ಲೈಂಗಿಕ ಕಿರುಕುಳ, ಜನಪ್ರಿಯ ಕಿರುತೆರೆ ನಟ ಬಂಧನ
ಮುಂಬೈ ಜುಲೈ 16: ಗ್ರಾಮೀಣ ಭಾಗದ ದಾಸ್ಯ, ಜೀತದಾಳುಗಳ ಕರುಣಾಜನಕ ಕಥೆ ಹೇಳುವ 'ಉಡಾನ್' ಧಾರಾವಾಹಿಯ ಜನಪ್ರಿಯ ನಟ ಕಮಲ್ ನಾರಾಯಣ್ ರಾಜವಂಶಿ ಬಂಧನವಾಗಿದೆ. ರಾಜವಂಶಿ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರೆಸಿ ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಮಲ್ ನಾರಾಯಣ್ ರಾಜವಂಶಿ ಅಲಿಯಾಸ್ ಸಾಯಿ ಬಲ್ಲಾಳ್ ಅವರು ತಮ್ಮ ಧಾರಾವಾಹಿಯಲ್ಲಿ ನಟಿಸುವ ಸಹ ನಟಿ ಜೊತೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಿಂದ ಈ ದುಷ್ಕೃತ್ಯವನ್ನು ಎಗ್ಗಿಲ್ಲದೆ ನಡೆಸಿಕೊಂಡ ಆರೋಪವನ್ನು ರಾಜವಂಶಿ ಮೇಲೆ ಹೊರೆಸಲಾಗಿದೆ.
ಬಂಧಿತ ರಾಜವಂಶಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 354 ಎ, 354 ಬಿ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆ ಸೆಕ್ಷನ್ 67- ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಸಹನಟಿಗೆ ನಿರಂತರವಾಗಿ ಅಶ್ಲೀಲ ಸಂದೇಶ, ಚಿತ್ರ, ವಿಡಿಯೋಗಳನ್ನು ಕಳಿಸುತ್ತಿದ್ದ ರಾಜವಂಶಿ, ಆಕೆಯನ್ನು ದೈಹಿಕವಾಗಿ ಹಿಂಸಿಸಿದ ಆರೋಪ ಹೊತ್ತಿದ್ದಾರೆ. ಧಾರಾವಾಹಿಯ ಪ್ರೊಡಕ್ಷನ್ ಹೌಸ್ ಮುಖ್ಯಸ್ಥರಿಗೆ ಈ ಬಗ್ಗೆ ಆ ನಟಿ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ದೂರು ನೀಡಿದ ತಪ್ಪಿಗೆ ಆಕೆಯನ್ನು ಧಾರಾವಾಹಿಯಿಂದಲೇ ಹೊರಕ್ಕೆ ಹಾಕಲಾಯಿತು.
ಸಿನಿ ಅಂಡ್ ಟಿವಿ ಕಲಾವಿದರ ಅಸೋಸಿಯೇಷನ್ (CINTAA) ದೂರು ನೀಡಿದ ಮೇಲೆ ಪ್ರಕರಣ ಪೊಲೀಸರ ತನಕ ಮುಟ್ಟಿತು. ಇಲ್ಲದಿದ್ದರೆ, ವಿಷಯ ಬೆಳಕಿಗೆ ಬರುತ್ತಿರಲಿಲ್ಲ. ಬೋರಿವಿಲಿ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡರು.
ಬಲ್ಲಾಳ್ ಕಳಿಸಿದ ಸಂದೇಶ ಹಾಗೂ ವಿಡಿಯೋಗಳನ್ನು ಸಾಕ್ಷಿಯಾಗಿ ಪರಿಗಣಿಸಿ ಆತನ ಮೇಲೆ ಮೇಲ್ಕಂಡ ಐಪಿಸಿ ಸೆಕ್ಷನ್ ಹಾಗೂ ಐಟಿ ಕಾಯ್ದೆ ನಿಯಮಗಳಂತೆ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದಲ್ಲದೆ ತಕ್ಷಣವೇ ರಾಜವಂಶಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.












Click it and Unblock the Notifications