ಮಹಾರಾಷ್ಟ್ರದಲ್ಲಿ ಇವರೇ ಮುಂದಿನ ಮುಖ್ಯಮಂತ್ರಿ: ಇದು ಚರ್ಚೆಯಷ್ಟೇ!
ಮುಂಬೈ, ನವೆಂಬರ್.22: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಗ್ಗೆ ಅದೆಷ್ಟು ಚರ್ಚೆ ನಡೆಸಿದರೂ ಮುಗಿಯುತ್ತಲೇ ಇಲ್ಲ. ಇದು ಒಂದು ಎರಡು ದಿನಗಳ ಕಥೆಯಲ್ಲ. ವಾರಗಟ್ಟಲೇ ಮೈತ್ರಿ ಕುರಿತು ಚರ್ಚೆ ನಡೆಸಿದರೂ ಇಂದಿಗೂ ಮಿತ್ರಪಕ್ಷಗಳು ಒಂದು ತೀರ್ಮಾನಕ್ಕೆ ಬಂದಂತೆ ಕಾಣುತ್ತಿಲ್ಲ.
ನಿನ್ನೆ ನಾಳೆ ಅಂತಿಮವಾಗಿ ಸರ್ಕಾರ ರಚನೆ ಬಗ್ಗೆ ಘೋಷಿಸುತ್ತೇವೆ ಎನ್ನುತ್ತಿದ್ದ ಮಿತ್ರಪಕ್ಷಗಳು ಇಂದೂ ಕೂಡಾ ಅದೇ ರಾಗವನ್ನು ಹಾಡುತ್ತಿವೆ. ಇಂದು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ನವೆಂಬರ್.23ರಂದು ಅಂತಿಮ ತೀರ್ಮಾನದ ಬಗ್ಗೆ ಘೋಷಿಸಲಾಗುತ್ತದೆ ಎಂದು ಹೇಳುತ್ತಿವೆ.
ಇಂದು ಮುಂಬೈನಲ್ಲಿ ನಡೆದ ಕಾಂಗ್ರೆಸ್-ಎನ್ ಸಿಪಿ ಪಕ್ಷದ ನಾಯಕರ ಸಾಲು ಸಾಲು ಸಭೆಗಳ ಬಳಿಕ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನವೆಂಬರ್.23ರಂದು ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷದ ನಾಯಕರೆಲ್ಲ ಸೇರಿಕೊಂಡು ಮೈತ್ರಿ ನಿರ್ಧಾರದ ಬಗ್ಗೆ ಸುದ್ದಿಗೋಷ್ಛಿಯಲ್ಲಿ ಘೋಷಿಸಲಾಗುತ್ತದೆ ಎಂದರು.

ಶಿವಸೇನೆ ಮುಖ್ಯಸ್ಥರಿಗೆ ಮುಖ್ಯಮಂತ್ರಿ ಕುರ್ಚಿ
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ನೀಡುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಕಾಂಗ್ರೆಸ್-ಎನ್ ಸಿಪಿ ನಾಯಕರೆಲ್ಲ ಈ ಕುರಿತು ಚರ್ಚೆ ನಡೆಸಿದ್ದು, ಉಳಿದ ವಿಷಯಗಳ ಬಗ್ಗೆ ನವೆಂಬರ್.23ರಂದು ಮಾತುಕತೆ ನಡೆಸಲಾಗುತ್ತದೆ. ಅಂದೇ ರಾಜ್ಯಪಾಲರ ಭೇಟಿ ಹಾಗೂ ಸರ್ಕಾರ ರಚನೆಗೆ ಅವಕಾಶ ಕೋರುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಎನ್ ಸಿಪಿ ಮುಖ್ಯಮಸ್ಥ ಶರದ್ ಪವಾರ್ ತಿಳಿಸಿದ್ದಾರೆ.












Click it and Unblock the Notifications