ಜೈಲಿನಲ್ಲೇ ಇಂದ್ರಾಣಿ ಮುಖರ್ಜಿ ಹತ್ಯೆಗೆ ಸಂಚು
ಮುಂಬೈ, ಅ. 13: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಆಸ್ಪತ್ರೆಯಿಂದ ಜೈಲಿಗೆ ಮರಳಿದ ಮೇಲೆ ಮತ್ತೊಂದು ಆತಂಕ ಎದುರಾಗಿದೆ. ಇಂದ್ರಾಣಿಯನ್ನು ಜೈಲಿನಲ್ಲೇ ಹತ್ಯೆ ಮಾಡಲು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ.
ಇಂದ್ರಾಣಿ ಮುಖರ್ಜಿ ಅವರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡ, ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.[150 ಕೋಟಿ ರು ಗಾಗಿ ಶೀನಾ ಬೋರಾ ಹತ್ಯೆ ನಡೆಯಿತೆ?]
ಈ ಬಗ್ಗೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿರುವ ಸಿಬಿಐ, ಜೈಲಿನಲ್ಲಿ ಇಂದ್ರಾಣಿ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಹೆಚ್ಚಿಸುವಂತೆ ಸೂಚಿಸಿದ್ದಾರೆ. ನವದೆಹಲಿಯ ವಿಶೇಷ ಕ್ರೈಂ ವಿಭಾಗದ ಜಂಟಿ ನಿರ್ದೇಶಕರು ಈ ಪತ್ರವನ್ನು ರವಾನಿಸಿದ್ದಾರೆ. ಇಂದ್ರಾಣಿ ಮುಖರ್ಜಿ ಅವರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇತ್ತೀಚೆಗೆ ಇಂದ್ರಾಣಿ ಮುಖರ್ಜಿ ದಿಢೀರ್ ಅಸ್ವಸ್ಥತೆಗೀಡಾಗಿದ್ದರು. ನಂತರ ಆಕೆಯನ್ನು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಮಾತ್ರೆ ಸೇವನೆ ಮಾಡಿದ್ದರು, ಆಕೆಯ ಮೂತ್ರದ ಮಾದರಿಯಲ್ಲಿ ಕೊಕೇನ್ ಅಂಶ ಪತ್ತೆಯಾಗಿತ್ತು ಎಂಬ ಸುದ್ದಿ ಹರಡಿತ್ತು. ಆದರೆ, ವೈದ್ಯರು ಈ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. [ಶೀನಾ ಬೋರಾ ಕೇಸ್ ತನಿಖಾಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ]
2012ರ ಏ.24ರಂದು ಶೀನಾ ಬೋರಾ ಹತ್ಯೆಯಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ ಮತ್ತು ಇಂದ್ರಾಣಿ ಪತಿ ಪೀಟರ್ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಈ ಪ್ರಕರಣದ ಸಹ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಭಾರಿ ಮೊತ್ತದ ಹಣಕಾಸು ಅವ್ಯವಹಾರ ಇರುವುದರಿಂದ ತನಿಖೆಯನ್ನು ಸಿಬಿಐಗೆ ಮಹಾರಾಷ್ಟ್ರ ಸರ್ಕಾರ ವಹಿಸಿದೆ.












Click it and Unblock the Notifications