'2019ರ ಲೋಕಸಭೆ ಚುನಾವಣೆಗೆ ಶರದ್ ಪವಾರ್ ಸ್ಪರ್ಧಿಸಲ್ಲ'
ಮುಂಬೈ, ಅಕ್ಟೋಬರ್ 7: 2019ರ ಲೋಕಸಭೆ ಚುನಾವಣೆ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಅಧ್ಯಕ್ಷ ಶರದ್ ಪವಾರ್ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ನಾಯಕ ಅಜಿತ್ ಪವಾರ್ ತಿಳಿಸಿದ್ದಾರೆ. ಮುಂಬೈನಲ್ಲಿ ಶನಿವಾರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್ ಸಿಪಿ ಅಧ್ಯಕ್ಷರು ಯಾವುದೇ ಲೋಕಸಭೆ ಕ್ಷೇತ್ರಕ್ಕೆ ಹೆಸರು ಸೂಚಿಸುವುದು ಇಷ್ಟವಿಲ್ಲ ಎಂದಿರುವುದಾಗಿ ಅವರು ತಿಳಿಸಿದ್ದಾರೆ.
ಎಪ್ಪತ್ತೆಂಟು ವರ್ಷದ ಶರದ್ ಪವಾರ್ ಪಕ್ಷದ ಸರ್ವೋಚ್ಚ ನಾಯಕರಾಗಿ ಮುಂದುವರಿಯಲಿದ್ದಾರೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ಅವರು ಅಂದುಕೊಂಡಿದ್ದಾರೆ. ಪುಣೆಯಲ್ಲಿ ಪಕ್ಷದ ಕೆಲವು ಕಾಯಕರ್ತರು ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಆದರೆ ಯಾವುದೇ ಕ್ಷೇತ್ರದಿಂದ ಸ್ಪರ್ಧೆಗೆ ತಮ್ಮ ಹೆಸರು ಪ್ರಸ್ತಾವ ಮಾಡದಂತೆ ಸೂಚಿಸಿದರು ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಅಜಿತ್ ಪವಾರ್ ರ ಮಗ ಪಾರ್ಥ್ ಪವಾರ್ ಹೆ ಮವಲ್ ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕೋ ಬೇಡವೋ ಎಂಬುದನ್ನು ಪಕ್ಷದ ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಪಕ್ಷದ ನಾಯಕ ಜಿತೇಂದ್ರ ತಿಳಿಸಿದ್ದಾರೆ. ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ಎನ್ ಸಿಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಭೆ ಕರೆಯಲಾಗಿದೆ.

ಮಹಾರಾಷ್ಟ್ರದಲ್ಲಿ ನಲವತ್ತೆಂಟು ಲೋಕಸಭಾ ಕ್ಷೇತ್ರಗಳಿದ್ದು, ಐವತ್ತು-ಐವತ್ತು ಅನುಪಾತದಲ್ಲಿ ಕಾಂಗ್ರೆಸ್ ಜತೆಗೆ ಸ್ಥಾನ ಹಂಚಿಕೆಗೆ ಎನ್ ಸಿಪಿ ಮಾತುಕತೆ ನಡೆಸುತ್ತಿದೆ. ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಇಪ್ಪತ್ತೇಳು ಹಾಗೂ ಎನ್ ಸಿಪಿ ಇಪ್ಪತ್ತೊಂದು ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಈಗಾಗಲೇ ಕಾಂಗ್ರೆಸ್-ಎನ್ ಸಿಪಿ ಲೋಕಸಭೆ ಚುನಾವಣೆಗೆ ಪ್ರತ್ಯೇಕವಾಗಿ ತಯಾರಿ ಆರಂಭಿಸಿವೆ.
ಸೀಟು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಎನ್ ಸಿಪಿ- ಕಾಂಗ್ರೆಸ್ ನಾಯಕರ ಮಧ್ಯೆ ಅಕ್ಟೋಬರ್ ಹನ್ನೆರಡರಂದು ಸಭೆ ನಡೆಯಲಿದೆ.












Click it and Unblock the Notifications