ಅಂಬಾನಿ ನಿವಾಸದೆದುರು ಸ್ಪೋಟಕ ವಾಹನ ಪತ್ತೆ ಪ್ರಕರಣ: ರಹಸ್ಯವನ್ನು ಬಯಲಿಗೆಳೆಯುತ್ತೇವೆ ಎಂದ ಉದ್ಧವ್ ಠಾಕ್ರೆ
ಮುಂಬೈ, ಮಾರ್ಚ್ 09: ಮುಕೇಶ್ ಅಂಬಾನಿ ನಿವಾಸದೆದುರು ಸ್ಫೋಟಕ ತುಂಬಿದ ಸ್ಕಾರ್ಪಿಯೋ ಪ್ರಕರಣಕ್ಕೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಟ್ವಿಸ್ಟ್ ನೀಡಿದ್ದಾರೆ.
ಒಂದೆಡೆ ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಪೋಟಕಗಳನ್ನು ತುಂಬಿದ ವಾಹನವನ್ನು ಜಪ್ತಿ ಮಾಡಿರುವ ಪ್ರಕರಣದ ತನಿಖೆಯನ್ನು ಸೋಮವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೈಗೆತ್ತಿಕೊಂಡಿದೆ.
ಈ ಪ್ರಕರಣದಲ್ಲಿ ಏನೋ ರಹಸ್ಯ ಅಡಗಿದೆ. ಆದ್ದರಿಂದಲೇ ಎನ್ಐಎ ತನಿಖೆಯನ್ನು ವಹಿಸಿಕೊಂಡಿದೆ. ಅದೇನೆಂದು ನಾವು ಖಚಿತವಾಗಿ ಬಯಲಿಗೆಳೆಯುತ್ತೇವೆ. ವಿರೋಧ ಪಕ್ಷಕ್ಕೆ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು.
ಎನ್ಐಎಗೆ ಈ ಪ್ರಕರಣವನ್ನು ಒಪ್ಪಿಸಿರುವುದು ಉದ್ಧವ್ ಠಾಕ್ರೆ ಸರ್ಕಾರದ ಹುಬ್ಬೇರುವಂತೆ ಮಾಡಿದೆ. ಈ ಕುರಿತು ಅವರು ಪ್ರತಿಕ್ರಿಯಿಸಿದ್ದು, ಈ ಪ್ರಕರಣದಲ್ಲಿ ಏನೋ ಇದೆ, ಆದ್ದರಿಂದಲೇ ಎನ್ಐಎ ತನಿಖೆಯನ್ನು ವಹಿಸಿಕೊಂಡಿದೆ. ಅದೇನೆಂದು ಖಚಿತವಾಗಿಯೂ ಬಯಲಿಗೆಳೆಯುತ್ತೇವೆ ಎಂದರು.

ಗೃಹಸಚಿವಾಲಯದ ಆದೇಶದಂತೆ ಪ್ರಕರಣ ತನಿಖೆ
ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಎನ್ಐಎ ಈ ಪ್ರಕರಣ ವನ್ನು ಕೈಗೆತ್ತಿಕೊಳ್ಳುತ್ತಿರುವುದಾಗಿ ತನಿಖಾ ಸಂಸ್ಥೆಯ ವಕ್ತಾರರು ಸೋಮವಾರ ತಿಳಿಸಿದರು. ಎಸ್ಯುವಿ ಪತ್ತೆಯಾದ ಪ್ರಕರಣವನ್ನು ಎನ್ಐಎ ವಹಿಸಿಕೊಂಡಿದ್ದರೂ, ಎಸ್ಯುವಿ ಒಡೆತನ ಹೊಂದಿರುವ ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೆನ್ ಸಾವಿನ ಬಗ್ಗೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆ ಮುಂದುವರಿಸಲಿದೆ ಎಂದು ಗೃಹ ಸಚಿವ ಅನಿಲ್ ದೇಶ್ಮುಖ್ ತಿಳಿಸಿದ್ದಾರೆ.

ಭಯೋತ್ಪಾದನ ನಿಗ್ರಹ ಪಡೆಗೆ ವಹಿಸಿತ್ತು
ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿಯ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರವು 'ಸ್ಕಾರ್ಪಿಯೊ' ಪ್ರಕರಣವನ್ನು ಭಯೋತ್ಪಾದನ ನಿಗ್ರಹ ಪಡೆ (ಎಟಿಎಸ್)ಗೆ ವಹಿಸಿತ್ತು. ಅದರ ಮರುದಿನವೇ ಪ್ರಕರಣವನ್ನು ಎನ್ಐಎ ಕೈಗೆತ್ತಿಕೊಂಡಿದೆ.

ಸಂಸದ ಡೆಲ್ಕರ್ ಆತ್ಮಹತ್ಯೆ ಬಗ್ಗೆ ತನಿಖೆ
ಹಲವರ ಹೆಸರುಗಳನ್ನು ಉಲ್ಲೇಖಿಸಿ, ಅನುಮಾನಾಸ್ಪದವಾಗಿ ಮೃತಪಟ್ಟಿರುವ ದಾದ್ರಾ ಮತ್ತು ನಗರ ಹವೇಲಿ ಸಂಸದ ಮೋಹನ್ ಡೆಲ್ಕರ್ ಅವರ ಆತ್ಮಹತ್ಯೆ ಬಗ್ಗೆ ಆಳವಾದ ತನಿಖೆ ನಡೆಸುವುದಾಗಿಯೂ, ತಪ್ಪಿತಸ್ಥರನ್ನು ದಂಡಿಸುವುದಾಗಿಯೂ ಠಾಕ್ರೆ ತಿಳಿಸಿದರು.

ಫೆಬ್ರವರಿ 25ರಂದು ಅಂಬಾನಿ ಮನೆ ಎದುರು ಸ್ಕಾರ್ಪಿಯೋ ಪತ್ತೆ
ಫೆಬ್ರವರಿ 25ರಂದು ಉಂಬೈನ ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ 20 ಜಿಲೆಟಿನ್ ಕಡ್ಡಿಗಳಿದ್ದ ಸ್ಕಾರ್ಪಿಯೋ ವಾಹನ ಪತ್ತೆಯಾಗಿತ್ತು. ಪೊಲೀಸರು ಅದನ್ನು ಜಪ್ತಿ ಮಾಡಿದ್ದರು.












Click it and Unblock the Notifications