ಚೆನ್ನೈನಲ್ಲಿ ಅಪಹರಣ, ಮಹಾರಾಷ್ಟ್ರದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆ: ನಾವಿಕನ ನಿಗೂಢ ಹತ್ಯೆ
ಮುಂಬೈ, ಫೆಬ್ರವರಿ 8: ತಮಿಳುನಾಡಿನ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ನೌಕಾಪಡೆ ಉದ್ಯೋಗಿಯೊಬ್ಬರು ನಿಗೂಢ ರೀತಿಯಲ್ಲಿ ಮುಂಬೈನಲ್ಲಿ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ. ಈ ಘಟನೆಯ ಸ್ವರೂಪ ಮತ್ತು ಸಾಯುವ ಮೊದಲು ಅವರು ನೀಡಿದ ಅಪೂರ್ಣ ಮಾಹಿತಿ ಪೊಲೀಸರಿಗೆ ದೊಡ್ಡ ತಲೆನೋವು ತಂದಿದೆ.
ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ಬೆಟ್ಟವೊಂದರ ಬಳಿಕ ನೌಕಾಪಡೆ ನಾವಿಕ ಸೂರಜ್ ಕುಮಾರ್ ದುಬೆ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಫೆ. 5ರಂದು ಪತ್ತೆಯಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಯುವ ಮೊದಲು ಸ್ಥಳೀಯ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಸೂರಜ್, ಜನವರಿ 30ರಂದು ಚೆನ್ನೈ ವಿಮಾನ ನಿಲ್ದಾಣದ ಹೊರಭಾಗದಲ್ಲಿ ತಮ್ಮನ್ನು ಅಪಹರಿಸಲಾಗಿತ್ತು. ಬಳಿಕ ಒತ್ತೆ ಹಣಕ್ಕಾಗಿ ಚೆನ್ನೈನಲ್ಲಿ ಮೂರು ದಿನಗಳ ಕಾಲ ವಶದಲ್ಲಿ ಇರಿಸಿಕೊಂಡಿದ್ದರು. ನಂತರ ಬೆಂಕಿ ಹಚ್ಚಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಮೈಸೂರು; ಎಲೆ ತೋಟದ ಬಳಿ ಜೋಡಿ ಕೊಲೆ
ಆದರೆ ಚೆನ್ನೈನಿಂದ ನೂರಾರು ಕಿಮೀ ದೂರದಲ್ಲಿರುವ ಮಹಾರಾಷ್ಟ್ರಕ್ಕೆ ಅವರು ತಲುಪಿದ್ದು ಹೇಗೆ? ಪೊಲೀಸರ ಈ ಪ್ರಶ್ನೆಗೆ ಉತ್ತರ ನೀಡಲು ಸೂರಜ್ಗೆ ಸಾಧ್ಯವಾಗಲಿಲ್ಲ. ಚೆನ್ನೈ ವಿಮಾನ ನಿಲ್ದಾಣದ ಹೊರಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಈ ಪ್ರಕರಣ ಮತ್ತಷ್ಟು ಕಗ್ಗಂಟಾಗಿಸಿದೆ. ಏಕೆಂದರೆ ಸೂರಜ್ ಹೇಳಿದಂತೆ ಚೆನ್ನೈ ವಿಮಾನ ನಿಲ್ದಾಣದ ಹೊರಗೆ ಅವರ ಅಪಹರಣವಾಗಿಲ್ಲ. ವಿಮಾನ ನಿಲ್ದಾಣದಿಂದ ಹೊರಬಂದ ಬಳಿಕ ನೇರವಾಗಿ ಹೋಟೆಲ್ ಒಂದಕ್ಕೆ ಹೋಗಿರುವುದು ಕಂಡುಬಂದಿದೆ. ಮುಂದೆ ಓದಿ.
