ನರೇಂದ್ರ ಮೋದಿ ಬೆಂಬಲಿಸಲು ಸಲ್ಲೂ ಷರತ್ತು
ಮುಂಬೈ, ಜ.21: 2002ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ಗಲಭೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ ಬೆನ್ನಲ್ಲೇ ಮೋದಿ ಅವರ ಪರ ಪ್ರಚಾರಕ್ಕೆ ಸಿದ್ಧ ಎಂದಿದ್ದಾರೆ. ಆದರೆ, ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.
ಇತ್ತೀಚೆಗೆ ಅಂತಾರಾಷ್ಟ್ರೀಯ ಗಾಳಿಪಟ ಹಬ್ಬದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಸಲ್ಮಾನ್ ಖಾನ್ ಅವರು ಪರಸ್ಪರ ಭೇಟಿಯಾಗಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಲ್ಮಾನ್, ಕೋಮುಗಲಭೆಗೆ ಮೋದಿ ಅವರು ಕ್ಷಮೆ ಕೋರುವ ಅಗತ್ಯವಿಲ್ಲ ಎಂದಿದ್ದರು.
ನ್ಯಾಯಾಂಗವೇ ಗುಜರಾತ್ ಗಲಭೆಯ ಪ್ರಕರಣದಲ್ಲಿ ಮೋದಿ ಅವರನ್ನು ನಿರಪರಾಧಿ ಎಂದು ಹೇಳಿದೆ. ಹೀಗಾಗಿ ಅವರು ಕ್ಷಮೆಯಾಚಿಸುವ ಅಗತ್ಯವೇ ಇಲ್ಲ ಎಂದು ಸಲ್ಮಾನ್ ಹೇಳಿದ್ದರು. ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಮೋದಿ ಅವರ ಆಯ್ಕೆ ಸಂಬಂಧ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಲ್ಮಾನ್ ಖಾನ್, ನನ್ನ ಅಭಿಪ್ರಾಯ ನನ್ನ ಅಭಿಮಾನಿಗಳ ಮೇಲೆ ಪ್ರಭಾವ ಬೀರುವುದು ಬೇಡ ಎಂದು ಹೇಳಿದ್ದರು. ನಿನ್ನೆ ಸಲ್ಮಾನ್ ಖಾನ್ ಅವರು ಖಾಸಗಿ ಟಿವಿ ವಾಹಿನಿಯೊಂದಿಗೆ ಮಾತನಾಡುತ್ತಾ ಮೋದಿ ಅವರ ಪರ ಪ್ರಚಾರಕ್ಕೆ ಹೋಗುವ ಬಗ್ಗೆ ಸಲ್ಲೂ ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷ ತನ್ನ ಪ್ರಚಾರ ಕಾರ್ಯಕ್ಕೆ ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್ ಮುಂತಾದ ತಾರೆಗಳನ್ನು ತನ್ನತ್ತ ಸೆಳೆದುಕೊಂಡಿರುವ ಬೆನ್ನಲ್ಲೆ ಮೋದಿ ಪರ ಅಕ್ಷಯ್ ಕುಮಾರ್, ಪರೇಶ್ ರಾವಲ್, ಜಾನ್ ಅಬ್ರಹಾಂ ಮುಂತಾದ ತಾರೆಯರು ನಿಂತಿದ್ದರು. ಈಗ ಸಲ್ಮಾನ್ ಬೆಂಬಲ ಸಿಕ್ಕಿರುವುದು ಹೊಸ ಸ್ಟಾರ್ ವಾರ್ ಗೆ ನಾಂದಿ ಹಾಡಿದೆ.

