ರಾಹುಲ್ ಗಾಂಧಿ ಒಬ್ಬ 'ಯೋಧ', ಅವರಿಗೆ ಬಿಜೆಪಿಯವರು ಹೆದರುತ್ತಾರೆ: ಶಿವಸೇನಾ ಹೊಗಳಿಕೆ
ಮುಂಬೈ, ಜನವರಿ 8: ಪ್ರಧಾನಿ ನರೇಂದ್ರ ಮೋದಿ ಮೇಲಿನ ರಾಹುಲ್ ಗಾಂಧಿ ಅವರ ವಾಗ್ದಾಳಿಗಳನ್ನು ಶ್ಲಾಘಿಸಿರುವ ಶಿವಸೇನಾ, ಕೇಂದ್ರ ಸರ್ಕಾರದ ವಿರುದ್ಧ ನಿಂತ 'ಯೋಧ' ಎಂದು ಬಣ್ಣಿಸಿದೆ. ಅಲ್ಲದೆ, ದೆಹಲಿಯಲ್ಲಿನ ಆಡಳಿತಗಾರರು ರಾಹುಲ್ ಗಾಂಧಿಗೆ ಭಯಪಡುತ್ತಾರೆ ಎಂದು ಹೇಳಿದೆ.
ರಾಹುಲ್ ಗಾಂಧಿ ಅವರು ದುರ್ಬಲ ನಾಯಕ ಎಂಬ ಪ್ರಚಾರಗಳನ್ನು ನಡೆಸಿದ್ದರೂ ಅವರು ಸೆಟೆದೆದ್ದು ನಿಂತು, ಸಿಗುವ ಪ್ರತಿ ಅವಕಾಶದಲ್ಲಿಯೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾರೆ. ವಿರೋಧಪಕ್ಷಗಳು ಬೂದಿಯಿಂದ ಎದ್ದು ಬರುವ ಫೀನಿಕ್ಸ್ನಂತೆ ಮೇಲೇಳಲಿವೆ ಎಂದು ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಹೇಳಿಕೊಂಡಿದೆ.
ಕಾಂಗ್ರೆಸ್ ಮತ್ತು ಶಿವಸೇನಾ ನಡುವೆ ಮಹಾರಾಷ್ಟ್ರದಲ್ಲಿ ಮನಸ್ತಾಪ ಭುಗಿಲೇಳುವ ಸನ್ನಿವೇಶಗಳು ಸೃಷ್ಟಿಯಾದ ಬೆನ್ನಲ್ಲೇ ರಾಹುಲ್ ಗಾಂಧಿ ಅವರನ್ನು ಹೊಗಳುವ ಶಿವಸೇನಾದ ನಡೆ ಚರ್ಚೆಗೆ ಒಳಗಾಗಿದೆ. ಔರಂಗಾಬಾದ್ ಹೆಸರನ್ನು ಸಂಭಾಜಿ ನಗರ ಎಂದು ಬದಲಿಸಲು ಶಿವಸೇನಾ ಪ್ರಸ್ತಾಪ ಇರಿಸಿದೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ರಾಹುಲ್ ಗಾಂಧಿಯ ಓಲೈಕೆಗೆ ಶಿವಸೇನಾ ಮುಂದಾಗಿದ ಎನ್ನಲಾಗಿದೆ. ಮುಂದೆ ಓದಿ.

