ಟೀ ಮಾಡಲು ನಿರಾಕರಿಸಿದ್ದಕ್ಕೆ ಹೆಂಡತಿ ಮೇಲೆ ಹಲ್ಲೆ; ಬಾಂಬೆ ಹೈಕೋರ್ಟ್ ಹೇಳಿದ್ದೇನು?
ಮುಂಬೈ, ಫೆಬ್ರವರಿ 25: ಹೆಂಡತಿ ಮೇಲೆ ಹಲ್ಲೆ ನಡೆಸಿದ 35 ವರ್ಷದ ವ್ಯಕ್ತಿಯೊಬ್ಬರ ಅಪರಾಧಕ್ಕೆ ಶಿಕ್ಷೆಯನ್ನು ಎತ್ತಿಹಿಡಿದಿರುವ ಬಾಂಬೆ ಹೈ ಕೋರ್ಟ್, ಗಂಡನಿಗೆ ಟೀ ಮಾಡಿಕೊಡಲು ಹೆಂಡತಿ ನಿರಾಕರಿಸಿದ್ದನ್ನು ಹಲ್ಲೆಗೆ ಪ್ರಚೋದನೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆತ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದೆ.
ನ್ಯಾಯಾಧೀಶೆ ರೇವತಿ ಮೋಹಿತೆ ಡೇರೆ ಈ ಆದೇಶ ಹೊರಡಿಸಿದ್ದು, "ಪತ್ನಿ ಎನ್ನುವವಳು ಒಂದು ವಸ್ತು ಅಥವಾ ಸ್ವತ್ತಲ್ಲ. "ಮದುವೆ" ಎಂಬುದು ಸಮಾನತೆಯ ಆಧಾರದಲ್ಲಿ ರೂಪುಗೊಂಡಿರುವ ವ್ಯವಸ್ಥೆ. ಆದರೆ ಆ ಪರಿಕಲ್ಪನೆಯೇ ಈಗ ತಲೆಕೆಳಗಾಗಿದೆ. ಈ ರೀತಿಯ ಪ್ರಕರಣಗಳು ಈಗ ಮೇಲಿಂದ ಮೇಲೆ ಕಂಡುಬರುತ್ತಲೇ ಇವೆ ಎಂದು ಹೇಳಿದ್ದಾರೆ.
ಪಿತೃ ಪ್ರಧಾನ ಕುಟುಂಬದಲ್ಲಿನ ಅಸಮಾನತೆ, ವ್ಯಕ್ತಿ ಬೆಳೆದ ಸಾಮಾಜಿಕ, ಸಾಂಸ್ಕೃತಿಕ ವಾತಾವರಣ ವೈವಾಹಿಕ ಸಂಬಂಧದ ಮೇಲೆ ಪರಿಣಾಮ ಬೀರುತ್ತಿದೆ ಎಂದಿರುವ ಕೋರ್ಟ್, ಪಿತೃಪ್ರಧಾನತೆ ಹಾಗೂ ಹೆಂಡತಿಯು ಗಂಡನಿಗೆ ಸೇರಿದ ಸ್ವತ್ತು ಎಂಬ ಭಾವನೆ ಇಂದಿಗೂ ಸಮಾಜದಲ್ಲಿರುವುದು ದುರದೃಷ್ಟಕರ ಎಂದು ಕೋರ್ಟ್ ಹೇಳಿದೆ. ಮುಂದೆ ಓದಿ...
ಸುತ್ತಿಗೆಯಿಂದ ಹಲ್ಲೆ ಮಾಡಿದ್ದ ಗಂಡ
2013ರ ಡಿಸೆಂಬರ್ನಲ್ಲಿ ಸೋಲಾಪುರದ ಪಂಡರಾಪುರದಲ್ಲಿ ಸಂತೋಷ್ ಅಟ್ಕಾರ್ ಎಂಬಾತ ತನ್ನ ಹೆಂಡತಿ ಮನಿಷಾ ಮೇಲೆ ಹಲ್ಲೆ ನಡೆಸಿದ್ದ. ಸುತ್ತಿಗೆಯಿಂದ ಹಲ್ಲೆ ನಡೆಸಿದ್ದ ಆತ, ಮಗಳು ಹಾಸಿಗೆಯಿಂದ ಎದ್ದು ಬರುವಷ್ಟರಲ್ಲಿ ರಕ್ತವನ್ನು ಶುದ್ಧಗೊಳಿಸಿ ಆನಂತರ ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ಆದರೆ ವಾರದ ನಂತರ ತೀವ್ರ ಗಾಯದಿಂದ ಮನಿಷಾ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಆರು ವರ್ಷದ ಮಗಳು ಸಾಕ್ಷ್ಯ ನುಡಿದಿದ್ದಳು. ಈ ಪ್ರಕರಣ ಸಂಬಂಧ ಸ್ಥಳೀಯ ಕೋರ್ಟ್ 2016ರಲ್ಲಿ ಸಂತೋಷ್ಗೆ ಹತ್ತು ವರ್ಷ ಜೈಲುಶಿಕ್ಷೆ ವಿಧಿಸಿತ್ತು.
