ಹೆತ್ತವಳ ಕತ್ತು ಕತ್ತರಿಸಿದ ಕುಲಪುತ್ರ: 36 ಗಂಟೆ ದೇಹವಿತ್ತು ಮಗನ ಹತ್ರ!
ನವದೆಹಲಿ, ಜನವರಿ.10: ಗಂಡು ಮಕ್ಕಳು, ಗಂಡು ಮಕ್ಕಳು ಎನ್ನುವ ಪೋಷಕರು ಈ ಕಥೆಯನ್ನೊಮ್ಮೆ ಓದಲೇಬೇಕು. ಗಂಡು ಮಗುವಿಗಾಗಿ ಹಪಹಪಿಸುವ ಹೆತ್ತವರು ಈ ಸ್ಟೋರಿ ನೋಡಿಯಾದರೂ ಪಾಠ ಕಲಿಯಬೇಕು. ಮಹಾರಾಷ್ಟ್ರದಲ್ಲಿ ನಡೆದ ಘಟನೆ ಇಂದು ಮಾನವ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.
ಮದ್ಯಪಾನ ಬೇಡ ಎಂದು ಬುದ್ಧಿ ಹೇಳಿದ ತಾಯಿಯನ್ನು ಮಗನೇ ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮುಂಬೈನ ಕುರ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೊಂದ ತಾಯಿಯ ಮೃತದೇಹವನ್ನು 36 ಗಂಟೆಗಳ ಕಾಲ ಮನೆಯಲ್ಲೇ ಇರಿಸಿಕೊಂಡಿದ್ದ ಎಂಬ ಆಘಾತಕಾರಿ ವಿಚಾರ ಪೊಲೀಸ್ ವಿಚಾರಣೆ ವೇಳೆ ಹೊರ ಬಿದ್ದಿದೆ.
ತೆಲಂಗಾಣ ಆಯ್ತು, ನೆರೆಯ ಆಂಧ್ರದಲ್ಲಿಯೂ ಕಾಮುಕರ ಅಟ್ಟಹಾಸ: ವೃದ್ಧೆಯ ಅತ್ಯಾಚಾರ, ಕೊಲೆ
ಕಳೆದ ಡಿಸೆಂಬರ್.30ರಂದು ವಿದ್ಯಾವಿಹಾರ್ ದ ನಾವೆಲ್ ಗೇಟ್ ಬಳಿ ರುಂಡವಿಲ್ಲದ ಮೃತದೇಹವೊಂದು ಪತ್ತೆಯಾಗಿತ್ತು. ಈ ಮೃತದೇಹವು ಖೈರುನ್ನಿಸ್ಸಾ ಶೇಖ್ ಎಂಬ ಮಹಿಳೆಯದ್ದು ಎಂದು ಪೊಲೀಸರು ವಿಚಾರಣೆ ವೇಳೆ ಪತ್ತೆ ಮಾಡಿದ್ದರು. ವಿಚಾರಣೆಯನ್ನು ಚುರುಕುಗೊಳಿಸುತ್ತಿದ್ದಂತೆ ಪೊಲೀಸರೇ ಬೆಚ್ಚಿ ಬೀಳುವಂತಾ ವಿಚಾರ ಬೆಳಕಿಗೆ ಬಂದಿದೆ.
ಬುದ್ಧಿ ಮಾತು ಹೇಳಿದ್ದಕ್ಕೆ ಹೆತ್ತವಳನ್ನೇ ಕೊಂದ ಪಾಪಿ
ಡಿಸೆಂಬರ್. 28, 2019ರಂದು ಖೈರುನ್ನಿಸ್ಸಾ ಶೇಖ್ ರನ್ನು ಪುತ್ರ ಸೊಹೈಲ್ ಶೇಖ್ ನೇ ಕೊಂದಿದ್ದಾನೆ ಎಂದು ಘಟ್ಕೋಪರ್ ಠಾಣೆ ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಮದ್ಯಪಾನ ಮಾಡಿ ಬಂದಿದ್ದ ಪಾಪಿ ಪುತ್ರನಿಗೂ ಹಾಗೂ ತಾಯಿಗೂ ಮಾತಿನ ಚಕಮಕಿ ನಡೆದಿದೆ. ಕೆಲಸವಿಲ್ಲದೇ ಮದ್ಯಪಾನ ಮಾಡುತ್ತಾ ಓಡಾಡುವುದನ್ನು ಬಿಡುವಂತೆ ಹೇಳಿದ್ದಕ್ಕೆ ಕುಪಿತಗೊಂಡ ಆರೋಪಿ ತಾಯಿಯ ಕತ್ತು ಹಿಸುಕಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದಿದ್ದಾನೆ.
