ಹಳೆದೋಸ್ತಿ - ಹೊಸಮೈತ್ರಿ; ಬಿಜೆಪಿ ಸಭೆಯಲ್ಲಿ ಇವರೆಲ್ಲ ಕಾಣಿಸಿಕೊಂಡಿದ್ದಾರೆ; ಅಲ್ಲಿಗೆ ಮುಗಿಯಿತಾ ಕಥೆ?
ಮುಂಬೈ, ನವೆಂಬರ್.06: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯೇ ಬಿಕ್ಕಟ್ಟಿಗೆ ಸಿಲುಕಿದೆ. ಇದರ ಮಧ್ಯೆ ಅಚ್ಚರಿಯ ರಾಜಕೀಯ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರೆದ ಸಭೆಯಲ್ಲಿ ಶಿವಸೇನೆ ನಾಯಕರು ಕಾಣಿಸಿಕೊಂಡಿದ್ದು, ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಎಡೆ ಮಾಡಿಕೊಟ್ಟಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಕೈ ಜೋಡಿಸಲು ಶಿವಸೇನೆ ಹಿಂದು-ಮುಂದು ನೋಡುತ್ತಿದೆ. ಸರ್ಕಾರ ರಚನೆಗೆ 50-50 ಷರತ್ತು ವಿಧಿಸಿದೆ. ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಇದು ಒಪ್ಪಲಾಗದ ಅಂಶವಾಗಿದ್ದು, ಮೈತ್ರಿ ಸರ್ಕಾರ ರಚಿಸಬೇಕೋ ಬೇಡವೋ ಎಂಬುದೇ ಗೊಂದಲವಾಗಿದೆ. ಇದರ ಮಧ್ಯೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರೆದ ಸಭೆಯಲ್ಲಿ ಏಕನಾಥ್ ಶಿಂಧೆ, ರಾಮದಾಸ್ ಕದಮ್ ಸೇರಿದಂತೆ ಆರು ಮಂದಿ ಶಿವಸೇನೆಯ ಶಾಸಕರು ಕಾಣಿಸಿಕೊಂಡಿದ್ದಾರೆ.
ಕೃಷಿ ವಲಯದ ಬಿಕ್ಕಟ್ಟು ನಿವಾರಣೆಗೆ ಸಂಬಂಧಿಸಿದಂತೆ ಚರ್ಚಿಸಲು ಸಹ್ಯಾದ್ರಿ ಅತಿಥಿ ಗೃಹದಲ್ಲಿ ಸಭೆ ಕರೆಯಲಾಗಿತ್ತು. ಈ ವೇಳೆ ಶಿವಸೇನೆ ನಾಯಕ ರಾಮ ಏಕನಾಥ್ ಶಿಂಧೆ ಸೇರಿದಂತೆ ಆರು ಮಂದಿ ಶಿವಸೇನೆ ಶಾಸಕರು ಭಾಗಿಯಾಗಿದ್ದರು. ನಂತರ ಶಿವಸೇನೆ ನಾಯಕ ರಾಮದಾಸ್ ಕದಮ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು. ಇಂದಿನ ಸಭೆಯಲ್ಲಿ ರಾಜ್ಯದ ರೈತರ ಸಮಸ್ಯೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ಶಿವಸೇನೆ ಪಕ್ಷದ ಪ್ರತಿನಿಧಿಯಾಗಿ ನಾನು ಭಾಗಿಯಾಗಿದ್ದೆ. ಮುಂದೆ ರೈತರ ಸಮಸ್ಯೆ ಬಂದಾಗ ಶಿವಸೇನೆ ನಾಯಕರು ದೂರ ಉಳಿದರು ಎಂದು ಯಾರೂ ಬೊಟ್ಟು ಮಾಡಿ ತೋರಿಸಬಾರದು. ಹೀಗಾಗಿ ಇಂದಿನ ಸಭೆಯಲ್ಲಿ ನಾನು ಹಾಜರಾಗಿದ್ದೆ. ಇದರಲ್ಲಿ ಯಾವುದೇ ರಾಜಕೀಯ ವಿಚಾರಗಳ ಚರ್ಚೆ ಆಗಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ರಾಜ್ಯದ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಒಂದು ಎಕರೆಗೆ 25 ಸಾವಿರ ರೂಪಾಯಿ ಬೆಳೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಈಗಾಗ್ಲೆ ರಾಜ್ಯ ಸರ್ಕಾರ ನೆರೆ ಹಾವಳಿಗೆ ಹಾಳಾದ ಬೆಳೆಗೆ ಪರಿಹಾರವಾಗಿ 10 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ.
ಕಳೆದ ಬಾನುವಾರವಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನೆರೆ ಹಾವಳಿಗೆ ತುತ್ತಾದ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಅಕೋಲಾ ಜಿಲ್ಲೆಯ ಲಖನವಾಡ, ಚಿಕ್ಕಲ್ಗಾವ್, ಮೈಸ್ ಪುರ್ ಸೇರಿದಂತೆ ಹಲವು ಗ್ರಾಮಗಳಲ್ಲಿ ದೇವೇಂದ್ರ ಫಡ್ನವೀಸ್ ಪರಿಶೀಲನೆ ನಡೆಸಿದ್ದರು. ಮಳೆ ಆರ್ಭಟಕ್ಕೆ ಬೆಳೆದ ಬೆಳೆಯಲ್ಲ ಹಾಳಾಗಿದ್ದು, ಸರ್ಕಾರದಿಂದ ರೈತರಿಗೆ ನೆರವು ನೀಡುವ ಭರವಸೆಯನ್ನು ನೀಡಿದ್ದರು. ಜೊತೆಗೆ ಆದಷ್ಟು ಬೇಗ ವಿಮೆ ಕಂಪನಿಗಳಿಂದ ರೈತರಿಗೆ ಪರಿಹಾರ ಕೊಡಿಸುವುದಾಗಿ ಫಡ್ನವೀಸ್ ತಿಳಿಸಿದ್ದರು. ಅದರಂತೆ ಇಂದು ಸಭೆ ನಡೆಸಿ ಪರಿಹಾರ ಘೋಷಣೆ ಕುರಿತದಂತೆ ನಾಯಕರ ಜೊತೆ ಚರ್ಚೆ ನಡೆಸಲಾಯಿತು. ಆದರೆ, ಇದರ ಮಧ್ಯೆ ಶಿವಸೇನೆ ನಾಯಕರು ಸಭೆಗೆ ಹಾಜರಾಗಿದ್ದೇ ಹೈಲೇಟ್ ಆಗಿ ಕಂಡು ಬಂತು.












Click it and Unblock the Notifications