ಮೈತ್ರಿ ಬೆನ್ನಲ್ಲೇ ಶಿವಸೇನಾಗೆ ಆಘಾತ ನೀಡಿದ ಮುಖಂಡ: ಪಕ್ಷದ ನಡೆ ವಿರೋಧಿಸಿ ರಾಜೀನಾಮೆ
ಮುಂಬೈ, ನವೆಂಬರ್ 27: ಮಹಾರಾಷ್ಟ್ರದಲ್ಲಿ ಶಿವಸೇನಾ ತನ್ನ ಸುದೀರ್ಘ ಕಾಲದ ಸೈದ್ಧಾಂತಿಕ ವಿರೋಧಿ ಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ ಜತೆಗೆ ಕೈಜೋಡಿಸಿ ಸರ್ಕಾರ ರಚಿಸುತ್ತಿದೆ. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿದ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ತ್ರಿಪಕ್ಷೀಯ ಕೂಟ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದವು.
ಶಿವಸೇನಾ ತನ್ನ ದೀರ್ಘಕಾಲದ ಮಿತ್ರಪಕ್ಷ ಬಿಜೆಪಿಯ ಸಖ್ಯವನ್ನು ತೊರೆದು ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಎನ್ಸಿಪಿ ಜತೆ ಸೇರಿಕೊಂಡಿರುವುದು ಅವಕಾಶವಾದಿ ರಾಜಕಾರಣ ಎಂಬ ಟೀಕೆ ವ್ಯಕ್ತವಾಗಿದೆ. ಈ ಮೈತ್ರಿಯನ್ನು ಖಂಡಿಸಿ ಕೆಲವು ಗಂಟೆಗಳಲ್ಲಿಯೇ ಶಿವಸೇನಾದ ಹಿರಿಯ ಮುಖಂಡ ರಮೇಶ್ ಸೋಲಂಕಿ ತಮ್ಮ 21 ವರ್ಷದ ಒಡನಾಟವನ್ನು ತ್ಯಜಿಸಿದ್ದಾರೆ. ಈ ಮೂಲಕ ಶಿವಸೇನಾ ತನ್ನ ಸೈದ್ಧಾಂತಿಕ ಧೋರಣೆಯೊಂದಿಗೆ ರಾಜಿಯಾಗಿರುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಸೂಚನೆ ನೀಡಿದ್ದಾರೆ.
ಠಾಕ್ರೆ ಕುಟುಂಬದ ಮೊದಲ ಸಿ.ಎಂ ಉದ್ಧವ್ ವ್ಯಕ್ತಿಚಿತ್ರ
ರಮೇಶ್ ಸೋಲಂಕಿ ಅವರ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ. ಬಿಜೆಪಿ ಪರ ಬೆಂಬಲಿಗರು ಸೋಲಂಕಿ ಅವರ ರಾಜೀನಾಮೆ ನಡೆಯನ್ನು ಸ್ವಾಗತಿಸಿದ್ದಾರೆ. ಸೋಲಂಕಿ ಅವರದು 'ಗೌರವಾನ್ವಿತ ನಿರ್ಧಾರ' ಎಂದು ಹೊಗಳಿದ್ದಾರೆ. ತಮ್ಮ ರಾಜೀನಾಮೆ ಕುರಿತು ಸೋಲಂಕಿ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ಬಾಳ ಠಾಕ್ರೆಯಿಂದ ಪ್ರೇರಣೆ
ನನ್ನ ಈ ಬದುಕು ಆರಂಭವಾಗಿದ್ದು 1992ರಲ್ಲಿ. ಶ್ರೀ ಬಾಳಸಾಹೇಬ್ ಠಾಕ್ರೆ ಅವರ ನಿರ್ಭಯದ ನಾಯಕತ್ವ ಮತ್ತು ಚರಿಷ್ಮಾ ನನ್ನ 12ನೆಯ ವಯಸ್ಸಿನಲ್ಲಿ ಸೆಳೆಯಿತು. ಆಗಲೇ ನಾನು ಬಾಳಸಾಹೇಬ್ ಅವರ ಶಿವಸೇನಾದೊಂದಿಗೆ ಕೆಲಸ ಮಾಡಬೇಕೆಂದು ಹೃದಯ ಮತ್ತು ಆತ್ಮಪೂರ್ವಕವಾಗಿ ನಿರ್ಧರಿಸಿದ್ದೆ. 1998ರಲ್ಲಿ ಅಧಿಕೃತವಾಗಿ ಶಿವಸೇನಾ ಸೇರಿಕೊಂಡೆ.
