ತಾಯಿಸಿದ್ದಾರೆ. ಜೊತೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಎರಡು ದಿನಗಳಿಂದ ನಡೆಯುತ್ತಿರುವ ಇಂತಹ ಘಟನೆಗಳನ್ನು ಪ್ರಶ್ನಿಸಿದ್ದಾರೆ, ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿ ಮರಾಠಿ ಪತ್ರಿಕೆಯ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ.
शरद पवारांवर सोशल मीडियावर वादग्रस्त पोस्ट करणे भाजपच्या विनायक आंबेकर यांना भोवले; राष्ट्रवादीच्या कार्यकर्त्यांकडून मारहाण#pune #ncp #bjp pic.twitter.com/cKc3xEA59Q
— Lokmat (@lokmat) May 14, 2022

'ವಾಕ್ ಸ್ವಾತಂತ್ರ್ಯದ ಚಾಂಪಿಯನ್ಗಳಿಂದ ಕೃತ್ಯ'
ಮೇ 14 ರಂದು ಮರಾಠಿ ದೈನಿಕ ಲೋಕಮತ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಮಹಾರಾಷ್ಟ್ರದ ಬಿಜೆಪಿ ನಾಯಕನ ಮೇಲಿನ ಹಲ್ಲೆಯ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಪವಾರ್ ಮೇಲೆ ಮರಾಠಿಯಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಎನ್ಸಿಪಿ ಕಾರ್ಯಕರ್ತರು ಬಿಜೆಪಿಯ ವಿನಾಯಕ್ ಅಂಬೇಕರ್ ಅವರನ್ನು ಥಳಿಸಿದ್ದಾರೆ ಎಂದು ಬರೆಯಲಾಗಿದೆ. ಇದನ್ನು ರೀಟ್ವೀಟ್ ಮಾಡಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ ಅವರು, 'ವಾಕ್ ಸ್ವಾತಂತ್ರ್ಯದ ಚಾಂಪಿಯನ್ಗಳು ಹಿರಿಯ ನಾಗರಿಕರನ್ನು ಥಳಿಸಿದ್ದಾರೆ ಮತ್ತು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ. ಅವರು ನಿರ್ದಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತುಳಿಯುತ್ತಿದ್ದಾರೆ ಮತ್ತು ಅವರ ಒಡನಾಡಿಗಳು ಈ ಕ್ರಿಯೆಯನ್ನು ಪೂರ್ವನಿರ್ಧರಿತ ಮೌನದೊಂದಿಗೆ ನಡೆಯಲು ಅನುವು ಮಾಡಿಕೊಡುತ್ತಾರೆ' ಎಂದು ಬರೆದಿದ್ದಾರೆ.

ಎನ್ಸಿಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಚಂದ್ರಕಾಂತ್
ಮತ್ತೊಂದೆಡೆ ಮಹಾರಾಷ್ಟ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಕೂಡ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಮರಾಠಿಯಲ್ಲಿ ಬರೆದಿರುವ ಶೀರ್ಷಿಕೆಯಲ್ಲಿ 'ಮಹಾರಾಷ್ಟ್ರ ಪ್ರದೇಶ ಭಾರತೀಯ ಜನತಾ ಪಕ್ಷದ ವಕ್ತಾರ ವಿನಾಯಕ್ ಅಂಬೇಕರ್ ಅವರ ಮೇಲೆ ಎನ್ಸಿಪಿ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಬಿಜೆಪಿ ಪರವಾಗಿ ಈ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಎನ್ಸಿಪಿಯ ಈ ಗೂಂಡಾಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದಿದ್ದಾರೆ.

ಎನ್ಸಿಪಿ ಕಾರ್ಯಕರ್ತರ ವಿರುದ್ಧ ಪುಣೆ ಪೊಲೀಸರಿಗೆ ದೂರು
ಮತ್ತೊಂದೆಡೆ, ಅಂಬೇಕರ್ ಅವರು ತಮ್ಮ ಕಚೇರಿಗೆ ನುಗ್ಗಿ ಥಳಿಸಿದ ಸುಮಾರು 20 ಎನ್ಸಿಪಿ ಕಾರ್ಯಕರ್ತರ ವಿರುದ್ಧ ಪುಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಎನ್ಸಿಪಿ ಸಂಸದ ಗಿರೀಶ್ ಬಾಪಟ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಗಾಗಿ ಕ್ಷಮೆಯಾಚಿಸುವಂತೆ ಕೇಳಿಕೊಂಡರು ಎಂದು ಅವರು ಆರೋಪಿಸಿದ್ದಾರೆ. 'ಇಂದು ನನಗೆ ಯಾರೋ ಒಬ್ಬರು ತೆರಿಗೆ ಸಲಹೆಯನ್ನು ಬಯಸುತ್ತಾರೆ ಎಂದು ಕರೆ ಮಾಡಿದರು. ಈ ವ್ಯಕ್ತಿ 20 ಜನರೊಂದಿಗೆ ನನ್ನ ಕಚೇರಿಗೆ ಬಂದು ನನಗೆ ಕಪಾಳಮೋಕ್ಷ ಮಾಡಿದ್ದಾರೆ. ನನ್ನ ಕನ್ನಡಕವನ್ನು ಒಡೆದು ಹಾಕಿದ್ದಾರೆ' ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಬೇಕೆಂದರು.

ಮರಾಠಿ ನಟಿ ಬಂಧನ
ಈ ಹಿಂದೆ ಪವಾರ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ಗಳನ್ನು ಬರೆದಿದ್ದಾರೆ ಎಂದು ಆರೋಪಿಸಿ ಎನ್ಸಿಪಿ ಕಾರ್ಯಕರ್ತರು ಅಂಬೇಕರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಮಾತ್ರವಲ್ಲದೇ ಈ ಹಿಂದೆ ಎನ್ಸಿಪಿ ಅಧ್ಯಕ್ಷರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ಮರಾಠಿ ನಟಿ ಕೇತಕಿ ಚಿತಳೆ ಅವರನ್ನು ಥಾಣೆ ಪೊಲೀಸರು ಬಂಧಿಸಿದ್ದರು. ಮೇ 18ರವರೆಗೆ ಕೇತಕಿ ಚಿತಳೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.












Click it and Unblock the Notifications