ಚಪ್ಪಲಿ ಹಾರ ಹಾಕಿ, ಮೆರವಣಿಗೆ ಮಾಡಿದರಷ್ಟೇ ಸೋನು ನಿಗಂ ಗೆ 10 ಲಕ್ಷ!
ಆಜಾನ್ ಕುರಿತ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಖ್ಯಾತ ಗಾಯಕ ಸೋನು ನಿಗಂ ತಲೆ ಬೋಳಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ!
ಮುಂಬೈ, ಏಪ್ರಿಲ್ 19: ಟ್ವೀಟ್ ವಿವಾದಕ್ಕೆ ಸಂಬಂಧಿಸಿದಂತೆ ಸೋನು ನಿಗಂ ತಲೆ ಬೋಳಿಸಿಕೊಂಡೂ ಮೌಲ್ವಿಗೆ ಸಡ್ಡು ಹೊಡೆದಿದ್ದಾಯ್ತು. ಇಷ್ಟಕ್ಕೇ ಈ ವಿವಾದ ಅಂತ್ಯಗೊಂಡಿತು ಎಂದು ನೀವೇನಾದರೂ ಭಾವಿಸಿದ್ದರೆ ನಿಮ್ಮ ಊಹೆ ಖಂಡಿತ ತಪ್ಪು. ಸೋನು ನಿಗಂ ತಲೆಬೋಳಿಸಿಕೊಂಡು, ಪ್ರೆಸ್ ಮೀಟ್ ಮಾಡಿ ಮುಗಿಸಿದ ಸುದ್ದಿ ತಿಳಿಯುತ್ತಲೇ ಇತ್ತ ಮೌಲ್ವಿ ಮಾತಿಗೆ ಶುರುವಿಟ್ಟಿದ್ದಾರೆ.
ಕೇವಲ ತಲೆ ಬೋಳಿಸಿಕೊಂಡರೆ ಮುಗಿಯಲಿಲ್ಲ, ತಾವು ಹಾಕಿದ ಮೂರು ಶರತ್ತುಗಳಲ್ಲಿ ಒಂದು ಮಾತ್ರ ಪೂರ್ಣವಾಗಿದೆ, ಇನ್ನೆರಡನ್ನೂ ಪಾಲಿಸಿದರೆ ಮಾತ್ರ 10 ಲಕ್ಷ ರೂ. ನೀಡುತ್ತೇವೆ ಎಂದು ಮೌಲ್ವಿ ಹೇಳಿದ್ದಾರೆ.
ತಲೆ ಬೋಳಿಸುವುದು, ಹರಿದ ಚಪ್ಪಲಿ ಹಾರ ಹಾಕುವುದು, ದೇಶದ ತುಂಬ ಮೆರವಣಿಗೆ ಮಾಡುವುದು... ಈ ಮೂರು ಶರತ್ತನ್ನು ಪಾಲಿಸಿದರೆ ಹತ್ತು ಲಕ್ಷ ರೂ. ನೀಡುತ್ತೇವೆ ಎಂದು ಮೌಲ್ವಿ ಪ್ರತಿಸವಾಲೆಸೆದಿದ್ದಾರೆ.
ಸದ್ಯಕ್ಕೆ ಈ ವಿವಾದಕ್ಕೆ ಸಂಬಂಧಿಸಿದಂತೆ ಹರ್ಯಾಣದ ಠಾಣೆಯೊಂದರಲ್ಲಿ ಸೋನು ನಿಗಂ ವಿರುದ್ಧ ಐಪಿಸಿ ಸೆಕ್ಷನ್ 294, 295, 295A, 296, 500, 501 ಅಡಿಯಲ್ಲಿ (ಸಾರ್ವಜನಿಕವಾಗಿ ಅಸಭ್ಯ ವರ್ತನೆ, ಪರಧರ್ಮ ನಿಂದನೆ ಇತ್ಯಾದಿ) ದೂರು ದಾಖಲಿಸಲಾಗಿದೆ. ಇದಕ್ಕೆ ಸೋನು ನಿಗಂ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು!
ಆಜಾನ್ (ಮುಸ್ಲಿಮರು ಬೆಳಗ್ಗೆ ಮಾಡುವ ನಮಾಜು) ಕುರಿತು ಖ್ಯಾತ ಗಾಯಕ ಸೋನು ನಿಗಂ ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ತಲೆ ಬೋಳಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ! ಇಂದು ಪತ್ರಿಕಾ ಗೋಷ್ಠಿ ನಡೆಸಿದ ಅವರು ತಾವು ಏಪ್ರಿಲ್ 17 ರಂದು ಟ್ವೀಟ್ ಮಾಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಅವರ ಟ್ವೀಟ್ ಗೆ ಮುಸ್ಲಿಂ ಸಮುದಾಯದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಸೋನು ನಿಗಂ ವಿರುದ್ಧ ಈ ಸಂಬಂಧ ಫತ್ವಾ ಹೊರಡಿಸಿದ್ದ ಸಯ್ಯದ್ ಶಾ ಅತಿಫ್ ಅಲಿ ಅಲ್ ಖೈದರಿ ಸೋನು ನಿಗಂ ತಲೆ ಬೋಳಿಸಿ, ಆತನ ಕೊರಳಿಗೆ ಹರಿದ ಚಪ್ಪಲಿ ಹಾರ ಹಾಕಿ ದೇಶದಲ್ಲಿ ಮೆರವಣಿಗೆ ಮಾಡಿಸಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಈ ಫತ್ವಾವನ್ನು ಸೋನು ನಿಗಂ 'ಗೂಂಡಾಗಿರಿ' ಎಂದು ಕರೆದಿದ್ದರು.[ನಾನು ಮುಸ್ಲಿಂ ಅಲ್ಲ ಅಜಾನ್ ಸಮಯಕ್ಕೆ ಏಕೆ ಎಚ್ಚರಗೊಳ್ಳಲಿ: ಸೋನು ನಿಗಮ್]
ಇದಾದ ನಂತರ, "ಇಂದು ಮಧ್ಯಾಹ್ನ 2 ಗಂಟೆಗೆ ಫತ್ವಾ ಹೊರಡಿಸಿದವರು ನನ್ನ ಜಾಗಕ್ಕೆ ಬಂದು, ನನ್ನ ತಲೆ ಬೋಳಿಸಲಿ, 10 ಲಕ್ಷ ರೂಗಳನ್ನು ಸಿದ್ಧಪಡಿಸಿಕೊಳ್ಳಿ" ಎಂದು ಸೋನು ನಿಗಂ ಸವಾಲೆಸೆದಿದ್ದರು.
ತಮ್ಮ ಮಾತನ್ನು ಸಮರ್ಥಿಸಿಕೊಂಡ ಸೋನು ನಿಗಂ ಇಂದು ತಲೆಬೋಳಿಸಿಕೊಂಡಿದ್ದಲ್ಲದೆ, ತಮ್ಮ ಮಾತು ಸಾಮಾಜಿಕ ಕಳಕಳಿಯದ್ದಾಗಿತ್ತೇ ವಿನಃ ಧಾರ್ಮಿಕ ದುರುದ್ದೇಶದ್ದಾಗಿರಲಿಲ್ಲ ಎಂದಿದ್ದಾರೆ.