ಅಲ್ಲಿಂದ ನಾನು ಬಾಳಸಾಹೇಬ್ ಅವರ ಹಿಂದುತ್ವ ಸಿದ್ಧಾಂತವನ್ನು ಅನುಸರಿಸಿ ವಿವಿಧ ಹುದ್ದೆಗಳನ್ನು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಹಿಂದು ರಾಷ್ಟ್ರ ಮತ್ತು ಕಾಂಗ್ರೆಸ್ ಮುಕ್ತ ಭಾರತದ ಒಂದೇ ಒಂದು ಕನಸು ಮತ್ತು ಗುರಿಯನ್ನು ಇಟ್ಟುಕೊಂಡು ಬಿಎಂಸಿ, ವಿಧಾನಸಭೆ, ಲೋಕಸಭೆ ಮುಂತಾದವುಗಳ ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ.
ಪಕ್ಷದ ಆದೇಶದಂತೆ ದುಡಿದೆ
ಈ ಸುಮಾರು 21 ವರ್ಷಗಳಲ್ಲಿ ನಾನು ಯಾವುದೇ ಹುದ್ದೆ, ಸ್ಥಾನ ಅಥವಾ ಟಿಕೆಟ್ಗಾಗಿ ಬೇಡಿಕೆ ಇರಿಸಿರಲಿಲ್ಲ. ನನ್ನ ಪಕ್ಷದ ಆದೇಶಕ್ಕೆ ಅನುಗುಣವಾಗಿ ಹಗಲು ರಾತ್ರಿ ಮೀಸಲಿಟ್ಟಿದ್ದೆ. ಆದರೆ ಶಿವಸೇನಾವು ರಾಜಕೀಯ ನಿರ್ಧಾರ ತೆಗೆದುಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಮತ್ತು ಎನ್ಸಿಪಿ ಜತೆಗೆ ಕೈಜೋಡಿಸಿದೆ.
ಮಹಾರಾಷ್ಟ್ರ ಬೆಳವಣಿಗೆ ಪರಿಣಾಮ: ರಾಜ್ಯಪಾಲರ ತಲೆದಂಡ?
ಕಾಂಗ್ರೆಸ್ ಜತೆ ಕೆಲಸ ಮಾಡಲು ಸಾಕ್ಷಿಪ್ರಜ್ಞೆ ಒಪ್ಪುತ್ತಿಲ್ಲ
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುತ್ತಿರುವ ಎಲ್ಲರಿಗೂ ಮತ್ತು ಶಿವಸೇನಾದ ಮುಖ್ಯಮಂತ್ರಿಯನ್ನು ಹೊಂದುತ್ತಿರುವುದಕ್ಕೆ ಅಭಿನಂದನೆಗಳು. ಆದರೆ ನನ್ನ ಸಾಕ್ಷಿಪ್ರಜ್ಞೆ ಹಾಗೂ ಸಿದ್ಧಾಂತವು ಕಾಂಗ್ರೆಸ್ ಜತೆಗೆ ಕೆಲಸ ಮಾಡಲು ಒಪ್ಪುತ್ತಿಲ್ಲ. ಅರೆ ಮನಸ್ಸಿನಿಂದ ನನಗೆ ಕೆಲಸ ಮಾಡಲು ಸಾಧ್ಯವಿಲ್ಲ. ನನ್ನ ಹುದ್ದೆ, ನನ್ನ ಪಕ್ಷ, ನನ್ನ ಸಹ ಶಿವಸೈನಿಕರು ಮತ್ತು ನನ್ನ ನಾಯಕರಿಗೂ ಇದು ನ್ಯಾಯೋಚಿತವಲ್ಲ.