"ಪುಟ್ಟ ಮಕ್ಕಳ ಕೆನ್ನೆ ಮುಟ್ಟುವುದು ಅಪರಾಧವಲ್ಲ"; ಷರತ್ತುಗಳು ಅನ್ವಯ!
ಟೀ ಮಾಡಿಕೊಡಲಿಲ್ಲ ಎಂದು ಹಲ್ಲೆ
ಹೆಂಡತಿಯು ತಾನು ಹೊರಡುವಾಗ ಟೀ ಮಾಡಿಕೊಡಲಿಲ್ಲ. ಹೀಗಾಗಿ ತನಗೆ ಕೋಪ ಬಂದು ಹಲ್ಲೆ ನಡೆಸಿದ್ದೆ ಎಂದು ಸಂತೋಷ್ ಕಾರಣ ನೀಡಿದ್ದನು. ಹೆಂಡತಿ ಟೀ ಮಾಡಿಕೊಡಲಿಲ್ಲ. ಆಕೆಯ ನಡೆಯಿಂದ ಬೇಸತ್ತು ಗಂಡ ಹಲ್ಲೆ ನಡೆಸಿದ್ದ ಎಂದು ಸಂತೋಷ್ ಪರ ವಕೀಲರು ವಾದಿಸಿ, ಹತ್ತು ವರ್ಷ ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಈ ವಾದವನ್ನು ಹಾಸ್ಯಾಸ್ಪದ ಎಂದು ತಳ್ಳಿಹಾಕಿದ ಬಾಂಬೈ ಹೈಕೋರ್ಟ್ ಜೈಲು ಶಿಕ್ಷೆಯನ್ನು ಎತ್ತಿಹಿಡಿದಿದೆ.
"ಇಂದಿಗೂ ಲಿಂಗ ಅಸಮಾನತೆ ಸಮಾಜದಲ್ಲಿದೆ"
ಇಂದಿಗೂ ಲಿಂಗ ಅಸಮಾನತೆ ಸಮಾಜದಲ್ಲಿ ಇದೆ ಎಂದು ಬೇಸರ ವ್ಯಕ್ತಪಡಿಸಿದ ನ್ಯಾಯಾಲಯ, ಮನೆಯ ಎಲ್ಲಾ ಕೆಲಸವನ್ನು ಹೆಂಡತಿಯೇ ಮಾಡಬೇಕೆಂದು ಈಗಲೂ ಸಮಾಜ ಬಯಸುತ್ತದೆ. ದಾಂಪತ್ಯದಲ್ಲಿ ಹೆಂಡತಿಯನ್ನು ಆಸ್ತಿ, ಸ್ವತ್ತು ಎಂಬಂತೆ ಬಳಸಿಕೊಳ್ಳಲಾಗುತ್ತಿದೆ. ಸಮಾನತೆಯಲ್ಲಿನ ಈ ಅಸಮತೋಲನ ದಾಂಪತ್ಯದಲ್ಲಿನ ಕಲಹಗಳಿಗೆ ಕಾರಣವಾಗಿದೆ ಎಂದು ತಿಳಿಸಿದೆ.
ಯಾವುದೇ ಪ್ರತಿರೋಧವಿಲ್ಲದೆ ಒಬ್ಬನೇ ವ್ಯಕ್ತಿ ಅತ್ಯಾಚಾರ ಮಾಡಲು ಅಸಾಧ್ಯ: ಬಾಂಬೆ ಹೈಕೋರ್ಟ್
"ಇದು ನಮ್ಮ ಸಮಾಜದ ದುರದೃಷ್ಟಕರ ಸಂಗತಿ"
ಮಹಿಳೆಯು ಮದುವೆ ನಂತರ ತನ್ನನ್ನು ತಾನು ಪುರುಷರಿಗೆ ಒಪ್ಪಿಸಿಕೊಳ್ಳುತ್ತಾಳೆ. ಆಕೆಯ ಮನಸ್ಥಿತಿಯನ್ನೂ ಹಾಗೆಯೇ ರೂಪಿಸಲಾಗಿದೆ. ಹೀಗಾಗಿಯೇ ಗಂಡನೂ ಆಕೆಯನ್ನು ಅದೇ ರೀತಿ ನಡೆಸಿಕೊಳ್ಳುತ್ತಾನೆ. ಹೆಂಡತಿ ಗಂಡನ ಆಸ್ತಿಯೆಂಬ ಕಲ್ಪನೆ ಇನ್ನೂ ಅಸ್ತಿತ್ವದಲ್ಲಿರುವುದು ದುರದೃಷ್ಟಕರ ಎಂದು ನ್ಯಾಯಾಲಯ ವಿಷಾದ ವ್ಯಕ್ತಪಡಿಸಿದೆ. ಟೀ ಮಾಡಲು ನಿರಾಕರಿಸಿದ್ದೇ ತನಗೆ ಹಲ್ಲೆ ಮಾಡಲು ಪ್ರಚೋದನೆ ನೀಡಿತು ಎಂಬ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್, ಇದು ಹಾಸ್ಯಾಸ್ಪದ ಹಾಗೂ ಅಸಮರ್ಥನೀಯ. ಈ ಮನವಿ ತಿರಸ್ಕರಿಸಲು ಅರ್ಹವಾಗಿದೆ ಎಂದು ಹೇಳಿದೆ.