"ಮಹಾ ಸಚಿವರ ರಾಜೀನಾಮೆ, ಇದೇ ಸರ್ಕಾರ ಪತನಕ್ಕೆ ನಾಂದಿ"
ಮುಂಬೈ, ಜನವರಿ.04: ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರವು ಇನ್ನು ಬಹಳ ದಿನಗಳ ಕಾಲ ಉಳಿಯುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭವಿಷ್ಯ ನುಡಿದಿದ್ದಾರೆ.
ಮಹಾ ವಿಕಾಸ್ ಅಗಾದಿಯಲ್ಲಿ ಬಿರುಕು ಕಾಣಿಸಿಕೊಂಡಿರುವುದಕ್ಕೆ ಶಿವಸೇನೆ ಶಾಸಕ ಅಬ್ದುಲ್ ಸತ್ತರ್ ಅವರ ರಾಜೀನಾಮೆ ನಿರ್ಧಾರವೇ ಉತ್ತಮ ಉದಾಹರಣೆಯಾಗಿದೆ. ಮೈತ್ರಿ ಸರ್ಕಾರದ ಪತನಕ್ಕೆ ಇದು ನಾಂದಿ ಎಂದು ಫಡ್ನವೀಸ್ ಕಿಡಿ ಕಾರಿದ್ದಾರೆ.
ಪ.ಬಂಗಾಳ, ಮಹಾರಾಷ್ಟ್ರ ನಂತರ ಬಿಹಾರ, ಕೇರಳದ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರ
ಮಹಾರಾಷ್ಟ್ರದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಶಿವಸೇನೆಯು ಕಾಂಗ್ರೆಸ್ ಗೆ ಬೆಂಬಲ ಸೂಚಿಸಿತ್ತು. ಇದನ್ನು ವಿರೋಧಿಸಿ ಸಚಿವ ಅಬ್ದುಲ್ ಸತ್ತರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದ್ದರು ಎಂದು ವರದಿಯಾಗಿದೆ.

ಸಚಿವ ಅಬ್ದುಲ್ ಸತ್ತರ್ ಪುತ್ರ ಹೇಳಿದ್ದೇನು?
ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತ್ತರ್ ಅವರ ಪುತ್ರ ಸಮೀರ್, ತಮ್ಮ ತಂದೆಯ ನಿರ್ಧಾರದ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದಿದ್ದಾರೆ. ಅಲ್ಲದೇ ಅಬ್ದುಲ್ ಸತ್ತರ್ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಿ ಎಂದು ಹೇಳಿದ್ದಾರೆ.

"ಖಾತೆ ಹಂಚಿಕೆಯಲ್ಲಿ ವಿಳಂಬ ಧೋರಣೆ ಏಕೆ?"
ವಾಶಿಂನಲ್ಲಿ ಜಿಲ್ಲಾ ಪರಿಷತ್ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಸಚಿವ ಸಂಪುಟ ರಚನೆಗೆ ಒಂದು ತಿಂಗಳು ತೆಗೆದುಕೊಂಡಿದ್ದಾರೆ. ಇದೀಗ ಖಾತೆ ಹಂಚಿಕೆಯಲ್ಲೂ ವಿಳಂಬ ಧೋರಣೆ ತೋರುತ್ತಿರುವುದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಖಾತೆ ಹಂಚಿಕೆ ಮಾಡುವ ಮೊದಲೇ ಸಚಿವರ ರಾಜೀನಾಮೆ
ಕಳೆದ ಡಿಸೆಂಬರ್.30ರಂದು ಮಹಾರಾಷ್ಟ್ರದಲ್ಲಿ ರಚನೆಯಾದ ಮೈತ್ರಿ ಸರ್ಕಾರದ 36 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಅದಾಗಿ ಒಂದು ವಾರ ಕಳೆದರೂ ಇಂದಿಗೂ ಸಚಿವರಿಗೆ ಖಾತೆ ಹಂಚಿಕೆ ಮಾಡಿಲ್ಲ. ಈಗ ಖಾತೆ ಹಂಚಿಕೆಗೂ ಮೊದಲೇ ಶಿವಸೇನೆ ಸಚಿವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದೆಲ್ಲ ಮೈತ್ರಿ ಸರ್ಕಾರ ಪತನದ ಆರಂಭ ಎಂದು ದೇವೇಂದ್ರ ಫಡ್ನವೀಸ್ ಕಿಡಿ ಕಾರಿದ್ದಾರೆ.

ಶಿವಸೇನೆ ವಿರುದ್ಧ ಗುಡುಗಿದ ದೇವೇಂದ್ರ ಫಡ್ನವೀಸ್
ಮಹಾರಾಷ್ಟ್ರ ಜನಾಭಿಪ್ರಾಯದ ವಿರುದ್ಧವಾಗಿ ಮೈತ್ರಿ ಸರ್ಕಾರ ರಚನೆಯಾಗಿದೆ ಎಂದು ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಜನಮನ್ನಣೆ ಸಿಕ್ಕಿತು. ರಾಜ್ಯದ 48 ಸ್ಥಾನಗಳ ಪೈಕಿ 41 ಸ್ಥಾನಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿತು. ಇನ್ನು, ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ 105 ಸ್ಥಾನಗಳಲ್ಲಿ ಗೆಲುವು ದಾಖಲಿಸಿತು. ಆದರೆ, 56 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಶಿವಸೇನೆಯು ಬಿಜೆಪಿಯ ಬೆನ್ನಿಗೆ ಚೂರಿ ಹಾಕಿ ಸರ್ಕಾರ ರಚಿಸಿದೆ ಎಂದು ಕಿಡಿ ಕಾರಿದ್ದಾರೆ.












Click it and Unblock the Notifications