ಅಯೋಧ್ಯೆ ಭೂಮಿಪೂಜೆ ಬೆನ್ನಲ್ಲೇ ಗಂಭೀರ ಹೇಳಿಕೆ ನೀಡಿದ ಶಿವಸೇನೆ
ಮುಂಬೈ, ಆ 5: ಪ್ರಧಾನಿ ಮೋದಿ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಮಾಡುತ್ತಿದ್ದಂತೆಯೇ, ಶಿವಸೇನೆ ತಮ್ಮ ಮುಖವಾಣಿ ಸಾಮ್ನಾದಲ್ಲಿ, ಪರೋಕ್ಷವಾಗಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
"ಅಯೋಧ್ಯೆಯಲ್ಲಿ ಇಂದು ಎಲ್ಲಿ ರಾಮ ಮಂದಿರಕ್ಕೆ ಭೂಮಿಪೂಜೆ ಮಾಡಲಾಯಿತೋ, ಆ ಮಣ್ಣಿನಲ್ಲಿ, ಕರಸೇವಕರ ತ್ಯಾಗ ಬಲಿದಾನವಿದೆ ಎನ್ನುವುದನ್ನು ಯಾರು ಮರೆಯಬಾರದು. ಮರೆತವರು, ರಾಮ ದ್ರೋಹಿಗಳು"ಎಂದು ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.
"ಭೂಮಿಪೂಜೆ ಕಾರ್ಯಕ್ರಮ ಇಡೀ ದೇಶಕ್ಕೆ ಸಂಬಂಧಪಟ್ಟಿದ್ದು ಮತ್ತು ಸಮಸ್ತ ಹಿಂದೂಗಳ ಸಮಾರಂಭ. ಮಂದಿರ ನಿರ್ಮಾಣದ ಕ್ರೆಡಿಟ್ ಅನ್ನು ಯಾವ ಪಕ್ಷವೂ ತೆಗೆದುಕೊಳ್ಳಬಾರದು" ಎಂದು ಸಾಮ್ನಾದಲ್ಲಿ ಹೇಳಲಾಗಿದೆ.

ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪು ನೀಡಿದ ಮಾಜಿ ಸಿಜಿಐ ರಂಜನ್ ಗೊಗೋಯ್ ಅವರನ್ನೂ ಭೂಮಿಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ ಎಂದು ಶಿವಸೇನೆ ಬೇಸರ ವ್ಯಕ್ತ ಪಡಿಸಿದೆ.
"ಭೂಮಿಪೂಜೆ ಕಾರ್ಯಕ್ರಮಕ್ಕೆ ಶಿವಸೇನೆಯನ್ನೂ ಆಹ್ವಾನಿಸಲಿಲ್ಲ. ಬಾಬ್ರಿ ಮಸೀದಿ ಧ್ವಂಸಗೊಳಿಸುವಲ್ಲಿ ಶಿವಸೇನೆ ಪ್ರಮುಖ ಪಾತ್ರವನ್ನು ವಹಿಸಿತ್ತು. ಶಿವಸೇನೆ, ವಿಎಚ್ಪಿ, ಭಜರಂಗದಳ, ಆರ್ ಎಸ್ ಎಸ್ ಕಾರ್ಯಕರ್ತರು ಲಾಠಿ ಏಟು ತಿಂದದ್ದು ಎನ್ನುವುದನ್ನು ಯಾರೂ ಮರೆಯಬಾರದು. " ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
"ಮಂದಿರ ನಿರ್ಮಾಣ ಸಂಬಂಧದ ಕಾನೂನು ತೊಡಕುಗಳು ಪರಿಹಾರಗೊಂಡಿದ್ದು ಮೋದಿಯವರ ಕಾಲದಲ್ಲಿ. ಇಲ್ಲದಿದ್ದರೆ, ಗೊಗೋಯ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತಿರಲಿಲ್ಲ"ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.












Click it and Unblock the Notifications