ಮರಗಳ ಆಕ್ರಂದನ ಕೇಳಿ ಮುಂಬೈಯಲ್ಲಿ ಮಧ್ಯರಾತ್ರಿ ಬೀದಿಗಿಳಿದ ಜನ...
ಮುಂಬೈ, ಅಕ್ಟೋಬರ್ 05: ವಾಣಿಜ್ಯ ನಗರಿಯ ಬಿಡುವಿಲ್ಲದ ಬದುಕಿಗೆ ಅಲ್ಪವಿರಾಮ ನೀಡಿ ಆಗಷ್ಟೇ ಕಣ್ಮುಚ್ಚಿದ ಮುಂಬೈಯ ಆರೆ ಕಾಲನಿಯ ಜನರಿಗೆ ಇನ್ನೇನು ನಿದ್ದೆಹತ್ತಬೇಕು.
ರಸ್ತೆಯಲ್ಲಿ ಓಡಾಡುವ ವಾಹನಗಳ ಸದ್ದನ್ನೂ ಸೀಳಿಕೊಂಡು ಯಾವುದೋ ವಿಚಿತ್ರ ಸದ್ದು ಕಿವಿಗಡಚಿಕ್ಕುವಂತಾಗಿತ್ತು.... ಕಣ್ಣುಜ್ಜಿಕೊಳಳ್ಳುತ್ತ ಹೊರಬಂದ ಕೆಲವರಿಗೆ ಆಘಾತ ಕಾದಿತ್ತು.... ಇಷ್ಟು ದಿನ ತಮಗೆ ಉಸಿರುನೀಡಿದ್ದ ಹಸಿರು ಮರಗಳೆಲ್ಲ ಧರೆಗುರುಳಿದ್ದವು, ಕಳ್ಳರ ಹಾಗೆ ಬಂದು ಮುಂಬೈ ಮೆಟ್ರೋ ಕಾರ್ಪೋರೇಶನ್ ನ ಸಿಬ್ಬಂದಿ ಮರಗಳನ್ನು ನಿರ್ಭಾವುಕವಾಗಿ ಕಡಿದು, ಉರುಳಿಸುತ್ತಿದ್ದರು. ಅವ್ರೇನು ಮಾಡ್ತಾರೆ, ಮೇಲದಿಕಾರಿಗಳಿಂದ ಆದೇಶ ಬಂದಮೇಲೆ!
ಹೌದು, ಮುಂಬೈ ಮೆಟ್ರೋ ನಿಲ್ದಾಣಕ್ಕೆ ಕಾರ್ ಶೆಡ್ ನಿರ್ಮಿಸುವ ಸಲುವಾಗಿ ಅರೆ ಕಾಲನಿಯಲ್ಲಿರುವ 2500 ಮರಗಳನ್ನು ಕಡಿಯಲು ಎಂಎಂಆರ್ ಸಿ ಮುಂದಾಗಿತ್ತು. ಶುಕ್ರವಾರ ರಾತ್ರಿ ಕೆಲವು ಮರಗಳನ್ನು ಕೆಡವಿದ ಎಂಎಂಆರ್ ಸಿ ಸಿಬ್ಬಂದಿ ವಿರುದ್ಧ ಎದ್ದ ಪ್ರತಿಭಟನೆಯಿಂದಾಗಿ ಮರ ಕಡಿಯುವುದ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ ಮರ ಕಡಿಯುವುದಕ್ಕೆ ಕೋರ್ಟೇ ಅನುಮತಿ ನೀಡಿದ್ದು, ಮತ್ತು ಸರ್ಕಾರವೇ ಆದೇಶ ನೀಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಪರಿಸರವಾದಿಗಳು ಮಾತ್ರವಲ್ಲದೆ, ಜನಸಾಮಾನ್ಯರೂ ಈ ನಡೆಯನ್ನು ವಿರೋಧಿಸಿ, ಮಧ್ಯರಾತ್ರಿ ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆ. ಆದರೆ ಪೊಲೀಸ್ ಬಿಗಿಬಂದೋಬಸ್ತ್ ನಡುವೆ ಮರ ಕಡಿಯುವುದಕ್ಕೆ ಎಂಎಂಆರ್ ಸಿ ಮುಂದಾಗಿದ್ದು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗುತ್ತಿದೆ. ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದ 38 ಕ್ಕೂ ಹೆಚ್ಚು ಜನರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.

ಏನಿದು ಪ್ರಕರಣ?
ಮುಂಬೈಯ ಅರೆ ಕಾಲೋನಿಯಲ್ಲಿ ನಿರ್ಮಿಸಲಾಗುತ್ತಿರುವ ಮೆಟ್ರೋ ಕಾರ್ ಶೆಡ್ ಡಿಪೋಕ್ಕಾಗಿ ಒಟ್ಟು 2500 ಮರಗಳನ್ನು ಕಡಿಯಲು ಮುಂಬೈ ಮೆಟ್ರೋ ರೈಲ್ ಕಾರ್ಪೋರೇಶನ್ ಮುಂದಾಗಿತ್ತು. ಆದರೆ ಇದನ್ನು ವಿರೋಧಿಸಿ ಕೆಲವು ಪರಿಸರವಾದಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಮಹಾರಾಷ್ಟ್ರ ಹೈಕೋರ್ಟ್ ಮರಗಳನ್ನು ಅಕ್ಟೋಬರ್ 4 ರಂದು ತಿರಸ್ಕರಿಸಿತು. ಈ ಮೂಲಕ ಮರಕಡಿಯಲು ಅನುಮತಿ ನೀಡಿತು.

