ಮುಂಬಯಿ: ಛೋಟಾ ಶಕೀಲ್ನ ಇಬ್ಬರು ಸಹಚರರ ಬಂಧನ
ಮುಂಬಯಿ ಮೇ 14: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ವಿರುದ್ಧ ದಾಳಿ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ), ಆತನ ಬಲಗೈ ಬಂಟ ಛೋಟಾ ಶಕೀಲ್ನ ಇಬ್ಬರು ಸಹಚರರನ್ನು ಬಂಧಿಸಿದೆ.
ಆರೀಫ್ ಅಬೂಬಕರ್ ಶೇಖ್(59) ಮತ್ತು ಶಬ್ಬೀರ್ ಅಬೂಬಕರ್ ಶೇಖ್(51) ಬಂಧಿತರು.
"ಬಂಧಿತ ಇಬ್ಬರೂ ಮುಂಬಯಿ ಪಶ್ಚಿಮ ಉಪನಗರಗಳಲ್ಲಿ ಡಿ-ಕಂಪನಿಯ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಕಾರ್ಯದಲ್ಲಿ ತೊಡಗಿದ್ದರು. ಅವರನ್ನು ಶುಕ್ರವಾರ ಎನ್ಐಎ ವಿಶೇಷ ಕೋರ್ಟ್ ಎದುರು ಹಾಜರುಪಡಿಸಲಾಗುವುದು,'' ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.
"ತನಿಖೆಗಳ ಪ್ರಕಾರ ಇಡೀ ಚಟುವಟಿಕೆಗಳನ್ನು ದೇಶದ ಗಡಿ ಆಚೆಯಿಂದ ದಾವೂದ್ ಗ್ಯಾಂಗ್ ನಡೆಸುತ್ತದೆ. ಈ ಕುರಿತು ವಿವರಣೆ ನೀಡುವಂತೆ 21 ಮಂದಿಗೆ ಸಮನ್ಸ್ ಜಾರಿಗೊಳಿಸಲಾಗಿದೆ,'' ಎಂದು ಮಾಹಿತಿ ನೀಡಿದರು.
ಈ ವಾರದಲ್ಲಿ ಆರಂಭದಲ್ಲಿ ಮುಂಬಯಿ ಕಮಿಷರನರೇಟ್ ವ್ಯಾಪ್ತಿಯ 24 ಸ್ಥಳಗಳಲ್ಲಿ ಮತ್ತು ಮೀರಾ ರಸ್ತೆ ಬಯಾಂದರ್ ಕಮಿಷನರೇಟ್ ವ್ಯಾಪ್ತಿಯ 5 ಸ್ಥಳಗಳಲ್ಲಿ ಎನ್ಐಎ ದಾಳಿ ನಡೆಸಿತ್ತು.
"ಎಲೆಕ್ಟ್ರಾನಿಕ್ ಸಾಧನಗಳು, ರಿಯಲ್ ಎಸ್ಟೇಟ್ ದಾಖಲೆಗಳು, ನಗದು, ಬಂದೂಕು ಸೇರಿದಂತೆ ಹಲವಾರು ಪುರಾವೆಗಳನ್ನು ವಶಪಡಿಸಿಕೊಂಡಿದ್ದೇವೆ. ಅಲ್ಲದೇ ಈ ಕುರಿತು ಸಂಬಂಧಿಸಿದವರಿಗೆ ಸಮನ್ಸ್ ಜಾರಿಗೊಳಿಸಿದ್ದು, ಪ್ರತಿಯೊಬ್ಬರನ್ನು ಕರೆಸಿ ವಿಚಾರಣೆ ನಡೆಸುತ್ತೇವೆ,'' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಸಮನ್ಸ್ ಜಾರಿ
ತನಿಖಾ ತಂಡದ ಅಧಿಕಾರಿಗಳ ಪ್ರಕಾರ, ಛೋಟಾ ಶಕೀಲ್ನ ಸದೋರ ಮಾವ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್, ಮಹಿಮ್ ಮತ್ತು ಹಾಜಿ ಅಲಿ ದರ್ಗಾಗಳ ಮ್ಯಾನೇಜಿಂಗ್ ಟ್ರಸ್ಟಿ ಸುಹೇಲ್ ಖಾಂಡ್ವಾನಿ, ಬಾಲಿವುಡ್ ನಿರ್ಮಾಪಕ ಮತ್ತು1993ರ ಮುಂಬಯಿ ಸ್ಫೋಟದ ಆರೋಪಿ ಸಮೀರ್ ಹಿಂಗೋರಾಣಿ, ಹವಾಲಾ ಆಪರೇಟರ್ ಅಬ್ದುಲ್ ಕಯ್ಯುಂ, ಬುಕ್ಕಿ ಮತ್ತು ಬಿಲ್ಡರ್ ಅಜಯ್ ಗೋಸಾಲಿಯಾ ಅಲಿಯಾಸ್ ಅಜಯ್ ಗಂಡ, ಮೊಬಿದಾ ಭಿವಂಡಿವಾಲಾ, ಗುಡ್ಡು ಪಠಾಣ್ ಮತ್ತು ಹೋಟೆಲ್ ಮಾಲೀಕ ಅಸ್ಲಾಂ ಸರೋಡಿಯಾ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದು, ತನಿಖೆ ನಡೆಸಲಾಗುತ್ತಿದೆ.
