ಮಹಾರಾಷ್ಟ್ರ: ಶಿವಸೇನಾ ಆಸೆಗೆ ತಣ್ಣೀರೆರಚಿದ ಶರದ್ ಪವಾರ್
ಮುಂಬೈ, ನವೆಂಬರ್ 6: ಮುಖ್ಯಮಂತ್ರಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಬಿಜೆಪಿಯೊಂದಿಗೆ ಒಮ್ಮತ ಬಾರದ ಕಾರಣ ಎನ್ಸಿಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿದ್ದ ಶಿವಸೇನಾದ ಬಯಕೆಗೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ತಣ್ಣೀರೆರಚಿದ್ದಾರೆ.
ಎನ್ಸಿಪಿ ಹಾಗೂ ಕಾಂಗ್ರೆಸ್ನ ಬಾಹ್ಯ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನಾ ಮುಂದಾಗಿತ್ತು. ಇದಕ್ಕಾಗಿ ಶರದ್ ಪವಾರ್ ಅವರನ್ನು ಬುಧವಾರ ಕೂಡ ಭೇಟಿ ಮಾಡಿದ್ದ ಶಿವಸೇನಾ ನಾಯಕ ಸಂಜಯ್ ರಾವತ್ ಮಾತುಕತೆ ನಡೆಸಿದ್ದರು. ಆದರೆ ಎನ್ಡಿಎ ಮೈತ್ರಿಕೂಟದಿಂದ ಸಂಪೂರ್ಣ ಹೊರಬಂದರೆ ಮಾತ್ರ ಸರ್ಕಾರ ರಚನೆಗೆ ಬೆಂಬಲ ನೀಡುವುದಾಗಿ ಎನ್ಸಿಪಿ ಕಠಿಣ ಷರತ್ತು ಮುಂದಿಟ್ಟಿತ್ತು.
ಬುಧವಾರ ಸಂಜಯ್ ರಾವತ್ ಭೇಟಿಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಶರದ್ ಪವಾರ್, ರಾಜ್ಯದಲ್ಲಿ ಸರ್ಕಾರ ರಚನೆಗೆ ನಾವು ಶಿವಸೇನಾಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಶಿವಸೇನಾ ಸೇರಿ ಸರ್ಕಾರ ರಚಿಸಲಿ ಎಂದು ಹೇಳಿದರು. ಈ ಮೂಲಕ ಶಿವಸೇನಾ-ಎನ್ಸಿಪಿ ಮೈತ್ರಿ ಸರ್ಕಾರದ ಎಲ್ಲ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.

ಅವರೇ ಸರ್ಕಾರ ರಚಿಸಬೇಕು
'ನಾನು ಈ ಬಗ್ಗೆ ಹೇಳುವುದೇನೂ ಇಲ್ಲ. ಬಿಜೆಪಿ ಮತ್ತು ಶಿವಸೇನಾಗೆ ಜನರ ಬಹುಮತ ದೊರಕಿದೆ. ಅವರು ಶೀಘ್ರದಲ್ಲಿಯೇ ಸರ್ಕಾರ ರಚಿಸಬೇಕು. ಜನರು ನಮಗೆ ನೀಡಿರುವ ತೀರ್ಪಿನ ಪ್ರಕಾರ ನಾವು ವಿರೋಧಪಕ್ಷದ ಸ್ಥಾನದಲ್ಲಿ ಕೂರುತ್ತೇವೆ. ಜವಾಬ್ದಾರಿಯುತ ವಿರೋಧಪಕ್ಷವಾಗಿ ಕೆಲಸ ಮಾಡುತ್ತೇವೆ' ಎಂದು ತಿಳಿಸಿದರು.

ಶಿವಸೇನಾ-ಬಿಜೆಪಿ ಮತ್ತೆ ಒಂದಾಗುತ್ತಾರೆ
'ಶಿವಸೇನಾ-ಎನ್ಸಿಪಿ ಸರ್ಕಾರ ರಚನೆಯ ಪ್ರಶ್ನೆ ಎಲ್ಲಿದೆ? ಬಿಜೆಪಿ ಮತ್ತು ಶಿವಸೇನಾ ಕಳೆದ 25 ವರ್ಷಗಳಿಂದ ಜತೆಯಾಗಿದ್ದಾರೆ. ಇಂದು ಅಥವಾ ನಾಳೆ ಅವರು ಮತ್ತೆ ಜತೆಯಾಗಿಯೇ ಬರುತ್ತಾರೆ' ಎಂದು ಒಡಕುಗಳು ಮೂಡಿದರೂ ಶಿವಸೇನಾ-ಬಿಜೆಪಿ ಮೈತ್ರಿ ನಡೆಯುತ್ತಲೇ ಇರುತ್ತದೆ. ಆದರೆ ಎನ್ಸಿಪಿ-ಶಿವಸೇನಾ ಮೈತ್ರಿ ಸಾಧ್ಯವೇ ಇಲ್ಲ ಎಂದು ಹೇಳಿದರು.

ಇರುವುದು ಒಂದೇ ಆಯ್ಕೆ
'ಇಲ್ಲಿ ಇರುವುದು ಒಂದೇ ಒಂದು ಆಯ್ಕೆ. ಅದು ಬಿಜೆಪಿ-ಶಿವಸೇನಾ ಸೇರಿ ಸರ್ಕಾರ ರಚಿಸುವುದು. ಹೀಗಾಗಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದನ್ನು ಹೊರತುಪಡಿಸಿ ಸರ್ಕಾರ ರಚಿಸುವ ಬೇರೆ ಯಾವುದೇ ಆಯ್ಕೆಗಳು ಇಲ್ಲ' ಎಂದರು.

ಸಮಸ್ಯೆಗಳ ಕುರಿತು ಚರ್ಚಿಸಿದ್ದು
'ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್ ಇಂದು ನನ್ನನ್ನು ಭೇಟಿ ಮಾಡಿ ಮುಂಬರುವ ರಾಜ್ಯಸಭೆ ಅಧಿವೇಶನದ ಕುರಿತು ಚರ್ಚೆ ನಡೆಸಿದರು. ನಾವು ಕೆಲವು ಸಂಗತಿಗಳಲ್ಲಿ ಸಮಾನ ನಿಲುವು ಹೊಂದಿದ್ದು, ಅವುಗಳ ಕುರಿತು ಚರ್ಚಿಸಿದೆವು' ಎಂದು ಸಂಜಯ್ ರಾವತ್ ಭೇಟಿಯ ಹಿಂದೆ ಮಹಾರಾಷ್ಟ್ರ ರಾಜಕಾರಣದ ಹೊಸ ಬೆಳವಣಿಗೆಗಳ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications