ಕೇಂದ್ರ ಮಂತ್ರಿ ಸ್ಥಾನದ ಆಫರ್: ಸುಪ್ರಿಯಾ ಸುಳೆ ಪ್ರತಿಕ್ರಿಯೆ ಏನು?
ನವದೆಹಲಿ, ಡಿಸೆಂಬರ್ 03: ಪ್ರಧಾನಿ ನರೇಂದ್ರ ಮೋದಿಯವರು ನನಗೆ ಕೇಂದ್ರ ಮಂತ್ರಿಸ್ಥಾನದ ಆಫರ್ ನೀಡಿದ್ದರು, ಆದರೆ ನಮ್ಮ ತಂದೆ ಶರದ್ ಪವಾರ್ ಅವರು ಅದನ್ನು ಅಷ್ಟೇ ಸೌಜನ್ಯವಾಗಿ ತಿರಸ್ಕರಿಸಿದರು ಎಂದು ಎನ್ಸಿಪಿ ನಾಯಕಿ ಸಂಸದೆ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್ಸಿಪಿ ಒಟ್ಟಿಗೆ ಕೆಲಸ ಮಾಡೋಣ ಎಂದು ಖುದ್ದು ಪ್ರಧಾನಿಯೇ ಅಹ್ವಾನಿಸಿದ್ದರು ಎಂಬ ಶರದ್ ಪವಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ನಾನು ಆ ಸಂದರ್ಭದಲ್ಲಿ ಅಲ್ಲಿರಲಿಲ್ಲ ಎಂದರು.
ನಮ್ಮ ತಂದೆ ಶರದ್ ಪವಾರ್ ಅವರಿಗೆ ದೊಡ್ಡ ಆಫರ್ ನೀಡಿದ್ದರು, ರಾಜ್ಯದಲ್ಲಿ ಒಟ್ಟಿಗೆ ಕೆಲಸ ಮಾಡುವ ಕುರಿತು ಮಾತನಾಡಿದ್ದರು. ಆದರೆ ಮಹಾರಾಷ್ಟ್ರದಲ್ಲಿ ವೈಯಕ್ತಿಕ ಸಂಬಂಧಗಳು ತುಂಬಾ ಮುಖ್ಯ ಅನಿಸುತ್ತವೆ ಎಂದು ಹೇಳಿದರು.
ಮೋದಿ ಮತ್ತು ಶರದ್ ಪವಾರ್ ಮಧ್ಯೆ ಒಳ್ಳೆಯ ಸಂಬಂಧವಿದ್ದರೂ, ಬಿಜೆಪಿ ಮತ್ತು ಎನ್ಸಿಪಿ ಸಿದ್ದಾಂತಗಳು ಬೇರೆ ಬೇರೆಯಾಗಿವೆ. ಸೈದ್ದಾಂತಿಕ ವ್ಯತ್ಯಾಸ ಇರುವಲ್ಲಿ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಸುಪ್ರಿಯಾ ಸುಳೆ ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿ ನೀಡಿದ್ದ ಬಿಗ್ ಆಫರ್ ಸತ್ಯ ಬಿಚ್ಚಿಟ್ಟ ಶರದ್ ಪವಾರ್
ಶರದ್ ಪವಾರ್ ಕೇವಲ ನನ್ನ ತಂದೆ ಅಲ್ಲ, ನನ್ನ ಗುರು. ಅವರು ಪಕ್ಷದ ರಾಷ್ಟ್ರಾಧ್ಯಕ್ಷರು, ನನ್ನ ಗುರು ಯಾವಾಗಲೂ ಸರಿ ಇರುತ್ತಾರೆ ಎಂಬುದೂ ನಿಮಗೂ ಗೊತ್ತಿದೆ ಎಂದು ಹೇಳಿದರು.
ದೊಡ್ಡ್ ಆಫರ್ ಸಹ ನೀಡಿದ್ದರು
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ನಾವು, ನೀವು ಮಹಾರಾಷ್ಟ್ರದಲ್ಲಿ ಒಟ್ಟಿಗೆ ಕೆಲಸ ಮಾಡೋಣ ಎಂದು ಹೇಳಿದ್ದರು, ಜೊತೆಗೆ ದೊಡ್ಡ ಅಫರ್ ಕೊಟ್ಟಿದ್ದರು ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದರು.