ಈ ವರ್ಷದ ಫೆಬ್ರವರಿ 3ರಂದು ಎನ್ಐಎ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಮತ್ತು ಅದರ ಅಕ್ಕ-ಪಕ್ಕದ ಜಿಲ್ಲೆಗಳ 29 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ಈ ಪ್ರಕರಣವು ದಾವೂದ್ ಇಬ್ರಾಹಿಂ ಕಸ್ಕರ್ ಮತ್ತು ಆತನ ಸಹಚರರಾದ ಹಾಜಿ ಅನೀಸ್ ಅಲಿಯಾಸ್ ಅನೀಸ್ ಇಬ್ರಾಹಿಂ ಶೇಖ್, ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್, ಜಾವೇದ್ ಪಟೇಲ್ ಅಲಿಯಾಸ್ ಚಿಕ್ನಾ, ಇಬ್ರಾಹಿಂ ಮುಸ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್ ಒಳಗೊಂಡಿರುವ ಡಿ-ಕಂಪನಿಯ ಅಂತಾರಾಷ್ಟ್ರೀಯ ಭಯೋತ್ಪಾದಕ ಜಾಲದ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ್ದಾಗಿದೆ.
ಇವರ ಮೇಲೆ ಶಸ್ತ್ರಾಸ್ತ್ರ ಕಳ್ಳಸಾಗಣೆ, ನಾರ್ಕೊ ಟೆರರಿಸಮ್, ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕ ಚಟುವಟಿಕೆಗಳಿಗಾಗಿ ನಿಧಿ ಸಂಗ್ರಹದ ಆರೋಪಗಳಿವೆ.
ಎನ್ಐಯ ಪ್ರಕಾರ, ಇವರು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಾದ ಲಷ್ಕರೆ ತೈಬಾ(ಎಲ್ಇಟಿ), ಜೈಶೆ ಮೊಹಮ್ಮದ್(ಜೆಇಎಂ) ಮತ್ತು ಅಲ್ಖೈದಾದೊಂದಿಗೆ ನಂಟು ಹೊಂದಿದ್ದು, ಈ ಸಂಘಟನೆಗಳೊಂದಿಗೆ ಸಕ್ರಿಯವಾಗಿ ತೊಡಗಿದ್ದಾರೆ.
ಎಫ್ಐಆರ್ನಲ್ಲಿ ಉಲ್ಲೇಖಿಸಿರುವುದೇನು?
ಭಾರತದ ಪ್ರಮುಖ ವ್ಯಕ್ತಿಗಳು, ರಾಜಕೀಯ ನಾಯಕರು, ಉದ್ಯಮಿಗಳನ್ನು ಹತ್ಯೆ ಮಾಡಿ ದೇಶದ ಜನರಲ್ಲಿ ಭಯದ ವಾತಾವರಣ ಉಂಟು ಮಾಡಲು ಡಿ-ಕಂಪನಿಯು ವಿಶೇಷ ಘಟಕವನ್ನು ಸ್ಥಾಪಿಸಿದೆ. ಅಲ್ಲದೇ ದೆಹಲಿ, ಮುಂಬಯಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ದಾವೂದ್ ಮತ್ತು ಆತನ ಸಹಚರರು ಯೋಜನೆ ರೂಪಿಸಿದ್ದಾರೆ ಎಂದು ಎನ್ಐಎ ದಾಖಲಿಸಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.