ಬಾಳ ಸಾಹೇಬರ ಶಿವಸೈನಿಕ
ಹೀಗಾಗಿ ಭಾರವಾದ ಹೃದಯದೊಂದಿಗೆ ನನ್ನ ಜೀವನದ ಅತ್ಯಂತ ಕಷ್ಟಕರ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಶಿವಸೇನಾಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಎಲ್ಲ ಶಿವಸೈನಿಕರೂ ಸದಾ ನನ್ನ ಸಹೋದರರು ಮತ್ತು ಸಹೋದರಿಯರಾಗಿರುತ್ತಾರೆ. ಈ 21 ವರ್ಷಗಳಲ್ಲಿ ನಾನು ಬೆಳೆಸಿಕೊಂಡ ವಿಶೇಷವಾದ ಬಂಧವಿದು. ನಾನು ಎಂದಿಗೂ ಹೃದಯದಲ್ಲಿ ಬಾಳಸಾಹೇಬರ ಶಿವಸೈನಿಕನಾಗಿ ಉಳಿದಿರುತ್ತೇನೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ನೂತನ ಶಾಸಕರ ಪ್ರಮಾಣವಚನ
ಸಿದ್ಧಾಂತ, ತತ್ವಕ್ಕಾಗಿ ಹೊರಹೋಗುತ್ತಿದ್ದೇನೆ
ಒಂದು ಗಾದೆಯಿದೆ, 'ಹಡಗು ಅಲುಗಾಡಿದಾಗ ಮೊದಲು ಇಲಿಗಳು ಜಿಗಿದು ಓಡುತ್ತವೆ' ಎಂದು. ಆದರೆ ನಾನು ಗೆಲುವಿನ ಖುಷಿಯೊಂದಿಗೆ ಹೋಗುತ್ತಿದ್ದೇನೆ. ಶಿವಸೇನಾ ಪ್ರಬಲವಾದ ಸ್ಥಾನದಲ್ಲಿದ್ದಾಗ ತ್ಯಜಿಸುತ್ತಿದ್ದೇನೆ. ಶಿವಸೇನಾ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುತ್ತಿರುವಾಗ ಬಿಟ್ಟು ಹೋಗುತ್ತಿದ್ದೇನೆ. ನನ್ನ ಸಿದ್ಧಾಂತ ಮತ್ತು ತತ್ವಗಳಿಗಾಗಿ ಹೆಮ್ಮೆ ಶಿವಸೈನಿಕನಾಗಿ ನಾನು ಹೊರನಡೆಯುತ್ತಿದ್ದೇನೆ.
ನಾನು ಶಿವಸೇನಾದಲ್ಲಿನ ನನ್ನ ಬಿವಿಎಸ್/ಯುವಸೇನಾ ಮತ್ತು ಶಿವಸೇನಾದ ಗೌರವಾನ್ವಿತ ಹುದ್ದೆಗಳನ್ನು ತ್ಯಜಿಸುತ್ತಿದ್ದೇನೆ. ಮುಂಬೈ, ಮಹಾರಾಷ್ಟ್ರ ಮತ್ತು ಹಿಂದೂಸ್ಥಾನದ ಜನರ ಸೇವೆಗೆ ಮತ್ತು ಕೆಲಸ ಮಾಡಲು ಅವಕಾಶ ನೀಡಿದ ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ರಮೇಶ್ ಸೋಲಂಕಿ ತಿಳಿಸಿದ್ದಾರೆ.