50:50 ಸೂತ್ರಕ್ಕೆ ಲಿಖಿತ ಭರವಸೆ ನೀಡಿ: ಬಿಜೆಪಿಗೆ ಶಿವಸೇನಾ ಪಟ್ಟು
ಮುಂಬೈ, ಅಕ್ಟೋಬರ್ 26: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಉಂಟಾಗಿರುವ ಗೊಂದಲಕ್ಕೆ ಶನಿವಾರ ಪರಿಹಾರ ಸಿಕ್ಕಿಲ್ಲ. ಬಿಜೆಪಿ ಮತ್ತು ಶಿವಸೇನಾ ಜತೆಯಾಗಿ ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದ್ದರೂ ಅಧಿಕಾರ ಹಂಚಿಕೆಯ ಷರತ್ತುಗಳಿಗೆ ಸಹಮತ ವ್ಯಕ್ತವಾಗಿಲ್ಲ.
ಸಮ್ಮಿಶ್ರ ಸರ್ಕಾರ ರಚನೆಗೆ ಜಂಟಿಯಾಗಿ ರಾಜ್ಯಪಾಲರ ಮುಂದೆ ಹಕ್ಕು ಮಂಡನೆ ಮಾಡುವ ಮುನ್ನವೇ ಈ ಒಪ್ಪಂದ ಇತ್ಯರ್ಥ ಆಗಬೇಕು. ಅದಕ್ಕೆ ಲಿಖಿತ ಭರವಸೆ ನೀಡಿದೆ ಎಂದು ಶಿವಸೇನಾ ಪಟ್ಟು ಹಿಡಿದಿದೆ.
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಬಿಜೆಪಿಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತು ಶಿವಸೇನಾ 50:50ರ ಸಮಾನ ಅಧಿಕಾರ ಹಂಚಿಕೆ ಮಾಡುವ ಸೂತ್ರಕ್ಕೆ ಬದ್ಧರಾಗಬೇಕು. ಅದಕ್ಕೆ ಬಿಜೆಪಿ ಲಿಖಿತ ಭರವಸೆ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಶನಿವಾರ ಉದ್ಧವ್ ಠಾಕ್ರೆ ನಿವಾಸಕ್ಕೆ ಭೇಟಿ ನೀಡಿದ ಶಿವಸೇನಾದ ನೂತನ 56 ಶಾಸಕರು, ಅವರ ಮಗ ಆದಿತ್ಯ ಠಾಕ್ರೆ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಆಗ್ರಹಿಸಿದರು. ತಮ್ಮ ಮುಂದೆ ಇತರೆ ಆಯ್ಕೆಗಳು ಮುಕ್ತವಾಗಿದ್ದರೂ ಬಿಜೆಪಿ ಹಾಗೂ ಶಿವಸೇನಾ 'ಹಿಂದುತ್ವ ಸಿದ್ಧಾಂತ'ಕ್ಕೆ ಅಂಟಿಕೊಂಡಿರುವುದರಿಂದ ಆ ಆಯ್ಕೆಗಳತ್ತ ಆಸಕ್ತಿ ತೋರಿಸುವುದಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದರು.
'ಚುನಾವಣೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರು ರಾಜ್ಯದಲ್ಲಿ 50:50ರ ಅಧಿಕಾರ ಹಂಚಿಕೆಯ ಭರವಸೆ ನೀಡಿದ್ದರಿಂದ ಈ ಸೂತ್ರ ಆಗಲೇ ನಿರ್ಧರಿತವಾಗಿತ್ತು. ಹಾಗಾಗಿ ಎರಡೂ ಮಿತ್ರ ಪಕ್ಷಗಳು ತಲಾ 2.50 ವರ್ಷಗಳ ಕಾಲ ಸರ್ಕಾರ ನಡೆಸುವ ಅಧಿಕಾರ ಪಡೆದುಕೊಳ್ಳಬೇಕಿದೆ. ಇದರಿಂದ ಶಿವಸೇನಾಗೂ ಮುಖ್ಯಮಂತ್ರಿ ಸ್ಥಾನ ನೀಡಲೇಬೇಕು. ಬಿಜೆಪಿಯಿಂದ ಈ ಬಗ್ಗೆ ಲಿಖಿತ ಭರವಸೆ ಪಡೆದುಕೊಳ್ಳಬೇಕು' ಎಂದು ಸೇನಾ ಮುಖಂಡ ಪ್ರತಾಪ್ ಸರ್ನಾಯಕ್ ಹೇಳಿದರು.
ಅಮಿತ್ ಶಾ ಅಥವಾ ದೇವೇಂದ್ರ ಫಡ್ನವಿಸ್ ಈ ಬಗ್ಗೆ ಖಾತರಿ ನೀಡಬೇಕು. ಅವರು ನಮ್ಮೊಂದಿಗೆ ಮಾತನಾಡಿ ಸೂತ್ರಕ್ಕೆ ಒಪ್ಪಿಕೊಳ್ಳಲಿ ಎಂದು ಶಿವಸೇನಾ ಆಗ್ರಹಿಸಿದೆ.












Click it and Unblock the Notifications