ಎನ್ಎಸ್ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣ ಮನೆ ಮೇಲೆ ಐಟಿ ದಾಳಿ
ನವದೆಹಲಿ, ಫೆಬ್ರವರಿ 17: ಎನ್ಎಸ್ಇ ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಅವರು ಮತ್ತು ಇತರರ ವಿರುದ್ಧ ತೆರಿಗೆ ವಂಚನೆ ತನಿಖೆಯ ಭಾಗವಾಗಿ ಮುಂಬೈನಲ್ಲಿ ಆದಾಯ ತೆರಿಗೆ ಇಲಾಖೆ ಗುರುವಾರ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇತ್ತೀಚಿನ ಸೆಬಿ ಆದೇಶದ ನಂತರ ರಾಮಕೃಷ್ಣ ಅವರು ಸುದ್ದಿಯಲ್ಲಿದ್ದಾರೆ. ಹಿಮಾಲಯದ ಯೋಗಿಯೊಬ್ಬರು, ಆನಂದ್ ಸುಬ್ರಮಣಿಯನ್ ಅವರನ್ನು ಎಕ್ಸ್ಚೇಂಜ್ನ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ (ಎಂಡಿ) ಸಲಹೆಗಾರರಾಗಿ ನೇಮಕ ಮಾಡಿದ್ದಾರೆ ಎಂಬ ವಿಚಾರವು ಸುದ್ದಿಯಲ್ಲಿದೆ. ಈ ನಡುವೆ ದಾಳಿ ನಡೆದಿದೆ.
ಪರಿಚಯವೇ ಇಲ್ಲದ ಯೋಗಿ ಮಾತಿನಂತೆ ನಿರ್ಧಾರ ಕೈಗೊಂಡಿದ್ದ ಎನ್ಎಸ್ಇ ಮಾಜಿ ಸಿಇಒ!
ಆಕೆಯ ಮತ್ತು ಇತರರ ವಿರುದ್ಧ ತೆರಿಗೆ ವಂಚನೆ ಮತ್ತು ಹಣಕಾಸಿನ ಅಕ್ರಮಗಳ ಆರೋಪಗಳನ್ನು ಪರಿಶೀಲಿಸುವ ಗುರಿಯನ್ನು ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿತ್ರಾ ರಾಮಕೃಷ್ಣ ಅವರು 2013 ಮತ್ತು 2016 ರ ನಡುವೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿದ್ದರು ಮತ್ತು "ವೈಯಕ್ತಿಕ ಕಾರಣಗಳನ್ನು" ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು.
ಗೌಪ್ಯ ಮಾಹಿತಿ ಸೋರಿಕೆ ಆರೋಪ
ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್ಚೇಂಜ್ ಎನ್ಎಸ್ಇಯ ಮಾಜಿ ಮುಖ್ಯಸ್ಥರು ಚಿತ್ರಾ ರಾಮಕೃಷ್ಣ ಹಿಮಾಲಯದ ಓರ್ವ ಯೋಗಿಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಯೋಗಿಯ ಸಲಹೆಯನ್ನು ಪಡೆದು ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ತಿಳಿಸಿದೆ.
4 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯದ ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ ಎನ್ಎಸ್ಇ (NSE)ಗೆ ಮಾಜಿ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಚಿತ್ರಾ ರಾಮಕೃಷ್ಣ ತಾನು ನೋಡದ, ತನಗೆ ಪರಿಚಯವೇ ಇಲ್ಲದ ಹಿಮಾಲಯದ ಯೋಗಿಯೋರ್ವರ ಸಲಹೆಯನ್ನು ಪಡೆದುಕೊಂಡೇ ನಿರ್ಧಾರವನ್ನು ಕೈಗೊಳ್ಳುತ್ತಿದ್ದರು. NSEಯ ಪ್ರಮುಖ ವ್ಯವಹಾರ ಯೋಜನೆಗಳು ಮತ್ತು ಅಜೆಂಡಾ ಸೇರಿದಂತೆ ಹಲವಾರು ವಿಚಾರಗಳನ್ನು ಆ ಅಪರಿಚಿತ ಯೋಗಿಯೊಂದಿಗೆ ಹಂಚಿಕೊಂಡಿದ್ದಾರೆ ಎಂಬ ವಿಚಾರವನ್ನು ಸೆಬಿ ಬಹಿರಂಗಪಡಿಸಿದೆ.
"ಎನ್ಎಸ್ಇಯ ಹಣಕಾಸು ಮತ್ತು ವ್ಯವಹಾರ ಯೋಜನೆಗಳ ಮಾಹಿತಿ ಹಂಚಿಕೆಯು, ಊಹೆಗೂ ನಿಲುಕದ, ಸ್ಟಾಕ್ ಎಕ್ಸ್ಚೇಂಜ್ನ ತಳಹದಿಯನ್ನೇ ಅಲುಗಾಡಿಸಬಲ್ಲ ಕಾರ್ಯವಾಗಿದೆ," ಸೆಬಿ ತನ್ನ ಆದೇಶದಲ್ಲಿ ಉಲ್ಲೇಖ ಮಾಡಿದ್ದು, ಚಿತ್ರಾ ರಾಮಕೃಷ್ಣ ಸೇರಿದಂತೆ ಹಲವು ಅಧಿಕಾರಿಗಳಿಗೆ ಈ ಸಂಬಂಧವನ್ನು ದಂಡವನ್ನು ವಿಧಿಸಿದೆ.
ದಂಡ ವಿಧಿಸಿರುವ ಸೆಬಿ
"ವೈಯಕ್ತಿಕ ಕಾರಣಗಳನ್ನು" ಉಲ್ಲೇಖಿಸಿ 2016 ರಲ್ಲಿ ಎನ್ಎಸ್ಇ ತೊರೆದ ರಾಮಕೃಷ್ಣ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಸಾಂಸ್ಥಿಕ ಆಡಳಿತದ ಲೋಪದೋಷಗಳ ಆರೋಪಗಳು ಹಲವಾರು ವರ್ಷಗಳಿಂದ NSE ಎದುರಿಸುತ್ತಿದೆ. ಎನ್ಎಸ್ಸಿ 2017 ರಲ್ಲಿ ಐಪಿಒ ಆರಂಭ ಮಾಡಿತ್ತು. ಆದರೆ ಇದರಲ್ಲಿ ಹಲವಾರು ಲೋಪ ದೋಷಗಳು ಕಂಡು ಬಂದಿದೆ ಎಂಬ ಆರೋಪ ಕೇಳಿ ಬಂದಿತ್ತು. ಮೂರು ವರ್ಷಗಳ ತನಿಖೆಯ ನಂತರ, ಸೆಬಿ ಈ ಮಾಹಿತಿಯನ್ನು ಹೊರಹಾಕಿದ್ದು, ಸುಮಾರು 90 ಮಿಲಿಯನ್ ಡಾಲರ್ ದಂಡವನ್ನು ವಿಧಿಸಿದೆ. ಆರು ತಿಂಗಳವರೆಗೆ ಸೆಕ್ಯುರಿಟೀಸ್ ಮಾರುಕಟ್ಟೆಗಳಲ್ಲಿ ಹಣವನ್ನು ಸಂಗ್ರಹಿಸುವುದನ್ನು ನಿರ್ಬಂಧ ಮಾಡಿದೆ.
ಇನ್ನು ಚಿತ್ರಾ ರಾಮಕೃಷ್ಣ ಆ ಅಪರಿಚಿತ ವ್ಯಕ್ತಿಯನ್ನು "ಆಧ್ಯಾತ್ಮಿಕ ಶಕ್ತಿ" ಎಂದು ಕರೆಯುತ್ತಿದ್ದು, 20 ವರ್ಷಗಳಿಂದ ಮಾರ್ಗದರ್ಶನವನ್ನು ಪಡೆದಿದ್ದರು ಎಂದು ಕೂಡಾ ವರದಿಯು ಉಲ್ಲೇಖ ಮಾಡಿದೆ. "ಆಧ್ಯಾತ್ಮಿಕ ಸ್ವಭಾವದ" ವ್ಯಕ್ತಿಯೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದು ಗೌಪ್ಯತೆ ಅಥವಾ ಸಮಗ್ರತೆಗೆ ರಾಜಿಯಾಗುವುದಿಲ್ಲ ಎಂದು ಚಿತ್ರಾ ರಾಮಕೃಷ್ಣ ತನ್ನ ಪ್ರತಿವಾದದಲ್ಲಿ ಸೆಬಿಗೆ ತಿಳಿಸಿದರು. (ಒನ್ಇಂಡಿಯಾ ಸುದ್ದಿ)
Recommended Video