ಸ್ವಾತಂತ್ರ್ಯಯೋಧ ಸಾವರ್ಕರ್ ಕುಟುಂಬದಿಂದ ರಾಹುಲ್ ಗಾಂಧಿ ವಿರುದ್ಧ ದೂರು
ಮುಂಬೈ, ನವೆಂಬರ್ 14: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಎಂದೇ ಹೆಸರಾದ ವಿನಾಯಕ್ ದಾಮೋದರ್ ಸಾವರ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸಾವರ್ಕರ್ ಕುಟುಂಬ ದೂರು ದಾಖಲಿಸಿದೆ.
ಛತ್ತೀಸ್ ಗಢದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ''ನಮ್ಮ ನಾಯಕರು ಬ್ರಿಟಿಷರ ವಿರುದ್ಧ ಹೋರಾಡಿ, 15-20 ವರ್ಷ ಜೈಲುವಾಸ ಅನುಭವಿಸುತ್ತಿದ್ದರೆ ನಿಮ್ಮ ಸಾವರ್ಕರ್ ಜಿ, ಬ್ರಿಟಿಷರ ಮುಂದೆ ಕೈಮುಗಿದು ಬೇಡುತ್ತಿದ್ದರು, ಬ್ರಿಟಿಷರಲ್ಲಿ ಕ್ಷಮೆ ಯಾಚಿಸುತ್ತಿದ್ದರು. ನೀವು(ಬಿಜೆಪಿ) ಕಾಂಗ್ರೆಸ್ ಪಕ್ಷಕ್ಕೆ ದೇಶಭಕ್ತಿಯನ್ನು ಹೇಳಿಕೊಡುವುದಕ್ಕೆ ಬರಬೇಡಿ. ನೀವು ಮೊದಲು ದೇಶಕ್ಕೆ ರಫೇಲ್ ಮತ್ತು ಡಸಾಲ್ಟ್ ಬಗ್ಗೆ ಹೇಳಿ" ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಪ್ರತಿಪಕ್ಷವನ್ನು ಹಳಿಯುವ ಅವಸರದಲ್ಲಿ ಸ್ವಾತಂತ್ರ್ಯ ಸೆನಾನಿ ವೀರ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ರಾಹುಲ್ ಗಾಂಧಿಗೆ ಮುಳುವಾಗಿದೆ.

ರಾಹುಲ್ ಗಾಂಧಿ ಮೂರ್ಖರೇ?!
ಈ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಾವರ್ಕರ್ ಅವರ ಮೊಮ್ಮಗ ರಂಜೀತ್ ಸಾವರ್ಕರ್, 'ರಾಹುಲ್ ಗಾಂಧಿ ಮೂರ್ಖರೋ, ಅಥವಾ ಅವರಿಗೆ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲವೋ ಗೊತ್ತಿಲ್ಲ. ನಮ್ಮ ತಾತ, ಸಾವರ್ಕರ್ ಎಂದಿಗೂ ಅನುಕಂಪ ಬಯಸಿದವರಲ್ಲ, ಬ್ರಿಟಿಷರ ಕ್ಷಮೆ ಕೇಳಲೂ ಇಲ್ಲ. ಅವರು 27 ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು. ಕಾಂಗ್ರೆಸ್ಸಿನ ಯಾವೊಬ್ಬ ಮುಖಂಡರೂ ಆರು ವರ್ಷಕ್ಕಿಂತ ಹೆಚ್ಚು ಕಾಲ ಜೈಲು ವಾಸ ಅನುಭವಿಸಲಿಲ್ಲ ಎಂದು ಅವರು ಪ್ರತ್ಯಾರೋಪ ಮಾಡಿದರು.

ರಾಹುಲ್ ಗೆ ಸವಾಲು
ನೆಹರು ಅವರೂ ಜೈಲುವಾಸ ಅನುಭವಿಸಿದ್ದರು ನಿಜ. ಆದರೆ ಅವರು ವಾಸವಿದ್ದ ಜೈಲು ಯಾವ ಹೊಟೇಲ್ ಗೂ ಕಡಿಮೆ ಇರಲಿಲ್ಲ. ಜವಹರಲಾಲ್ ನೆಹರು ಆರು ವರ್ಷಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರು ಎಂಬುದಕ್ಕೆ ಸಾಕ್ಷ್ಯ ನೀಡಿ ನೋಡೋಣ' ಎಂದು ರಂಜೀತ್ ರಾಹುಲ್ ಗಾಂಧಿ ಅವರಿಗೆ ಸವಾಲೆಸೆದರು.

ದೂರು ದಾಖಲು
ಅಷ್ಟಕ್ಕೇ ಸುಮ್ಮನಾಗದ ರಂಜೀತ್, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಂಬೈಯ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದಾರೆ. 'ನನ್ನ ತಾತ ಬ್ರಿಟಿಷರ ಮುಂದೆ ಕೈಜೋಡಿಸಿ ಬೇಡಿದರು ಎನ್ನುವ ಮೂಲಕ ರಾಹುಲ್ ಗಾಂಧಿ ಅವರು ನನ್ನ ತಾತ ಸಾವರ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಷ್ಟ್ರವಾದಿ. ಅಂಥವರ ಹೆಸರಿಗೆ ಮಸಿಬಳಿಯುವಂಥ ಮಾತುಗಳನ್ನಾಡಿದ ರಾಹುಲ್ ವಿರುದ್ಧ ಕ್ರಮ ಕೈಗೊಳ್ಳಿ' ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ರಾಜಕೀಯ ಪಕ್ಷಗಳಿಗೆ ಮನವಿ
'ದಯವಿಟ್ಟು ಯಾವ ರಾಜಕೀಯ ಪಕ್ಷಗಳೂ ನಮ್ಮ ತಾತನ ಹೆಸರನ್ನು ಬಳಸಿಕೊಂಡು ಪರಸ್ಪರ ಕೆಸರೆರಚಾಟ ಮಾಡಬೇಡಿ' ಎಂದು ರಂಜೀತ್ ಅವರು ಮನವಿ ಮಾಡಿಕೊಂಡರು.
ಸ್ವಾತಂತ್ರ್ಯ ಸೇನಾನಿ ವಿನಾಯಕ್ ದಾಮೋದರ್ ಸಾವರ್ಕರ್ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದವರು. ಸಾವರ್ಕರ್ ಇಲ್ಲಿದ್ದರೆ ತಮಗೇ ಕಷ್ಟ ಎಂದು ಬ್ರಿಟಿಷರೇ ಸಾವರ್ಕರ್ ಅವರನ್ನು ಅಂಡಮಾನಿನ ಜೈಲಿಗೆ ತಳ್ಳಿ, ಕರಿನೀರಿನ ಶಿಕ್ಷೆಗೊಳಪಡಿಸಿದ್ದರು.












Click it and Unblock the Notifications