ಸಾಯುವ ಮೊದಲು ನೀಡಿದ ಹೇಳಿಕೆ
ಸಾಯುವ ಮೊದಲು ನೀಡಿರುವ ಹೇಳಿಕೆಯಲ್ಲಿ ಸೂರಜ್, ಜನವರಿ 30ರಂದು ರಾಂಚಿಯಿಂದ ಚೆನ್ನೈಗೆ ವಿಮಾನದಲ್ಲಿ ಬಂದಿದ್ದಾಗಿ ತಿಳಿಸಿದ್ದರು. ಚೆನ್ನೈಗೆ 9 ರಾತ್ರಿ ತಲುಪಿದ್ದರು. ವಿಮಾನ ನಿಲ್ದಾಣದ ಹೊರಗೆ ಮೂವರು ವ್ಯಕ್ತಿಗಳು ಬಂದೂಕು ತೋರಿಸಿ ತನ್ನ ಹಣ ಮತ್ತು ಮೊಬೈಲ್ ಕಿತ್ತುಕೊಂಡು ಬಿಳಿ ಎಸ್ಯುವಿಯಲ್ಲಿ ಅಪಹರಿಸಿದರು. ಅಪಹರಣಾಕಾರರು ಬಿಡುಗಡೆಗೆ 10 ಲಕ್ಷ ರೂ ಹಣ ಬೇಡಿಕೆ ಇರಿಸಿದ್ದರು ಎಂದು ವಿವರಿಸಿದ್ದರು.
'ಸೂರಜ್ ಅವರು ಜನವರಿ 1 ರಿಂದ ಫೆಬ್ರವರಿ 1ರವರೆಗೂ ರಜೆಯಲ್ಲಿದ್ದರು. ಗನ್ ತೋರಿಸಿ ಮೂವರು ಅಪರಿಚಿತರು ಅವರನ್ನು ಅಪಹರಿಸಿದ್ದಾರೆ. ಅವರನ್ನು ಚೆನ್ನೈನಲ್ಲಿ ಮೂರು ದಿನ ಇರಿಸಲಾಗಿತ್ತು. ಅಲ್ಲಿಂದ ಮುಂದೆ ಏನಾಯಿತು ಎನ್ನುವುದು ಅವರಿಗೆ ವಿವರಿಸಲು ಆಗಲಿಲ್ಲ. ಫೆ. 5ರಂದು ಅವರ ಮೇಲೆ ಪೆಟ್ರೋಲ್ ಸುರಿಯಲಾಗಿದೆ. ಇದು ಅವರೇ ನೀಡಿದ ಹೇಳಿಕೆ' ಎಂದು ಪಲ್ಗಾರ್ ಪೊಲೀಸ್ ಮುಖ್ಯಸ್ಥ ಡಿಟಿ ಶಿಂಧೆ ಹೇಳಿದ್ದಾರೆ.
ಹಣಕ್ಕಾಗಿ ಕರೆ ಬಂದೇ ಇಲ್ಲ
ಸೂರಜ್ ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಸುಮಾರು 100 ಸಿಬ್ಬಂದಿಯ ಹತ್ತು ತಂಡಗಳನ್ನು ರಚಿಸಲಾಗಿದೆ. ಆದರೆ ಪ್ರಾರಂಭಿಕ ತನಿಖೆಯಲ್ಲಿ ಪೊಲೀಸರಿಗೆ ಈ ಹೇಳಿಕೆಗೆ ವಿರುದ್ಧವಾದ ಮಾಹಿತಿಗಳು ಲಭ್ಯವಾಗಿವೆ.
ಪೊಲೀಸರ ತನಿಖೆ ಪ್ರಕಾರ ನಾವಿಕನ ಕುಟುಂಬದವರಿಗೆ ಒತ್ತೆ ಹಣಕ್ಕಾಗಿ ಬೇಡಿಕೆ ಕರೆ ಬಂದಿಲ್ಲ. ವಿಮಾನ ನಿಲ್ದಾಣ ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಯಾವುದೇ ಒದ್ದಾಟ, ಅಪಹರಣದ ಸುಳಿವುಗಳು ದಾಖಲಾಗಿಲ್ಲ. ಸೂರಜ್ ಅವರು ತಮ್ಮ ಮೊಬೈಲ್ ಸಿಮ್ ಕಾರ್ಡ್ ಬದಲಿಸುವುದು ಅದರಲ್ಲಿ ದಾಖಲಾಗಿದೆ.
