ಶಿವಸೇನಾದ ವಿಶ್ವನಾಥ್ ಮಹದೇಶ್ವರ್ ಮುಂಬೈ ಮೇಯರ್
ಬೃಹನ್ ಮುಂಬೈ ಮಹಾನಗರ ಪಾಲಿಕೆ ಏಷ್ಯಾದಲ್ಲೇ ಶ್ರೀಮಂತ ಸ್ಥಳೀಯ ಸಂಸ್ಥೆ. ಅದರ ಮೇಯರ್ ಆಗಿ ಶಿವಸೇನೆಯ ವಿಶ್ವನಾಥ್ ಮಹದೇಶ್ವರ್ ಆಯ್ಕೆಯಾಗಿದ್ದಾರೆ. ಬಿಜೆಪಿಯು ಶಿವಸೇನೆಗೆ ಬೆಂಬಲ ಸೂಚಿಸಿ ದೋಸ್ತಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ
ಮುಂಬೈ, ಮಾರ್ಚ್ 8: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಎಂಬ ಏಷ್ಯಾದ ಶ್ರೀಮಂತ ಸ್ಥಳೀಯ ಸಂಸ್ಥೆಯ ಮೇಯರ್ ಆಗಿ ಬುಧವಾರ ಶಿವಸೇನಾದ ವಿಶ್ವನಾಥ್ ಮಹದೇಶ್ವರ್ ಆಯ್ಕೆಯಾಗಿದ್ದಾರೆ. ಬಿಜೆಪಿ ಹಾಗೂ ಶಿವಸೇನಾ ಸಮನಾಗಿ ಸ್ಥಾನಗಳನ್ನು ಗೆದ್ದಿದ್ದವು. ಮೇಯರ್ ಹುದ್ದೆಗೆ ಶಿವಸೇನೆಗೆ ಸವಾಲು ಹಾಕದಿರಲು ಬಿಜೆಪಿ ನಿರ್ಧಾರ ಕೈಗೊಂಡಿತು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ರಾಜಕೀಯ ಲೆಕ್ಕಾಚಾರ ಈ ನಡೆಯ ಹಿಂದಿದೆ. ಅಲ್ಲಿನ ವಿಧಾನಸಭೆಯಲ್ಲಿ ಶಿವಸೇನೆ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿದಿದೆ. ಆದರೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿತ್ತು.[ಮುಂಬೈ ಪಾಲಿಕೆ ಗದ್ದುಗೆ ಹಿಡಿಯಲಿದೆಯಾ ಕಾಂಗ್ರೆಸ್-ಶಿವಸೇನೆ?]
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪದೇ ಪದೇ ಬಿಜೆಪಿ ಜತೆಗೆ ರಾಜ್ಯ ಹಾಗೂ ಕೇಂದ್ರದಲ್ಲಿ ಮೈತ್ರಿ ಮುರಿದುಕೊಳ್ಳುವ ಮಾತನಾಡಿದ್ದರು. ಆದರೆ ದೇವೇಂದ್ರ ಫಡಣವೀಸ್ ರ ನಡೆಯಿಂದ ಶಿವಸೇನೆ ಮೃದುವಾಗುವ ಸಾಧ್ಯತೆ ಕಡಿಮೆ. ಫಡಣವೀಸ್ ಸಂಪುಟದಲ್ಲಿರುವ ಶಿವಸೇನೆಯ ಹಲವರು ರೈತರ ಸಾಲ ಮನ್ನಾ ವಿಚಾರವಾಗಿ ವಿರೋಧ ಪಕ್ಷಗಳ ಜತೆಗೆ ಸೇರಿ, ವಿಧಾನಸಭೆ ಅಧಿವೇಶನದಲ್ಲಿ ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.[ಮುಂಬೈ ಮೇಯರ್ ಗಾದಿಗೆ ಬಿಜೆಪಿ-ಶಿವಸೇನೆ ಮಧ್ಯೆ ಬಿಗ್ ಫೈಟ್]
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಶಿವಸೇನೆ 84 ಸ್ಥಾನಗಳಲ್ಲಿ ಜಯ ಗಳಿಸಿದೆ. ಎರಡನೇ ಸ್ಥಾನದಲ್ಲಿರುವ ಬಿಜೆಪಿ 82 ಸ್ಥಾನ ಪಡೆದಿದೆ. ಇದು ಬಿಜೆಪಿಯ ಅತ್ಯುತ್ತಮ ಸಾಧನೆಯಾಗಿದೆ. 227 ಬಲಾಬಲದ ಬಿಎಂಸಿಯಲ್ಲಿ ಮೇಯರ್ ಸ್ಥಾನದ ಬಹುಮತಕ್ಕೆ 114 ಸಂಖ್ಯಾಬಲ ಅವಶ್ಯವಿತ್ತು. ಇದೀಗ ಬಿಜೆಪಿಯು ಶಿವಸೇನೆಗೆ ಮೇಯರ್ ಸ್ಥಾನವನ್ನು ಕೊಡುಗೆಯಾಗಿ ನೀಡಿದೆ.