ಸರ್ಕಾರಿ ನೌಕರರು ಕಚೇರಿಗೆ ಹಾಜರಾಗದಿದ್ದಲ್ಲಿ ಸಂಬಳ ಕಟ್!
ಮುಂಬೈ, ಜೂನ್.05: ಭಾರತದ ಮಟ್ಟಿಗೆ ನೊವೆಲ್ ಕೊರೊನಾ ವೈರಸ್ ಅಂದಾಕ್ಷಣ ಮೊದಲು ನೆನಪಿಗೆ ಬರುವುದೇ ಮಹಾರಾಷ್ಟ್ರ. ಚೀನಾದ ವುಹಾನ್ ನಗರದಂತೆ ದೇಶದಲ್ಲಿ ಅತಿಹೆಚ್ಚು ಕೊವಿಡ್-19 ಸೋಂಕಿತರು ಇದೊಂದೇ ರಾಜ್ಯದಲ್ಲಿದ್ದಾರೆ.
Recommended Video
77,793ಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಸರ್ಕಾರವು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ರಾಜ್ಯ ಸರ್ಕಾರದ ನೌಕರರು ಕಚೇರಿಗೆ ಹಾಜರಾಗದಿದ್ದಲ್ಲಿ ವೇತನ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
Today's Update: ಮಹಾರಾಷ್ಟ್ರದಲ್ಲಿ 2933 ಕೇಸ್, ತಮಿಳುನಾಡಿನಲ್ಲಿ 1373 ಕೇಸ್
ಮಹಾರಾಷ್ಟ್ರದಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರರು ಕೂಡಾ ಕಚೇರಿಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೂಚನೆ ನೀಡಿದ್ದಾರೆ. ವಾರದಲ್ಲಿ ಕನಿಷ್ಠ ಒಂದು ಬಾರಿ ಕಚೇರಿಗೆ ಹಾಜರಿ ಆಗುವುದು ಕಡ್ಡಾಯಗೊಳಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಅಂಥವರ ವಿರುದ್ಧ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.
ನೌಕರರು ಕಚೇರಿಗಳಿಗೆ ಹಾಜರಾಗದಿದ್ದಲ್ಲಿ ಸಂಬಳ ಕಟ್
ಮಹಾರಾಷ್ಟ್ರದಲ್ಲಿ ಸರ್ಕಾರಿ ನೌಕರರು ಕೊರೊನಾ ವೈರಸ್ ಭೀತಿಯ ನಡುವೆಯೂ ವಾರಕ್ಕೆ ಕನಿಷ್ಠ ಒಂದು ಬಾರಿಯಾದರೂ ಕಚೇರಿಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಆದೇಶಿಸಲಾಗಿದೆ. ಕೊವಿಡ್-19 ನೆಪದಲ್ಲಿ ಕರ್ತವ್ಯಕ್ಕೆ ಹಾಜರಾಗುವುದನ್ನು ತಪ್ಪಿಸಿಕೊಳ್ಳುವ ಸಿಬ್ಬಂದಿಯ ವೇತನವನ್ನು ಕಡಿತಗೊಳಿಸಲಾಗುತ್ತದೆ ಎಂದು ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಪೂರ್ವ ನಿಗದಿಗೊಳಿಸಿದಂತೆ ಕನಿಷ್ಠ ಒಂದು ದಿನವೂ ಕಚೇರಿಗೆ ಹಾಜರಾಗದಿದ್ದಲ್ಲಿ ಒಂದು ವಾರದ ವೇತನವನ್ನು ಕಡಿತಗೊಳಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ದಿನ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ತಾವು ಕರ್ತವ್ಯಕ್ಕೆ ಹಾಜರಾದಷ್ಟು ದಿನಗಳ ವೇತನವನ್ನು ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಸಿಬ್ಬಂದಿಯ ಕೆಲಸದ ವೇಳಾಪಟ್ಟಿ ಸಿದ್ಧಪಡಿಸುವಂತೆ ಸೂಚನೆ
ಭಾರತದಾದ್ಯಂತ ಜೂನ್.8ರಿಂದ ಬಹುತೇಕ ಲಾಕ್ ಡೌನ್ ಸಡಿಲಿಕೆ ಆಗಲಿದೆ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲು ಆರಂಭಿಸಲಿದ್ದು, ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಇದರ ನಡುವೆ ಮಹಾರಾಷ್ಟ್ರದಲ್ಲಿ ಸರ್ಕಾರಿ ನೌಕರರ ಕೆಲಸದ ವೇಳಾಪಟ್ಟಿಯನ್ನು ಸಿದ್ಧಪಡಿಸುವಂತೆ ಹಣಕಾಸು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಸೌನಿಕ್ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಸಿಬ್ಬಂದಿ ಹಾಜರಾತಿ ಬಗ್ಗೆ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಕೆ
ವೈದ್ಯಕೀಯ ರಜೆ ಹಾಗೂ ಸಾಮಾನ್ಯ ರಜೆಗಳನ್ನು ಪಡೆದುಕೊಂಡಿರುವ ಸಿಬ್ಬಂದಿಗೆ ವಿನಾಯಿತಿ ನೀಡಲಾಗಿದೆ. ಉಳಿದಂತೆ ಸರ್ಕಾರಿ ಕಚೇರಿಯ ಪ್ರತಿಯೊಬ್ಬ ಸಿಬ್ಬಂದಿಯೂ ಕಡ್ಡಾಯವಾಗಿ ವಾರಕ್ಕೆ ಒಂದು ಬಾರಿಯಾದರೂ ಹಾಜರಾತಿ ಹಾಕಬೇಕು. ಸಿಬ್ಬಂದಿಯ ಹಾಜರಾತಿ ಬಗ್ಗೆ ಇಲಾಖೆಯ ಮುಖ್ಯಸ್ಥರು ಲಕ್ಷ್ಯ ವಹಿಸಿರಬೇಕು. ಇಲ್ಲದಿದ್ದರೆ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಸೂಚನೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಮಹಾರಾಷ್ಟ್ರದ ಕಚೇರಿಗಳಲ್ಲಿ ಶೇ.5-10ರಷ್ಟು ಸಿಬ್ಬಂದಿ
ಮಹಾರಾಷ್ಟ್ರದಲ್ಲಿ ಜೂನ್.30ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದ್ದು, ಇದರ ನಡುವೆಯೇ ಜೂನ್.08ರಿಂದ ಸರ್ಕಾರಿ ಕಚೇರಿಗಳು ಕಾರ್ಯಾರಂಭ ಮಾಡಲಿವೆ. ರಾಜ್ಯದಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಶೇ.5 ರಿಂದ 10 ರಷ್ಟು ಸಿಬ್ಬಂದಿಯನ್ನಷ್ಟೇ ಇಟ್ಟುಕೊಂಡು ಕಚೇರಿಯ ಕಾರ್ಯವನ್ನು ನಡೆಸುವಂತೆ ಸೂಚನೆ ನೀಡಲಾಗಿದೆ.