ಮೋದಿ ಪರ ಪ್ರಚಾರಕ್ಕೆ ಸಲ್ಮಾನ್ ಸಿದ್ಧ
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್, ನಾನು ನರೇಂದ್ರ ಮೋದಿ ಅವರ ಪರ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಸಿದ್ಧ. ಎಲ್ಲಿ ತನಕ ಅವರು ಅಭಿವೃದ್ಧಿ ಪರ ಕಾರ್ಯದಲ್ಲಿ ನಿರತರಾಗಿರುತ್ತಾರೋ ಅಲ್ಲಿ ತನಕ ನಾನು ಬೆಂಬಲಕ್ಕೆ ನಿಲ್ಲುತ್ತೇನೆ. ನಾನು ಪಕ್ಷಾತೀತವಾಗಿ ಚುನಾವಣಾ ಪ್ರಚಾರದಲ್ಲಿ ಇಲ್ಲಿ ತನಕ ತೊಡಗಿಕೊಂಡಿದ್ದೇನೆ ಸಮರ್ಥ ವ್ಯಕ್ತಿಗೆ ನನ್ನ ಬೆಂಬಲ ಇದ್ದೇ ಇರುತ್ತದೆ ಎಂದಿದ್ದಾರೆ.

ಮೋದಿ ಭೇಟಿ ಪೂರ್ವ ನಿಯೋಜಿತವಾಗಿರಲಿಲ್ಲ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದನ್ನು ರೋಚಕವಾಗಿ ಮಾಧ್ಯಮಗಳು ವರದಿ ಮಾಡಿದ್ದನ್ನು ಕಂಡು ನನಗೆ ಬೇಸರವಾಗಿದೆ. ನನ್ನ ಚಿತ್ರ ಜೈ ಹೋ ಪ್ರಚಾರಕ್ಕೆ ಅಹಮದಾಬಾದಿಗೆ ಬಂದಿದೆ. ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಕರೆ ಬಂತು ನನಗೆ ಬಿಡುವು ಇದ್ದರಿಂದ ಮೋದಿ ಅವರನ್ನೂ ಭೇಟಿ ಮಾಡಿದೆ. ಮೋದಿ ಅವರು ಸಮರ್ಥ ಸಿಎಂ ಎಂಬುದು ಎಲ್ಲರಿಗೂ ಗೊತ್ತು ಅವರ ಬಗ್ಗೆ ನಾನು ಹೆಚ್ಚಿಗೆ ಹೇಳಬೇಕಿಲ್ಲ ಎಂದಿದ್ದಾರೆ.

ಮೋದಿ ಭೇಟಿ ಮಾಧ್ಯಮ ವರದಿ ಬೇಸರ
ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ಅವರು ಕೂಡಾ ಮೋದಿ ಭೇಟಿ ಮಾಡಿದ್ದಾರೆ. ಆದರೆ, ನಾನು ಭೇಟಿ ಮಾಡಿದ್ದನ್ನು ವರದಿ ಮಾಡಿದ ರೀತಿ ಇಷ್ಟವಾಗಲಿಲ್ಲ. 'ನಾನು ಮುಸ್ಲಿಂ' ಎಂದು ಈ ರೀತಿ ಮಾಧ್ಯಮಗಳು ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೇ? ಎಂದು ಪ್ರಶ್ನಿಸಿದ್ದಾರೆ.

ಮೋದಿ ಒಬ್ಬ ಸುಸಂಸ್ಕೃತ ವ್ಯಕ್ತಿ
ಮೋದಿ ಅವರ ಭೇಟಿ ನನಗಂತೂ ಖುಷಿಕೊಟ್ಟಿದೆ. ನನ್ನ ತಂಗಿ, ಯೂನಿಟ್ ನ ಮಹಿಳೆಯರನ್ನು ಗೌರವದಿಂದ ನೋಡಿಕೊಂಡ ಮೋದಿ ಸರ್ಕಾರ ಮಹಿಳೆಯರ ಬಗ್ಗೆ ಇಟ್ಟುಕೊಂಡಿರುವ ಕಾಳಜಿ, ಗೌರವ ಕಂಡು ಮೂಕವಿಸ್ಮಿತ ನಾದೆ ಎಂದು ಸಲ್ಮಾನ್ ಹೇಳಿಕೊಂಡಿದ್ದಾರೆ.












Click it and Unblock the Notifications