ವಾಜಪೇಯಿ ನಿಧನದ ಸುದ್ದಿಯನ್ನು ಮುಚ್ಚಿಟ್ಟಿತ್ತು ಬಿಜೆಪಿ: ಶಿವಸೇನೆ
ಮುಂಬೈ, ಆಗಸ್ಟ್ 27: "ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೊದಲೇ ನಿಧನಾರಾಗಿದ್ದರೂ ಅವರ ನಿಧನದ ಸುದ್ದಿಯನ್ನು ಬಿಜೆಪಿ ಬೇಕೆಂದೇ ಮುಚ್ಚಿಟ್ಟಿತ್ತು" ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಸಂಶಯ ವ್ಯಕ್ತಪಡಿಸಿದ್ದಾರೆ.
ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಬರೆದ ಸಂಪಾದಕೀಯದಲ್ಲಿ ಈ ರೀತಿ ಬರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಭಾರತ ರಾಜಕೀಯದ ಮಿನುಗುತಾರೆ ಅಟಲ್ ಬಿಹಾರಿ ವಾಜಪೇಯಿ
"ಅಟಲ್ ಬಿಹಾರಿ ವಾಜಪೇಯಿ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಗಸ್ಟ್ 12 ಮತ್ತು 13 ರಂದೇ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಬಹುಶಃ ಅವರು ಮೊದಲೇ ನಿಧನರಾಗಿದ್ದರೂ ಬಿಜೆಪಿ ಅದನ್ನು ಮುಚ್ಚಿತ್ತಿತ್ತು" ಎಂದು ಅವರು ಬಿಜೆಪಿ ಮೇಲೆ ಆರೋಪದ ಸುರಿಮಳೆಗೈದಿದ್ದಾರೆ.
ಅಕಸ್ಮಾತ್ ವಾಜಪೇಯಿ ಅವರ ನಿಧನದ ಸುದ್ದಿಯನ್ನು ಸ್ವಾತಂತ್ರ್ಯ ದಿನ(ಆಗಸ್ಟ್ 15)ಕ್ಕೂ ಮೊದಲೇ ಘೋಷಿಸಿದರೆ, ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣ ಮಾಡುವುದ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಬೇಕೆಂದೇ ಬಿಜೆಪಿ ತಡವಾಗಿ ನಿಧನದ ಸುದ್ದಿಯನ್ನು ಘೋಷಿಸಿದೆ ಎಂದು ಅವರು ದೂರಿದ್ದಾರೆ.
"ಸ್ವರಾಜ್ಯ ಎಂದರೇನು?" ಎಂಬ ಶೀರ್ಷಿಕೆಯು ಅವರ ಲೇಖನ ಇದೀಗ ವಿವಾದ ಸೃಷ್ಟಿಸುತ್ತಿದೆ.