ಪಿಗ್ಗಿ ಬಿದ್ದ ಮುಂಬೈ ಪೊಲೀಸರು, ಕಿಲಾಡಿ ಕೊಲೆಗಾರನ ಗ್ರೇಟ್ ಎಸ್ಕೇಪ್!
ನವೀ ಮುಂಬೈ ಪೊಲೀಸರು ಹಣದಾಸೆಗೆ ಮಾಡಿದ ಕೆಲಸಕ್ಕೆ ಅಮಾನತಾಗಿ ಮನೆಯಲ್ಲಿ ಕೂರುವಂತಾಗಿದೆ. ಕಿಲಾಡಿ ಕೊಲೆಗಾರ ತಪ್ಪಿಸಿಕೊಳ್ಳಲು ಹೂಡಿದ ಉಪಾಯಕ್ಕೆ ಪೊಲೀಸರು ಸರಿಯಾಗಿ ಪಿಗ್ಗಿ ಬಿದ್ದಿದ್ದಾರೆ
ಮುಂಬೈ, ಫೆಬ್ರವರಿ 15: ಇಂಥ ಮಜವಾದ ಘಟನೆಗಳನ್ನು ಸಿನಿಮಾದಲ್ಲಿ ನೋಡೋದಿಕ್ಕೆ ಸಾಧ್ಯವೇನೋ, ಆದರೆ ನವೀ ಮುಂಬೈ ಪೊಲೀಸರ ಹಣದಾಸೆಯಿಂದ ಹೀಗೆ ನಿಜ ಜೀವನದಲ್ಲೂ ಓದೋದಿಕ್ಕೆ ಸಿಕ್ಕಿದೆ. ಹನುಮಂತ ಸದಾಶಿವ ಪಾಟಿಲ್ ಅಲಿಯಾಸ್ ಪ್ರೇಮ್ ನ 2013ರಲ್ಲಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಕಳೆದ ಹದಿನೆಂಟು ತಿಂಗಳಿಂದ ಅತ ಜೈಲಿನಲ್ಲೇ ಇದ್ದಾನೆ. ಈಚೆಗೆ ತನಗೆ ಹುಷಾರಿಲ್ಲ ಅಂತ ಆತ ಅಲವತ್ತುಕೊಂಡಿದ್ದಕ್ಕೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಅವನ ಜೊತೆಗೆ ಹತ್ತು ಮಂದಿ ಪೊಲೀಸರೂ ಹೋಗಿದ್ದಾರೆ. ಆ ಮಹಾನ್ ಕಿಲಾಡಿ, ನಲವತ್ತು ಸಾವಿರ ರುಪಾಯಿ ಕೊಡ್ತೀನಿ. ಇಲ್ಲೇ ಹತ್ತಿರದ ಹೋಟೆಲ್ ನಲ್ಲಿ ನನ್ನ ಹೆಂಡತಿ ಇದ್ದಾಳೆ. ಅವಳ ಜೊತೆಗೆ ಸ್ವಲ್ಪ ಹೊತ್ತು ಕಳೆದು ಬರ್ತೀನಿ ಅಂದಿದ್ದಾನೆ.[ಕರುಣಾನಿಧಿ ಪತ್ನಿಗೆ ಆಟಿಕೆ ಪಿಸ್ತೂಲು ತೋರಿ ಬೆದರಿಸಿದ ಬೆಂಗಳೂರಿಗನ ಬಂಧನ]
ಅದಕ್ಕೆ ಒಪ್ಪಿರುವ ಪೊಲೀಸರು, ಮೂರು ಮಂದಿ ಆತನ ಜೊತೆಗೆ ಹೋಟೆಲ್ ಗೆ ಹೋಗಿದ್ದಾರೆ. ಒಬ್ಬರು ರೂಮಿನ ಹೊರಗೆ, ಮತ್ತಿಬ್ಬರು ಹೋಟೆಲ್ ನ ಹೊರಗೆ ಅತನಿಗಾಗಿ ಕಾಯುತ್ತಾ ನಿಂತಿದ್ದಾರೆ. ಇತ್ತ ರೂಮಿಗೆ ಹೋದವನೇ ಕಿಟಕಿ ಜಿಗಿದು ಪರಾರಿಯಾಗಿದ್ದಾನೆ ಹನುಮಂತ್ ಸದಾಶಿವ ಪಾಟೀಲ್. ಅದನ್ನು ಕೂಡ ಹೋಟೆಲ್ ಮ್ಯಾನೇಜರ್ ಬಂದು ಈ ಪೊಲೀಸರಿಗೆ ಹೇಳಿದ ಮೇಲೆ ಗೊತ್ತಾಗಿದೆ.[ವಿಮಾನ ನಿಲ್ದಾಣಕ್ಕೆ ಸುಳ್ಳು ಬಾಂಬ್ ಕರೆ, ನಿಶ್ಚಿತಾರ್ಥದ ಜೋಡಿಯ ಕಿಲಾಡಿ ಐಡಿಯಾ]
ಇನ್ನೆಲ್ಲಿ ತಮ್ಮ ತಲೆಗೆ ಬರುತ್ತೋ ಎಂದು ಆಸ್ಪತ್ರೆಯಿಂದಲೇ ಆರೋಪಿ ನಾಪತ್ತೆಯಾಗಿದ್ದಾನೆ ಎಂದು ಕಥೆ ಹೊಸೆದಿದ್ದಾರೆ ಪೊಲೀಸರು. ಆದರೆ ಇವರೆಲ್ಲರೂ ಬಂದಿದ್ದು, ಆತನಿಗಾಗಿ ಕಾಯುತ್ತಾ ಕೂತಿದ್ದು ಹೋಟೆಲ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆರೋಪಿ ಕಾವಲಿಗೆ ಹತ್ತು ಪೊಲೀಸರನ್ನು ಕಳಿಸಿದ್ದರಲ್ಲಾ, ಅವರೆಲ್ಲರನ್ನೂ ಅಮಾನತು ಮಾಡಲಾಗಿದೆ.