ಮಹಾರಾಷ್ಟ್ರದ ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಸಂದರ್ಭವೊಂದರಲ್ಲಿ ಈ ಕುರಿತು ಮಾತನಾಡಿದ್ದಾರೆ. ನಾವು ಒಟ್ಟಿಗೆ ಕೆಲಸ ಮಾಡೋಣ ಎಂದು ಬಯಸಿರಬಹುದು, ಆದರೆ ಅದು ಸಾಧ್ಯವಿಲ್ಲ ಎಂದು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಮಾಡಲ್ಲ ಅಂದಿದ್ದರು
ವೈಯಕ್ತಿಕವಾಗಿ ನಮ್ಮ ನಿಮ್ಮ ಸಂಬಂಧ ಚೆನ್ನಾಗಿಯೇ ಇದೆ, ಅದು ಹಾಗೆಯೇ ಇರಲಿ ಎಂದು ಬಯಸುತ್ತೇನೆ ಎಂದು ನರೇಂದ್ರ ಮೋದಿಗೆ ತಿಳಿಸಿದ್ದೇನೆ ಎಂದು ಶರದ್ ಪವಾರ್ ಸಂದರ್ಶನದಲ್ಲಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಪವಾರ್ ಬಿಜೆಪಿ ತಮ್ಮನ್ನು ರಾಷ್ಟ್ರಪತಿ ಮಾಡುತ್ತೇನೆಂದು ಹೇಳಿಲ್ಲ, ಬದಲಾಗಿ ತಮ್ಮ ಮಗಳು ಸುಪ್ರಿಯಾ ಸುಳೆ ಅವರನ್ನು ಕೇಂದ್ರ ಮಂತ್ರಿ ಮಾಡುತ್ತೇವೆಂದು ಭರವಸೆ ನೀಡಿದ್ದರು ಎಂದು ತಿಳಿಸಿದರು.
ಎನ್ಸಿಪಿ ಮುಖಂಡ ದಿಲೀಪ್ ''ಮಹಾ'' ಹಂಗಾಮಿ ಸ್ಪೀಕರ್
ಬಿಜೆಪಿಯಿಂದ ಬಹುಮತ ಸಾಬೀತು ಮಾಡಲಾಗಲಿಲ್ಲ
ಸುಪ್ರಿಯಾ ಸುಳೆ ಶರದ್ ಪವಾರ್ ಅವರ ಮಗಳು, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭಾರಮತಿ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದಾರೆ. ಶರದ್ ಪವಾರ್ ಅವರು ಹದಿನೈದು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್ಸಿಪಿ ಕೂಡಿಕೊಂಡು ಸರ್ಕಾರ ರಚಿಸುತ್ತವೆ ಎಂದು ಸುದ್ದಿಯಾಗಿತ್ತು.
ಆದರೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಿಎಂ ಆಗಿ, ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬಹುಮತ ಇಲ್ಲದ ಕಾರಣ ರಾಜೀನಾಮೆ ಕೊಡಬೇಕಾಗಿ ಬಂತು.
ರಾಜ್ಯಸಭೆಯಲ್ಲಿ ಎನ್ಸಿಪಿ ಹೊಗಳಿದ್ದ ಮೋದಿ
ಸದ್ಯ ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸೇರಿಕೊಂಡು ಮೈತ್ರಿ ಸರ್ಕಾರ ರಚಿಸಿಕೊಂಡಿದ್ದು, ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದು, ಅವರ ಜೊತೆ 6 ಜನ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಮೋದಿ, ಶರದ್ ಪವಾರ್ ಅವರನ್ನು ಹೊಗಳಿದ್ದರು, ಈ ಕುರಿತು ತಮ್ಮ ಪಕ್ಷದ ಮುಖಂಡರಿಗೂ ಸೂಚನೆ ನೀಡಿದ್ದರು. ಪ್ರಧಾನಿ ಮೋದಿ, ಕಳೆದು ತಿಂಗಳು ರಾಜ್ಯಸಭೆಯ 250ನೇ ಅಧಿವೇಶನದ ಸಂದರ್ಭದಲ್ಲಿ ಮಾತನಾಡುವಾಗ, ಸಂಸತ್ತಿನ ಮಾನದಂಡಗಳನ್ನು ಹೇಗೆ ಪಾಲಿಸಬೇಕೆಂದು ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಕಲಿಯಬೇಕೆಂದು ಹೇಳಿದ್ದರು.