ದೇವರನ್ನು ಮೆಚ್ಚಿಸಲು 6 ವರ್ಷದ ಮಗನನ್ನು ಕೊಲೆ ಮಾಡಿದ ಮದರಸಾ ಶಿಕ್ಷಕಿ
ಅಪಹರಣದ ಬಳಿಕವೂ ಸಿಮ್ ಕಾರ್ಡ್ ಚಾಲನೆ
ಸೂರಜ್ ಬಳಿ ಮೂರು ಸಿಮ್ ಕಾರ್ಡ್ಗಳಿದ್ದವು. ಆದರೆ ಕುಟುಂಬದವರಿಗೆ ಎರಡು ಸಂಖ್ಯೆಗಳು ಮಾತ್ರ ತಿಳಿದಿದ್ದವು. ಫೆಬ್ರವರಿ 1ರಂದು ತಮ್ಮ ಮೂರನೇ ಸಂಖ್ಯೆ ಬಳಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು. ತಮ್ಮನ್ನು ಅಪಹರಿಸಲಾಗಿತ್ತು ಎಂದು ಅವರು ತಿಳಿಸಿದ್ದರು. ಆದರೆ ಫೆ. 1ರಂದು ತಮ್ಮ ಖಾತೆಯಿಂದ 5,000 ರೂ ತೆಗೆದಿದ್ದರು. ಅವರ ಮೂರನೇ ಸಿಮ್ ಅಪಹರಣದ ದಿನದಿಂದ ಎರಡು ದಿನಗಳವರೆಗೆ ಕೆಲಸ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸೂರಜ್ ಸಾಲದ ಹೊರೆಯಲ್ಲಿದ್ದರು. ತಮ್ಮ ಸಹೋದ್ಯೋಗಿಯಿಂದ ಆರು ಲಕ್ಷ ರೂ ಸಾಲ ಪಡೆದಿದ್ದರು. 8 ಲಕ್ಷ ರೂ ಹಣವನ್ನು ಬ್ಯಾಂಕ್ನಿಂದ ವೈಯಕ್ತಿಕ ಸಾಲವನ್ನಾಗಿ ಮತ್ತು ತಮ್ಮ ಮಾವ ಆಗುವ ವ್ಯಕ್ತಿಯ ಕುಟುಂಬದಿಂದ 9 ಲಕ್ಷ ರೂ ಪಡೆದಿದ್ದರು. ಹೀಗಿದ್ದರೂ ಅವರ ಎರಡು ಬ್ಯಾಂಕ್ ಖಾತೆಗಳಲ್ಲಿ ಕೇವಲ 392 ರೂ ಹಣ ಉಳಿದಿದೆ.
ಸಹೋದ್ಯೋಗಿ ಮೇಲೆ ಅನುಮಾನ
ಸಹೋದ್ಯೋಗಿಯು ತಮ್ಮ ಹಣ ಮರಳಿಸುವಂತೆ ಒತ್ತಾಯಿಸಿದ್ದರು. ಚೆಕ್ ಮೂಲಕ ಹಣ ವಾಪಸ್ ನೀಡುವುದಾಗಿ ಸೂರಜ್ ಭರವಸೆ ನೀಡಿದ್ದರು. ಸೂರಜ್ನ ಕುಟುಂಬದವರು ಅವರ ಸಹೋದ್ಯೋಗಿಗಳಲ್ಲಿ ಒಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜಾರ್ಖಂಡ್ನಲ್ಲಿದ್ದಾಗ ಸೂರಜ್ಗೆ ಒಂದೇ ದಿನ 13 ಬಾರಿ ಅವರು ಕರೆ ಮಾಡಿದ್ದರು ಎಂದು ಹೇಳಿದ್ದಾರೆ. ಮೂರು ತಿಂಗಳ ಬಳಿಕ ಸೂರಜ್ ಮದುವೆಯಾಗಬೇಕಿತ್ತು. ವ್ಯಕ್ತಿಯು ಸಾಯುವ ಮೊದಲು ನೀಡಿದ ಹೇಳಿಕೆಯನ್ನು ಪೊಲೀಸರು ಮುಖ್ಯ ಸಾಕ್ಷಿಯನ್ನಾಗಿ ಪರಿಗಣಿಸುತ್ತಾರೆ. ಆದರೆ ಸೂರಜ್ ಹೇಳಿದ್ದಕ್ಕೂ ತನಿಖೆಯಲ್ಲಿ ಸಿಕ್ಕ ಪುರಾವೆಗಳಿಗೂ ತಾಳೆಯಾಗುವುದಿಲ್ಲ.
ಬಾಡಿಗೆ ಕೇಳಿದ್ದಕ್ಕೆ ನಿವೃತ್ತ ಉಪ ತಹಶೀಲ್ದಾರ್ ಹತ್ಯೆ: ಕೊಲೆಗೆ ಸಾಥ್ ನೀಡಿದ 75 ವರ್ಷದ ಅಜ್ಜಿ ಸೆರೆ !