ಮಹಾರಾಷ್ಟ್ರದಲ್ಲಿ ಇನ್ನು 15 ದಿನದಲ್ಲಿ ಮತ್ತಿಬ್ಬರು ಸಚಿವರ ರಾಜೀನಾಮೆ: ಬಿಜೆಪಿ
ಮುಂಬೈ, ಏಪ್ರಿಲ್ 8: ಮಹಾರಾಷ್ಟ್ರದಲ್ಲಿ ಮುಂದಿನ 15 ದಿನಗಳಲ್ಲಿ ಇನ್ನೂ ಇಬ್ಬರು ಸಚಿವರು ರಾಜೀನಾಮೆ ನೀಡಲಿದ್ದಾರೆ. ಅಲ್ಲಿದೆ ರಾಜ್ಯವು ರಾಷ್ಟ್ರಪತಿ ಆಡಳಿತಕ್ಕೆ ಸೂಕ್ತವಾಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಗುರುವಾರ ಹೇಳಿದ್ದಾರೆ.
ತಮ್ಮನ್ನು ಹುದ್ದೆಗೆ ಮರಳಿ ಸೇರಿಸಿಕೊಳ್ಳಲು 2 ಕೋಟಿ ರೂ ನೀಡುವಂತೆ ಮತ್ತು ಪ್ರತಿ ತಿಂಗಳೂ ಹಣ ಸಂಗ್ರಹಿಸುವಂತೆ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಸೂಚಿಸಿದ್ದರು. ಅಲ್ಲದೆ, ಮುಂಬೈ ಮಹಾನಗರ ಪಾಲಿಕೆ ಗುತ್ತಿಗೆದಾರರಿಂದ ಹಣ ಸಂಗ್ರಹಿಸುವಂತೆ ಸಾರಿಗೆ ಸಚಿವ ಅನಿಲ್ ಪರಬ್ ಹೇಳಿದ್ದರು ಎಂದು ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಎನ್ಐಎಗೆ ಪತ್ರ ಬರೆದ ಮರುದಿನ ಚಂದ್ರಕಾಂತ್ ಪಾಟೀಲ್ ಈ ಹೇಳಿಜೆ ನೀಡಿದ್ದಾರೆ.
ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಎನ್ಸಿಪಿ ಮುಖಂಡ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್, ಸಿಬಿಐನಿಂದ ಪ್ರಾಥಮಿಕ ವಿಚಾರಣೆಗೆ ಆದೇಶಿಸಿತ್ತು. ಬಳಿಕ ಅನಿಲ್ ದೇಶ್ಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಶಿವಸೇನಾ ಮುಖಂಡ ಅನಿಲ್ ಪರಬ್ ತಮ್ಮ ವಿರುದ್ಧ ವಾಜೆ ಮಾಡಿರುವ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಅದರ ಬೆನ್ನಲ್ಲೇ ಚಂದ್ರಕಾಂತ್ ಪಾಟೀಲ್ ನೀಡಿರುವ ಹೇಳಿಕೆ, ಈ ಪ್ರಕರಣದಲ್ಲಿ ಮತ್ತಷ್ಟು ಮುಖಂಡರ ಹೆಸರು ಬರಲಿದೆ ಎಂಬ ಸೂಚನೆ ನೀಡಿದೆ.
'ಮುಂದಿನ 15 ದಿನಗಳಲ್ಲಿ ರಾಜ್ಯದ ಇನ್ನಿಬ್ಬರು ರಾಜೀನಾಮೆ ನೀಡಬೇಕಾಗಲಿದೆ. ಈ ಸಚಿವರ ವಿರುದ್ಧ ಕೆಲವು ಜನರು ಕೋರ್ಟ್ಗೆ ಹೋಗಲಿದ್ದಾರೆ. ಬಳಿಕ ಅವರು ಅಧಿಕಾರ ತ್ಯಜಿಸಬೇಕು' ಎಂದು ಪಾಟೀಲ್ ಹೇಳಿದ್ದಾರೆ. ಆದರೆ ಅದರ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ. ಪಾಟೀಲ್ ಹೇಳಿದಂತೆ ಒಂದು ಹೆಸರು ಅನಿಲ್ ಪರಬ್ ಅವರದ್ದಾಗಿದ್ದರೆ, ಇನ್ನೊಬ್ಬ ಸಚಿವ ಯಾರು ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications