ನನ್ನನ್ನು ಬೈದಿದ್ದು ಸಾಕು, ನೀವೂ ಐದು ವರ್ಷ ಕಳೆದಾಯ್ತು: ಬಿಜೆಪಿಗೆ ಸಿಂಗ್ ತಿರುಗೇಟು
ಮುಂಬೈ, ಅಕ್ಟೋಬರ್ 18: ದೇಶದ ವಿವಿಧ ಸಮಸ್ಯೆಗಳಿಗೆ ಮತ್ತು ಆರ್ಥಿಕ ಕುಸಿತದಂತಹ ಗಂಭೀರ ಸಮಸ್ಯೆಗಳಿಗೆ ತಮ್ಮ ನೇತೃತ್ವದ ಹಿಂದಿನ ಹತ್ತು ವರ್ಷದ ಯುಪಿಎ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿರುವ ಬಿಜೆಪಿ ನಾಯಕರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ತಮ್ಮ ಆಡಳಿತಾವಧಿಯಲ್ಲಿ ಕೆಲವು ದೌರ್ಬಲ್ಯಗಳು ಇದ್ದವು ಎಂಬುದನ್ನು ಒಪ್ಪಿಕೊಂಡಿರುವ ಸಿಂಗ್, ಪ್ರತಿ ಆರ್ಥಿಕ ಸಂಕಷ್ಟಕ್ಕೂ ಯುಪಿಎ ಆಡಳಿತವನ್ನು ದೂಷಿಸುವ ಕೆಲಸವನ್ನು ನರೇಂದ್ರ ಮೋದಿ ಸರ್ಕಾರ ನಿಲ್ಲಿಸಲಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವರಿಗೆ ಐದು ವರ್ಷ ಸಾಕಷ್ಟು ಸಮಯವಿತ್ತು ಎಂದು ಹರಿಹಾಯ್ದಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಆಗಮಿಸಿರುವ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ, ಮನಮೋಹನ್ ಸಿಂಗ್ ಮತ್ತು ಆರ್ಬಿಐ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರ ಅವಧಿಯಲ್ಲಿ ಬ್ಯಾಂಕಿಂಗ್ ವಲಯವು ಅತ್ಯಂತ ಕೆಟ್ಟ ಸನ್ನಿವೇಶವನ್ನು ಎದುರಿಸಿತ್ತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕದಲ್ಲಿ ನೀಡಿದ್ದ ಹೇಳಿಕೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಯುಪಿಎ ಸರ್ಕಾರದ 'ತಪ್ಪುಗಳಿಂದ' ಎನ್ಡಿಎ ಸರ್ಕಾರ ಪಾಠ ಕಲಿಯಬೇಕಿತ್ತು. ಜತೆಗೆ 'ವಿಶ್ವಾಸಾರ್ಹ ಪರಿಹಾರ'ಗಳನ್ನು ಬಳಸಿಕೊಳ್ಳಬೇಕಿತ್ತು ಎಂದು ಮನಮೋಹನ್ ಸಿಂಗ್ ಹೇಳಿದರು.

ಡಬಲ್ ಎಂಜಿನ್ ವಿಫಲ
ತಪ್ಪುಗಳಿಂದ ಎನ್ಡಿಎ ಸರ್ಕಾರ ಪಾಠ ಕಲಿತಿದ್ದರೆ ವಂಚನೆ ಆರೋಪಿ ವ್ಯಾಪಾರಿ ನೀರವ್ ಮೋದಿ ಮತ್ತು ಇತರೆ ಸಾಲ ವಂಚಕರು ಸಾರ್ವಜನಿಕರ ಹಣದೊಂದಿಗೆ ದೇಶದಿಂದ ಪರಾರಿಯಾಗುತ್ತಿರಲಿಲ್ಲ ಅಥವಾ ಬ್ಯಾಂಕುಗಳ ಪರಿಸ್ಥಿತಿ 'ಕೆಟ್ಟ'ದಿಂದ 'ಹೀನಾಯ'ಕ್ಕೆ ಬರುತ್ತಿರಲಿಲ್ಲ ಎಂದರು.
ದೇಶದ ಆರ್ಥಿಕ ವಾತಾವರಣವನ್ನು ಮೋದಿ ಸರ್ಕಾರ ಕೆಡಿಸಿದೆ ಎಂದು ಆರೋಪಿಸಿದ ಅವರು, ಸರ್ಕಾರದ ಎರಡು ಎಂಜಿನ್ ಮಾದರಿಯು ವಿಫಲವಾಗಿದೆ ಎಂದು ಟೀಕಿಸಿದರು.

ದೂಷಿಸುವುದರಿಂದ ಪರಿಹಾರ ಸಿಕ್ಕದು
'ಯುಪಿಎ ಸರ್ಕಾರದ ತಪ್ಪುಗಳಿಂದಾಗಿ ಇಷ್ಟು ಸಮಸ್ಯೆಯಾಗಿದೆ ಎಂದು ವರ್ಷ ವರ್ಷವೂ ನೀವು ಪ್ರತಿಪಾದಿಸಲು ಸಾಧ್ಯವಿಲ್ಲ. ನೀವು ಐದೂವರೆ ವರ್ಷದಿಂದ ಅಧಿಕಾರದಲ್ಲಿದ್ದೀರಿ. ಸಾರ್ವಜನಿಕ ಕಲ್ಯಾಣಕ್ಕಾಗಿ ಬದ್ಧನಾಗಿ ಕೆಲವು ಭರವಸೆಯ ಕೆಲಸಗಳನ್ನು ಮಾಡಲು ಒಂದು ಸರ್ಕಾರಕ್ಕೆ ಸಿಗುವ ಸುದೀರ್ಘ ಕಾಲಾವಧಿಯಾಗಿದೆ. ಸುಮ್ಮನೆ ಯುಪಿಎ ಆಡಳಿತದ ವಿರುದ್ಧ ದೋಷಾರೋಪಣೆ ಮಾಡುವುದೇ ಭಾರತದ ಸಮಸ್ಯೆಗಳಿಗೆ ಪರಿಹಾರವಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ತಪ್ಪುಗಳಿಂದ ಕಲಿಯಬೇಕಿತ್ತು
2004-2014ರ ಅವಧಿಯ ಯುಪಿಎ ಸರ್ಕಾರದ ನೇತೃತ್ವ ವಹಿಸಿದ್ದ ತಮ್ಮ ಆಡಳಿತದ ಕುರಿತು ಮಾತನಾಡಿದ ಅವರು, 'ಏನಾಯಿತೋ ಅದು ಆಗಿ ಹೋಗಿದೆ. ಅಲ್ಲಿ ಕೆಲವು ದೌರ್ಬಲ್ಯಗಳಿದ್ದವು. ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದು ಐದೂವರೆ ವರ್ಷಗಳಾಗಿವೆ. ಇದು ನಮ್ಮ ತಪ್ಪುಗಳಿಂದ ಕಲಿಯಬೇಕಿತ್ತು ಮತ್ತು ಈಗಲೂ ನಮ್ಮ ಆರ್ಥಿಕತೆಗೆ ಹಾನಿಯುಂಟುಮಾಡುತ್ತಿರುವ ಸಮಸ್ಯೆಗಳಿಗೆ ವಿಶ್ವಾಸಾರ್ಹ ಪರಿಹಾರಗಳನ್ನು ಕಂಡುಕೊಳ್ಳಬೇಕಿತ್ತು' ಎಂದರು.

ತೋರಿಕೆಗಾಗಿ ಮಾತುಕತೆ
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗಿನ ಅನೌಪಚಾರಿಕ ಮಾತುಕತೆ ವೇಳೆ ಗಡಿ ಸಮಸ್ಯೆ ಮತ್ತು ಕಾಶ್ಮೀರದಂತಹ 'ಉದ್ವಿಗ್ನದ ವಿಷಯ'ಗಳನ್ನು ಬಿಟ್ಟು ಕೇವಲ ಬಾಹ್ಯ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಿದ್ದರು ಎಂದು ಸಿಂಗ್ ಆರೋಪಿಸಿದರು. ಗಡಿ ವಿಚಾರ, ಕಾಶ್ಮೀರದ ಸಂಗತಿ ಚರ್ಚೆಗೆ ಬಂದಿತ್ತೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಯಾವುದೇ ಮಾತುಕತೆ ನಡೆದಂತೆ ಕಾಣಿಸುವುದಿಲ್ಲ. ಈ ಮಾತುಕತೆಗಳೆಲ್ಲವೂ ಕೇವಲ ಪ್ರದರ್ಶನಕ್ಕಷ್ಟೇ. ಅದರ ಅಂತ್ಯದಲ್ಲಿ ಯಾವ ಬೆಳಕೂ (ಫಲಿತಾಂಶ) ಇರುವುದಿಲ್ಲ ಎಂದು ಹೇಳಿದರು.












Click it and Unblock the Notifications