ಕಳ್ಳರಂತೆ ಬಂದ ಎಂಎಂಆರ್ ಸಿ ಸಿಬ್ಬಂದಿ!
ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸುತ್ತಿದ್ದಂತೆಯೇ ಮುಂಬೈ ಮೆಟ್ರೋ ರೈಲ್ ಕಾರ್ಪೋರೇಶನ್ ಶುಕ್ರವಾರ ರಾತ್ರಿಯೇ ಮರಕಡಿಯಲು ಆದೇಶಿಸಿತು. ಕೋರ್ಟ್ ಆದೇಶವನ್ನು ಪಾಲಿಸುವುದಾದರೂ ರಾತ್ರೋ ರಾತ್ರಿ ಅಷ್ಟು ತರಾತುರಿಯಲ್ಲಿ ಕಳ್ಳರಂತೆ ಬಂದು ಮರಕೆಡವಿದ್ದು ಯಾಕೆ? ಅದೂ ಮರ ಕಡಿಯುವುದಕ್ಕೆ ಪೊಲೀಸರ ಬಿಗೋಬಂದೋಬಸ್ತಿನ ಅಗತ್ಯವೇನಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ರಾತ್ರಿಯೇ ಮರಕೆಡವಲು ಕಾರಣ?
ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ನಿಯಮಗಳ ಪ್ರಕಾರ ಕೋರ್ಟ್ ಆದೇಶವನ್ನು ಯಾವುದೇ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿದ 15 ದಿನಗಳ ನಂತರವಷ್ಟೇ ಜಾರಿಗೆ ತರಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಕೋರ್ಟ್ ಆದೇಶ ಬಂದಿದ್ದೇ ಅಕ್ಟೋಬರ್ 4, ಶುಕ್ರವಾರದಂದು. ಶುಕ್ರವಾರ ಸಂಜೆಯ ಹೊತ್ತಿಗೆ ವೆಬ್ ಸೈಟ್ ನಲ್ಲಿ ಕೋರ್ಟ್ ಆರ್ಡರ್ ಅನ್ನು ಪೋಸ್ಟ್ ಮಾಡಿ, ಅಂದೇ ರಾತ್ರಿ ಸಿಬ್ಬಂದಿ ಮರಕಡಿಯಲು ಮುಂದಾಗಿದ್ದು ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಸಮರ್ಥಿಸಿಕೊಂಡ ಮೆಟ್ರೋ ಮ್ಯಾನೇಜಿಂಗ್ ಡೈರೆಕ್ಟರ್
ಈ ಕುರಿತು ಪ್ರತಿಕ್ರಿಯೆ ನೀಡಿದ್ ಮುಂಬೈ ಮೆಟ್ರೋ ರೈಲ್ ಕಾರ್ಪೋರೇಶನ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅಶ್ವಿನಿ ಭಿಂಡೆ, " 15 ದಿನಗಳ ನೋಟಿಸ್ ಮೊದಲೇ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಬೇಕು ಎಂಬ ಆಧಾರರಹಿತ ವದಂತಿ ಹಬ್ಬಿಸಲಾಗಿದೆ. ಆದರೆ ವೃಕ್ಷ ಪ್ರಾಧಿಕಾರದ ಆದೇಶ ಬಿಡುಗಡೆಯಾಗಿದ್ದು ಸೆಪ್ಟೆಂಬರ್ 13 ಕ್ಕೆ. ಅಂದೇ ವೆಬ್ ಸೈಟ್ ನಲ್ಲೂ ಅದನ್ನು ಪೋಸ್ಟ್ ಮಾಡಿದ್ದೇವೆ. ಸೆಪ್ಟೆಂಬರ್ 28 ಕ್ಕೆ ಅದು ಮುಗಿದಿದೆ. ಇದೀಗ ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೆವು ಅಷ್ಟೆ"

ಆದಿತ್ಯ ಠಾಕ್ರೆ, ಪ್ರಿಯಾಂಕ ಚತುರ್ವೇದಿ ವಿರೋಧ
ಸರ್ಕಾರ, ಕೋರ್ಟ್ ಮತ್ತು ಎಂಎಂಆರ್ ಸಿಯ ಈ ನಡೆಯನ್ನು ಖಂಡಿಸಿರುವ ಶಿವಸೇನೆ ಮುಖಂಡರಾದ ಆದಿತ್ಯ ಠಾಕ್ರೆ, ಪ್ರಿಯಾಂಕಾ ಚತುರ್ವೇದಿ, "ರಾತ್ರೋ ರಾತ್ರಿ ಪೊಲೀಸ್ ಭದ್ರತೆಯಲ್ಲಿ ಈ ಕೆಲಸ ಮಾಡುವ ಅಗ್ತಯವೇನಿತ್ತು? ಈ ವಿಷಯದಲ್ಲಿ ನಾವು ಮುಂಬೈ ಜನತೆಯ ಪರವಾಗಿದ್ದೇವೆ" ಎಂದಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದ ಪ್ರಿಯಾಂಕಾ ಚತುರ್ವೇದಿ ಅವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆಯೂ ನಡೆದಿದೆ.












Click it and Unblock the Notifications