ಬಂಡಾಯದ ಬಿಸಿ ತಗ್ಗಿಸಲು 12 ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಿದ ಸಿಎಂ ಠಾಕ್ರೆ
ಮುಂಬೈ, ಜೂನ್ 24: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರವು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವುದರ ಮಧ್ಯೆ ಬಂಡಾಯ ಬಾವುಟ ಹಾರಿಸಿರುವ ಶಿವಸೇನೆಯ 12 ಶಾಸಕರನ್ನು ಅನರ್ಹಗೊಳಿಸುವಂತೆ ವಿಧಾನಸಭೆ ಉಪ ಸ್ಪೀಕರ್ಗೆ ಮನವಿ ಸಲ್ಲಿಸಲಾಗಿದೆ.
ಬಂಡಾಯ ನಾಯಕ ಏಕನಾಥ್ ಶಿಂಧೆ ಸೇರಿದಂತೆ 12 ಶಾಸಕರು ಶಿವಸೇನೆಯು ಬುಧವಾರ ಕರೆದ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿಲ್ಲ. ಅಲ್ಲದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಹಿನ್ನೆಲೆ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣವು ಉಲ್ಲೇಖಿಸಿದೆ.
ಮಹಾ ಬಿಕ್ಕಟ್ಟು: ಏಕನಾಥ್ ಶಿಂಧೆಯೇ ನಮ್ಮ ಶಾಸಕಾಂಗ ನಾಯಕ ಎಂದು 37 ಶಾಸಕರ ಪತ್ರ
ಶಿವಸೇನೆಯ ಶಾಸಕಾಂಗ ಸಭೆಗೆ ಮುನ್ನವೇ ನೋಟಿಸ್ ನೀಡಲಾಗಿದ್ದು, ಶಾಸಕರು ಸಭೆಗೆ ಹಾಜರಾಗದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿವಸೇನೆ ಸಂಸದ ಅರವಿಂದ್ ಸಾವಂತ್ ತಿಳಿಸಿದರು. "ನಾವು ಮಹಾರಾಷ್ಟ್ರ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಮುಂದೆ ಮನವಿ ಸಲ್ಲಿಸಿದ್ದೇವೆ, ನಿನ್ನೆಯ ಸಭೆಗೆ ಹಾಜರಾಗದ ಕಾರಣ 12 ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದೇವೆ," ಎಂದು ಸಾವಂತ್ ಹೇಳಿದ್ದಾರೆ.
ಅನಗತ್ಯ ಕಾರಣ ನೀಡಿರುವ ಬಗ್ಗೆ ಉಲ್ಲೇಖ
ಬುಧವಾರದ ಶಾಸಕಾಂಗ ಸಭೆಗೆ ಹಾಜರಾಗುವಂತೆ ನೋಟಿಸ್ ನೀಡುವ ಮೊದಲು, ನೀವು ಸಭೆಗೆ ಹಾಜರಾಗದಿದ್ದರೆ ಸಂವಿಧಾನದ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿತ್ತು. ಅದಾಗ್ಯೂ, ಕೆಲವರು ಹಾಜರಾಗಲಿಲ್ಲ, ಇನ್ನೂ ಕೆಲವರು ಅನಗತ್ಯ ಕಾರಣಗಳನ್ನು ನೀಡಿದರು," ಎಂದು ಶಿವಸೇನೆ ಸಂಸದ ಅರವಿಂದ್ ಸಾವಂತ್ ಹೇಳಿದರು.
ಶಿವಸೇನೆಯು ಅನರ್ಹತೆಗೆ ಒತ್ತಾಯಿಸಿದ ಶಾಸಕರು ಯಾರು?
ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಹೊರತುಪಡಿಸಿ ಶಾಸಕ ಪ್ರಕಾಶ್ ಸುರ್ವೆ, ತಾನಾಜಿ ಸಾವಂತ್, ಮಹೇಶ್ ಶಿಂಧೆ, ಅಬ್ದುಲ್ ಸತ್ತಾರ್, ಸಂದೀಪ್ ಭೂಮಾರೆ, ಭರತ್ ಗೊಗವಾಲೆ, ಸಂಜಯ್ ಶಿರ್ಸಾತ್, ಯಾಮಿನಿ ಯಾದವ್, ಅನಿಲ್ ಬಾಬರ್, ಬಾಲಾಜಿ ದೇವದಾಸ್ ಮತ್ತು ಲತಾ ಚೌಧರಿ ಅನ್ನು ಅನರ್ಹಗೊಳಿಸಲು ಶಿವಸೇನೆಯು ವಿಧಾನಸಭೆ ಉಪ ಸಭಾಪತಿಯವರಲ್ಲಿ ಕೋರಿದೆ.