ರಾಹುಲ್ ಗಾಂಧಿ ಕಂಡರೆ ಭಯ
'ದೆಹಲಿಯಲ್ಲಿನ ಆಡಳಿತಗಾರರು ರಾಹುಲ್ ಗಾಂಧಿಗೆ ಭಯಪಡುತ್ತಾರೆ. ಅದಿಲ್ಲದಿದ್ದರೆ ಗಾಂಧಿ ಫ್ಯಾಮಿಲಿ ವಿರುದ್ಧ ಅಪಪ್ರಚಾರ ಮಾಡುವ ಸರ್ಕಾರಿ ಪ್ರಚಾರಗಳು ನಡೆಯುತ್ತಿರಲಿಲ್ಲ. ಒಬ್ಬ ವ್ಯಕ್ತಿ ತನ್ನ ವಿರುದ್ಧ ಇದ್ದಾನೆ ಎಂದರೆ ಸರ್ವಾಧಿಕಾರಿ ಆತನ ಬಗ್ಗೆ ಭಯಪಡುತ್ತಾನೆ. ಈ ಏಕಾಂಗಿ ಯೋಧ ಪ್ರಾಮಾಣಿಕನಾಗಿದ್ದರೆ ಆ ಭಯವು ನೂರು ಪಟ್ಟು ಹೆಚ್ಚಾಗುತ್ತದೆ. ರಾಹುಲ್ ಗಾಂಧಿ ಕುರಿತಾದ ಭಯ ಇದೇ ವರ್ಗಕ್ಕೆ ಸೇರುತ್ತದೆ' ಎಂದು 'ಸಾಮ್ನಾ' ಎದುರಾಳಿಯಾಗಿ ಯಾರನ್ನೂ ಉಲ್ಲೇಖಿಸದೆ ಹೇಳಿದೆ.

ಮೋದಿ, ರಾಹುಲ್ಗೆ ಪರ್ಯಾಯವಿಲ್ಲ
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗುವುದು ಪಕ್ಷಕ್ಕೆ ಒಳಿತು ಮಾಡಲಿದೆ. ಬಿಜೆಪಿಗೆ ಮೋದಿ ಪರ್ಯಾಯ ಬೇರೆ ಇಲ್ಲ ಹಾಗೆಯೇ ಕಾಂಗ್ರೆಸ್ಗೆ ರಾಹುಲ್ ಗಾಂಧಿ ಅವರಿಗೆ ಪರ್ಯಾಯ ಇಲ್ಲ ಎಂಬ ವಿಚಾರವನ್ನು ಒಪ್ಪಿಕೊಳ್ಳಲೇಬೇಕು ಎಂದು ಶಿವಸೇನಾ ತಿಳಿಸಿದೆ.

ರಾಹುಲ್ ಮರಳುತ್ತಿದ್ದಾರೆ
ರಾಹುಲ್ ಗಾಂಧಿ ಹೊರ ಹೋದ ಕೆಲವು ಸಮಯದಿಂದ ಪಕ್ಷವು ಹಿಂದೆ ಹೊಂದಿದ್ದ ಹಿಡಿತವನ್ನು ಕಳೆದುಕೊಂಡಿದೆ. ಈಗ ರಾಹುಲ್ ಗಾಂಧಿ ಮರಳಿ ಬರುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಲು ರಾಹುಲ್ ಗಾಂಧಿ ತಮ್ಮ ಅನುಮತಿ ನೀಡಿದ್ದಾರೆ ಎಂದು ಸೇನಾ ಹೇಳಿದೆ.

ತನಿಖಾ ಸಂಸ್ಥೆಗಳ ದುರ್ಬಳಕೆ
ಕೇಂದ್ರ ಸರ್ಕಾರವು ವಿರೋಧಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಶಿವಸೇನಾ, ರಾಹುಲ್ ಗಾಂಧಿ ಅವರು ಅಧ್ಯಕ್ಷ ಹುದ್ದೆಯನ್ನು ಒಪ್ಪಿಕೊಳ್ಳುತ್ತಿರುವಂತೆಯೇ ಅವರ ಭಾವ ರಾಬರ್ಟ್ ವಾದ್ರಾ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಇದು ಖಂಡಿತಾ ಕಾಕತಾಳೀಯವಲ್ಲ ಎಂದು ಅಭಿಪ್ರಾಯಪಟ್ಟಿದೆ.