ನೀರಿನಂತೆ ಹರಿದಿತ್ತು ಹೆತ್ತವಳ ನೆತ್ತರು
ಕೊಲೆ ಬಳಿಕ ತಾಯಿ ದೇಹವನ್ನೇ ತುಂಡು ತುಂಡಾಗಿ ಕತ್ತರಿಸುವ ಮೂಲಕ ಆರೋಪಿ ಸೊಹೈಲ್ ಶೇಖ್ ವಿಕೃತಿ ಮೆರೆದಿದ್ದಾನೆ. ಕೈ ಬೆರಳು, ರುಂಡ, ಮುಂಡವನ್ನು ಬೇರೆ ಬೇರೆ ಮಾಡಿದ್ದಾನೆ. ನೆತ್ತರು ಹರಿಯುತ್ತಿದ್ದ ಮೃತದೇಹವನ್ನು ಬಚ್ಚಲು ಮನೆಗೆ ತೆಗೆದುಕೊಂಡು ಹೋಗಿ ಅಲ್ಲಿ ರಕ್ತವನ್ನೆಲ್ಲ ತೊಳೆದಿದ್ದಾನೆ.
ಎಸಿಯಲ್ಲಿ ಇಟ್ಟಿದ್ದ ಹೆತ್ತವಳ ಮೃತದೇಹ
ರುಂಡವಿಲ್ಲದ ತಾಯಿಯ ಮೃತದೇಹವು ಕೊಳೆಯದಂತೆ ನೋಡಿಸೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಮನೆಯ ಹವಾನಿಯಂತ್ರಿತ ಕೋಣೆಯಲ್ಲಿ(ಎಸಿ ರೂಮ್) ಮೃತದೇಹವನ್ನು ಕನಿಷ್ಠ 36 ಗಂಟೆಗಳ ಕಾಲ ಇಟ್ಟಿದ್ದನು ಎಂದು ವಿಚಾರಣೆ ವೇಳೆ ಆರೋಪಿ ಸೊಹೈಲ್ ಖಾನ್ ಒಪ್ಪಿಕೊಂಡಿದ್ದಾನೆ.
50 ಸಾವಿರಕ್ಕೆ ಹೆತ್ತವಳ ಬಳೆ ಮಾರಾಟ ಮಾಡಿದ್ದ ಭೂಪ
ದುಶ್ಚಟಗಳಿಗೆ ದಾಸನಾಗಿದ್ದ ಸೊಹೈಲ್ ಖಾನ್ ಮದುವೆಯಾಗಿದ್ದರೂ, ಪತ್ನಿ ಆತನನ್ನು ಬಿಟ್ಟು ಹೋಗಿದ್ದಳು ಎನ್ನಲಾಗಿದೆ. ತಾಯಿಯನ್ನು ಕೊಂದ ಆರೋಪಿ ಆಕೆಯ ಕೈಯಲ್ಲಿದ್ದ ಬಳೆಗಳನ್ನು 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಅದರಲ್ಲಿ 25 ಸಾವಿರ ರೂಪಾಯಿ ಹಣವನ್ನು ಬಾರ್ ನಲ್ಲಿ ಪರಿಚಯವಾದ ಗೆಳತಿಗೆ ನೀಡಿದ್ದಾನೆ. ಉಳಿದಂತೆ ಅಡವಿಟ್ಟಿದ್ದ ಬೈಕ್ ಬಿಡಿಸಿಕೊಳ್ಳಲು 20 ಸಾವಿರ ರೂಪಾಯಿ ನೀಡಿದ್ದಾನೆ. ಆರಂಭದಲ್ಲಿ ಪೊಲೀಸರ ತನಿಖೆಯ ದಿಕ್ಕನ್ನೇ ತಪ್ಪಿಸಲು ಪ್ರಯತ್ನಿಸಿದ ಆರೋಪಿಗೆ ಮರುಪ್ರಶ್ನೆ ಹಾಕುತ್ತಿದ್ದಂತೆ ಆರೋಪಿಯ ನಿಜಬಣ್ಣ ಬಯಲಾಗಿದೆ.