ಶಾಸಕರಿಗೆ ಸುನೀಲ್ ಪ್ರಭು ಬರೆದ ಪತ್ರದಲ್ಲಿ ಏನಿತ್ತು?
ಶಿವಸೇನೆಯಿಂದ ಏಕನಾಥ್ ಶಿಂಧೆ ತೆಗೆದುಹಾಕಿದ ನಂತರದಲ್ಲಿ ಶಾಸಕ ಪಕ್ಷದ ನಾಯಕರಾಗಿ ನೇಮಕಗೊಂಡ ಅಜಯ್ ಚೌಧರಿ ಈ ಕುರಿತು ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಪೂರ್ವದಲ್ಲಿ ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ಪಕ್ಷದ ಶಾಸಕರಿಗೆ ಪತ್ರ ಬರೆದಿದ್ದು, ಸಭೆಯಲ್ಲಿ ಹಾಜರಿರುವಂತೆ ಖಡಕ್ ಸೂಚನೆ ನೀಡಿದ್ದರು. ಯಾರಾದರೂ ಗೈರು ಹಾಜರಾದರೆ, ಶಾಸಕರು ಸ್ವಯಂಪ್ರೇರಣೆಯಿಂದ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಪರಿಗಣಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ಯಾವುದೇ ಶಾಸಕರು ಸರಿಯಾದ ಕಾರಣ ಮತ್ತು ಪೂರ್ವ ಮಾಹಿತಿ ಇಲ್ಲದೆ ಸಭೆಗೆ ಗೈರು ಹಾಜರಾದರೆ ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಅವರ ಸದಸ್ಯತ್ವವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿತ್ತು.
ಠಾಕ್ರೆ ಬಣದ ಅನರ್ಹತೆ ಅಸ್ತ್ರಕ್ಕೆ ಶಿಂಧೆ ಪ್ರತ್ಯಸ್ತ್ರ
ಶಿವಸೇನೆ ಬಂಡಾಯ ಶಾಸಕ ಏಕನಾಥ್ ಶಿಂಧೆ ಬಣಕ್ಕೆ ತಿರುಗೇಟು ನೀಡುವುದಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣದ ನಾಯಕರು ಅಣಿ ಆಯಿತು. ಇದಕ್ಕೆ ಪೂರಕವಾಗಿ ಶಿಂಧೆ ಬಣದಲ್ಲಿ ಗುರುತಿಸಿಕೊಂಡಿರುವ 12 ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಉಪ ಸಭಾಪತಿಗೆ ಪತ್ರ ಬರೆಯಲಾಯಿತು. ಇದರಿಂದ ಭವಿಷ್ಯದಲ್ಲಿ ವಿಶ್ವಾಸ ಮತಯಾಚನೆ ವೇಳೆ ಸಂಖ್ಯೆಗಳ ಲೆಕ್ಕಾಚಾರಕ್ಕೆ ಅನುಕೂಲಕರವಾಗಿ ಇರಲಿದೆ ಎಂಬುದು ಠಾಕ್ರೆ ಬಣದ ಸ್ಕೆಚ್ ಹಾಕಿಕೊಂಡಿದೆ. ಈ ಎಲ್ಲಾ ಲೆಕ್ಕಾಚಾರಗಳಿಗೆ ಬಂಡಾಯ ನಾಯಕ ಏಕನಾಥ್ ಶಿಂಧೆ ಪ್ರತ್ಯಸ್ತ್ರ ಹೂಡಿದ್ದಾರೆ.
ಬುಧವಾರ ಉದ್ಧವ್ ಠಾಕ್ರೆ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಗೆ ತೆರಳಿದ ಶಾಸಕರನ್ನು ಅನರ್ಹಗೊಳಿಸುವುದಾಗಿ ಶಿವಸೇನೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಏಕನಾಥ್ ಶಿಂಧೆ, "ಯಾರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದೀರಿ? ನಿಮ್ಮ ಹೊಂದಾಣಿಕೆ ಮತ್ತು ಕಾನೂನು ನಮಗೂ ತಿಳಿದಿದೆ! ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ ವಿಪ್ ಸಭೆಗೆ ಅಲ್ಲ, ಸಭೆಗೆ ಅಲ್ಲ," ಎಂದು ಟ್ವೀಟ್ ಮಾಡಿದ್ದಾರೆ.