ನಿಷ್ಠಾವಂತ ತನಿಖಾ ಸಂಸ್ಥೆಗಳು
ಆದಾಯ ತೆರಿಗೆ ಇಲಾಖೆ ಮತ್ತು ಇಡಿಯಂತಹ ಸಂಸ್ಥೆಗಳು ಬಹಳ ಪ್ರಾಮಾಣಿಕವಾಗಿವೆ. ತಮ್ಮ ರಾಜಕೀಯ ಮಾಲೀಕರು ಸೂಚನೆ ನೀಡದೆ ಈ ನಿಷ್ಠಾವಂತ ಜನರು ಯಾವುದೇ ಕಾರಣಕ್ಕೂ ಮನೆಬಾಗಿಲಿಗೆ ತೆರಳುವುದಿಲ್ಲ. ಹೀಗಾಗಿ ಈ ಜನರನ್ನು ದೂರುವುದರಲ್ಲಿ ಯಾವ ಅರ್ಥವೂ ಇಲ್ಲ. ರಾಹುಲ್ ಗಾಂಧಿ ಅವರು ಪುನಃ ಕಾಂಗ್ರೆಸ್ನ ಅಧ್ಯಕ್ಷರಾಗುತ್ತಿದ್ದಾರೆ. ಈ ನೋವಿನಿಂದ ಮತ್ತಷ್ಟು ಘಟನೆಗಳು ನಡೆಯುವುದರಲ್ಲಿವೆ ಎಂದು ತನಿಖಾ ಸಂಸ್ಥೆಗಳನ್ನು ಸರ್ಕಾರ ಭವಿಷ್ಯದಲ್ಲಿ ಇನ್ನೂ ಹೆಚ್ಚು ಬಳಸಿಕೊಳ್ಳಲಿದೆ ಎಂಬುದಾಗಿ ತಿಳಿಸಿದೆ.

ಸೇನಾ-ಕಾಂಗ್ರೆಸ್ ಸಂಘರ್ಷ
ಮಹಾರಾಷ್ಟ್ರದಲ್ಲಿ ಎನ್ಸಿಪಿ ಮತ್ತು ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸಿರುವ ಶಿವಸೇನಾ, ರಾಹುಲ್ ಗಾಂಧಿ ಅವರ ಮುಖಸ್ತುತಿ ಮಾಡಿರುವುದು ಗಮನ ಸೆಳೆದಿದೆ. ಇತ್ತೀಚೆಗೆ ಕಾಂಗ್ರೆಸ್ ಹಾಗೂ ಯುಪಿಎ ನಾಯಕತ್ವದ ಬಗ್ಗೆ ಶಿವಸೇನಾ ಮಾತನಾಡಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಶಿವಸೇನಾ ಜತೆಗಿನ ಮೈತ್ರಿ ಮಹಾರಾಷ್ಟ್ರಕ್ಕೆ ಸೀಮಿತ ಎಂದು ಹೇಳಿತ್ತು. ಅಲ್ಲದೆ, ಔರಂಗಾಬಾದ್ಗೆ ಸಂಭಾಜಿನಗರ ಎಂದು ಮರುನಾಮಕರಣ ಮಾಡುವ ಶಿವಸೇನಾ ಪ್ರಸ್ತಾಪವನ್ನು ಕಾಂಗ್ರೆಸ್ ತಿರಸ್ಕರಿಸಿತ್ತು. ಕಾಂಗ್ರೆಸ್ ಬಹಳ ದುರ್ಬಲವಾಗಿದೆ. ಹೀಗಾಗಿ ಶರದ್ ಪವಾರ್ ಅವರು ಯುಪಿಎ ಅಧ್ಯಕ್ಷರಾಗುವುದು ಸೂಕ್ತ ಎಂದು ಸಂಜಯ್ ರಾವತ್ ಹೇಳಿಕೆ ನೀಡಿದ್ದರು.












Click it and Unblock the Notifications