ಕಂಗನಾ ರಣಾವತ್ ಕಟ್ಟಡ ನೆಲಸಮ ಪ್ರಕರಣಕ್ಕೆ ಹೊಸ ಟ್ವಿಸ್ಟ್!
ಮುಂಬೈ, ಸೆ 11: ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಹೊಂದಿದ್ದ ಕಚೇರಿಯ ಜಾಗ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಒಡೆತನದ್ದು ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ಶರದ್ ಪವಾರ್ ನಿರಾಕರಿಸಿದ್ದಾರೆ.
ಕಂಗನಾ ಅವರ ಕಚೇರಿಯನ್ನು ಅಕ್ರಮ ಕಟ್ಟಡ ಎಂದು ಬೃಹನ್ ಮುಂಬೈ ಮಹಾನಗರಪಾಲಿಕೆ (ಬಿಎಂಸಿ) ನೆಲಸಮ ಮಾಡುವ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂಬಂಧ ಕಂಗನಾ ಬಾಂಬೆ ಹೈಕೋರ್ಟ್ ಮೆಟ್ಟಲೇರಿದ್ದರು. ಕೋರ್ಟ್ ಕಾರ್ಯಾಚರಣೆಗೆ ತಡೆ ನೀಡಿತ್ತು.
"ನಾನು ಕಚೇರಿ ಹೊಂದಿದ್ದ ಜಾಗ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಸೇರಿದ್ದು"ಎನ್ನುವ ಹೇಳಿಕೆಯನ್ನು ಕಂಗನಾ ನೀಡಿದ್ದರು. ಇದಕ್ಕೆ ಶರದ್ ಪವಾರ್ ಖಾರವಾಗಿ ಪ್ರತಿಕ್ರಿಯಿಸಿ, ಕಂಗನಾ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.

"ಕಂಗನಾ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಬಿಎಂಸಿ ಕೆಡವಲು ಹೊರಟಿರುವ ಜಾಗಕ್ಕೂ, ನನಗೂ ಅಥವಾ ನನ್ನ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ"ಎಂದು ಶರದ್ ಪವಾರ್ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಕಂಗನಾ ಅವರ ಬಾಂದ್ರಾದಲ್ಲಿರುವ ಕಚೇರಿ ಅಕ್ರಮ ಎಂದು ಬಿಎಂಸಿ ನೊಟೀಸ್ ಜಾರಿಮಾಡಿ, ಮರುದಿನವೇ ಕೆಡವಲು ಶುರು ಮಾಡಿತ್ತು. ಇದು, ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ವಿಚಾರದಲ್ಲಿ ಎನ್ಸಿಪಿ-ಶಿವಸೇನೆಯ ನಡುವೆ ಸಣ್ಣ ಮನಸ್ತಾಪವೂ ಉಂಟಾಗಿತ್ತು.
ಮಹಾರಾಷ್ಟ್ರದ ಸಮ್ಮಿಶ್ರ ಸರಕಾರದ ವಿರುದ್ದ ತಿರುಗಿ ಬಿದ್ದಿರುವ ಕಂಗನಾ ರಣಾವತ್, "ಸಿಎಂ ಉದ್ಧವ್ ಠಾಕ್ರೆ ಮತ್ತು ಚಿತ್ರ ನಿರ್ಮಾಪಕ/ವಿತರಕ ಕರಣ್ ಜೋಹರ್ ಅವರ ಎಲ್ಲಾ ವಿಷಯಗಳನ್ನು ಬಹಿರಂಗಗೊಳಿಸುವುದಾಗಿ"ಸವಾಲನ್ನು ಹಾಕಿದ್ದರು.












Click it and Unblock the Notifications